ಅಂಬಿಕಾ ಸಿ.ಬಿ.ಎಸ್.ಇ ಯಲ್ಲಿ 2023-24ನೇ ಸಾಲಿನ ಪೂರ್ವಪ್ರಾಥಮಿಕ ಹಂತದ ಮೊದಲ ಪೋಷಕರ ಸಭೆ

0

ಪುತ್ತೂರು: ಪೋಷಕರು ತಮ್ಮ ಮಕ್ಕಳಿಗೆ ಧನಾತ್ಮಕ ಚಿಂತನೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿ ಪ್ರೋತ್ಸಾಹಿಸಬೇಕು. ಮಕ್ಕಳು ತಪ್ಪು ಮಾಡಿದಾಗ ಅದನ್ನು ನಕಾರಾತ್ಮಕವಾಗಿ  ಪರಿಗಣಿಸದೆ ಆ ತಪ್ಪನ್ನು ತಿದ್ದಿ ಸನ್ನಿವೇಶವನ್ನು  ನಿಭಾಯಿಸಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಅಂಬಿಕಾ ಸಿ.ಬಿ.ಎಸ್.ಇ ಶಾಲೆಯ  ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಇವರು ಶನಿವಾರ ನಡೆದ 2023 -24 ನೇ ಸಾಲಿನ ಪೂರ್ವ ಪ್ರಾಥಮಿಕದ (L. K. G) ವರ್ಷದ ಮೊದಲ ಪೋಷಕರ ಸಭೆಯಲ್ಲಿ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲಾ ಹಂತ ಅಂದರೆ ಮೂರು, ನಾಲ್ಕು ವರ್ಷದ ಎಳೆಯ ಮಕ್ಕಳು. ಇವರ ಸ್ವಭಾವ, ವರ್ತನೆ, ಕಲಿಕೆ ಹೇಗೆ ಎಂದರೆ ನೋಡಿ ಕಲಿಯುತ್ತಾರೆ. ಇದು ನೋಡಿ ಕಲಿಯುವ ಹಂತವಾಗಿದೆ, ಹಾಗಾಗಿ ಮಕ್ಕಳು ಎಲ್ಲವನ್ನು ನೋಡಿ ಕಲಿಯುತ್ತಾರೆ. ಹಾಗಾದ ಕಾರಣ ಪೋಷಕರು ಮಕ್ಕಳಿಗೆ ಆದರ್ಶವಾಗಿರಬೇಕು. ನಮ್ಮ ನಡೆ, ನುಡಿಗಳಲ್ಲಿ ನಾವು ಜಾಗೃತವಾಗಿರಬೇಕು ಎಂದು ಕಿವಿಮಾತು ಹೇಳಿದರು. ಜೊತೆಗೆ ಪೂರ್ವ ಪ್ರಾಥಮಿಕ ತರಗತಿ ಚಟುವಟಿಕೆಗಳ ಕುರಿತು ಸ್ಥೂಲ ವಿವರಣೆ ನೀಡಿದರು.

ಈ ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ನಟ್ಟೋಜರು, ಮಗು ಒಂದು ದೀಪದ ಹಾಗೆ ಅದು ಸಮಾಜವನ್ನು ಬೆಳಗುವಂತಹ ದೀಪವಾಗಿ ಬೆಳೆಸಬೇಕು. ನಮ್ಮನ್ನು ಮುಂದೆ ನೋಡಿಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಮಕ್ಕಳನ್ನು ಬೆಳೆಸುವುದಲ್ಲ ನಮ್ಮ ದೇಶಕ್ಕೆ, ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬೇಕು. ರಾಷ್ಟ್ರ ಸೇವೆಗೆ ಮಗುವನ್ನು ತಯಾರು ಮಾಡಬೇಕು ಎಂಬ ಉದ್ದೇಶಕ್ಕಾಗಿ ಮಕ್ಕಳನ್ನು ಬೆಳೆಸಬೇಕು. ಮುಖ್ಯವಾಗಿ ಮೌಲ್ಯ, ಆಚಾರ-ವಿಚಾರ ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ‘ಎ ಬಿ ಸಿ ಡಿ’ ಮಾತ್ರವಲ್ಲ, ನಮ್ಮ ದೇಶಕ್ಕೆ ಸೇವೆ ಸಲ್ಲಿಸಿದವರಿಗೆ ಗೌರವ ಸೂಚಿಸುವುದು, ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದು ನಮ್ಮ ಪುರಾಣ ಕಥೆಗಳ ಮೌಲ್ಯವನ್ನು ತಿಳಿದುಕೊಳ್ಳುವುದು ಇವೆಲ್ಲವೂ ಶಿಕ್ಷಣದ ಜೊತೆಯಾದಾಗ ಮಾತ್ರ ನಾವೊಂದು ಒಳ್ಳೆಯ ಮಗುವನ್ನು ಸಮಾಜಕ್ಕೆ ನೀಡಲು ಸಾಧ್ಯ, ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರ ನಡುವಿನ ಸಂಬಂಧ ಉತ್ತಮವಾಗಿದ್ದರೆ ಎಲ್ಲವೂ ಸಾಧ್ಯ ಎಂದು ತಿಳಿಸಿದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಶ್ರೀಮತಿ ರಾಜಶ್ರೀ ನಟ್ಟೋಜರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಮಾಲತಿ.ಡಿ. ಭಟ್ ಸ್ವಾಗತಿಸಿ, ಶಿಕ್ಷಕಿ ಕುಮಾರಿ ಶ್ರುತಿ ಶೆಟ್ಟಿ ವಂದಿಸಿ, ಶ್ರೀಮತಿ  ಶೈಲಶ್ರೀ  ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here