ತೆಕ್ಕಾರು ಗ್ರಾ.ಪಂ. ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ ಸಲ್ಲಿಸುವ ಬ್ಯಾನರ್ ಅಳವಡಿಕೆ ಪ್ರಕರಣ

0

ತೆರವುಗೊಳಿಸಲು ನೊಟೀಸ್ ಜಾರಿ ಮಾಡಿದ ಪಿಡಿಓ, ಸ್ವಚ್ಛತಾ ಸಿಬ್ಬಂದಿಯ ಮಾನಭಂಗ ಯತ್ನ, ಹಲ್ಲೆ, ದರೋಡೆ
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಕೇಸು ದಾಖಲು; ಗ್ರಾ.ಪಂ. ಸಿಬ್ಬಂದಿ ವಿರುದ್ಧ ಪ್ರತಿ ದೂರು

ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಸರಕಾರಿ ಸೊತ್ತು ನಾಶ ಮಾಡಿ ನಗದು ದರೋಡೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಲ್ಲದೆ ಮಾನಭಂಗಕ್ಕೆ ಯತ್ನಿಸಿದ ಆರೋಪದಡಿ ಗ್ರಾ.ಪಂ. ಸದಸ್ಯೆ ಸಹಿತ ಮೂವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಿಡಿಓ ಸುಮಯ್ಯರವರು ನೀಡಿದ ದೂರಿನಂತೆ ಗ್ರಾ.ಪಂ. ಸದಸ್ಯೆ ಯಮುನಾ, ಯಮುನಾರವರ ಪುತ್ರ ನವೀನ್ ನಾಯ್ಕ್ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಸಾಲಿಯಾನ್ ವಿರುದ್ಧ ಪೊಲೀಸರು ಐಪಿಸಿ 109, 504, 323, 506, 354, 353, 392, 34, 2(0) ದಂಡ ಸಂಹಿತೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಪಿಡಿಓ ದೂರು-ಕೇಸು ದಾಖಲು:
ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್‌ಗೆ ಸೇರಿದ ವಿವಾದಿತ ಕಟ್ಟಡವನ್ನು ಸ್ಥಳೀಯ ಯಮುನಾರವರು ಅತಿಕ್ರಮಿಸಿಕೊಂಡು ನೆಲೆಸಿರುವ ಬಗ್ಗೆ ಈಗಾಗಲೇ ವ್ಯಾಜ್ಯ ಇದೆ. ಅದೇ ವಿವಾದಿತ ಕಟ್ಟಡದಲ್ಲಿ ಶಾಸಕ ಹರೀಶ್ ಪೂಂಜ ಅವರು ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾಗಿರುವ ಬಗ್ಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಲಾಗಿದೆ. ಅದನ್ನು ತೆರವುಗೊಳಿಸುವಂತೆ ಗ್ರಾ.ಪಂ. ಪಿಡಿಓ ಸುಮಯ್ಯರವರ ಸೂಚನೆಯಂತೆ ಸ್ವಚ್ಛತಾ ಸಿಬ್ಬಂದಿ ಪ್ರಮೀಳಾರವರು ಯಮುನಾರವರ ಮನೆಗೆ ಹೋಗಿ ಅವರಿಗೆ ನೋಟೀಸು ಜಾರಿಗೊಳಿಸಿ ಸ್ವೀಕೃತಿ ಪಡೆದು ಪಂಚಾಯತ್ ಕಛೇರಿಗೆ ಮರಳಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಯಮುನಾ ಮತ್ತು ಅವರ ಪುತ್ರ ನವೀನ್ ನಾಯ್ಕ ಅವರು ಮಂಜುನಾಥ ಸಾಲಿಯಾನ್ ಎಂಬವರ ಕುಮ್ಮಕ್ಕಿನಿಂದ ಪಂಚಾಯತ್ ಕಛೇರಿಗೆ ಬಂದು ಸ್ವೀಕೃತಿ ಪತ್ರ ಮರಳಿ ನೀಡುವಂತೆ ಒತ್ತಾಯಿಸಿ ಜಗಳ ಮಾಡಿದ್ದಾರೆ. ಸ್ವಚ್ಛತಾ ಸಿಬ್ಬಂದಿ ಪ್ರಮೀಳಾರವರ ಮೇಲೆ ಕೈ ಮಾಡಿದ್ದಾರೆ. ಪಿಡಿಒ ಸುಮಯ್ಯ ಮತ್ತು ಸ್ವಚ್ಛತಾ ಸಿಬ್ಬಂದಿ ಪ್ರಮೀಳಾರವರ ಮೇಲೆ ಹಲ್ಲೆ ನಡೆಸಿ ದೇಹದ ಭಾಗಗಳ ಮೇಲೆ ಕೈ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ. ಅಲ್ಲದೆ ಸರಕಾರಿ ಸೊತ್ತಾಗಿರುವ ಗ್ರಾಮ ಪಂಚಾಯತ್‌ನ ಮೊಬೈಲ್ ಫೋನ್ ಅನ್ನು ಪಿಡಿಒ ಅವರಿಂದ ಕಿತ್ತುಕೊಂಡು ನೆಲಕ್ಕೆ ಅಪ್ಪಳಿಸಿ ಹಾನಿ ಮಾಡಿದ್ದಾರೆ. ಪಂಚಾಯತ್ ಕಛೇರಿಯಲ್ಲಿದ್ದ ಸರಕಾರಿ ಹಣ 3000 ಸಾವಿರವನ್ನು ದೋಚಿ ಓಮ್ನಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಗ್ರಾಮ ಪಂಚಾಯತ್ ಎಟೆಂಡರ್ ಹುದ್ದೆ ಖಾಲಿ ಇರುವುದರಿಂದ ಪಿಡಿಒ ಸುಮಯ್ಯರವರ ನಿರ್ದೇಶನದ ಮೇರೆಗೆ ಸ್ವಚ್ಚತಾಗಾರ್ತಿ ಪ್ರಮೀಳಾರವರು ನೋಟೀಸು ನೀಡುವ ಕರ್ತವ್ಯ ಮಾಡಿ ಬಂದಿದ್ದರು.

ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ವಿರುದ್ಧ ಜಾತಿನಿಂದನೆಯ ದೂರು:
ತೆಕ್ಕಾರು ಗ್ರಾಮ ಪಂಚಾಯತ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪ್ರತಿ ದೂರು ನೀಡಲಾಗಿದೆ. ಸ್ವಚ್ಛತಾ ಸಿಬ್ಬಂದಿ ಪ್ರಮೀಳಾ ವಿರುದ್ಧ ಜಾತಿನಿಂದನೆ ಮಾಡಿರುವ ಆರೋಪ ಹೊರಿಸಿ ಯಮುನಾರವರು ದೂರು ನೀಡಿದ್ದು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಘಟನೆಗೆ ಸಂಬಂಧಿಸಿ ಗ್ರಾಮ ಪಂಚಾಯತ್ ಕಛೇರಿಗೆ ಆಗಮಿಸಿರುವ ಪೊಲೀಸರು ಮಹಜರು ನಡೆಸಿದ್ದಾರೆ.

ಆರೋಪಿಗಳ ಬಂಧನಕ್ಕೆ ಆಗ್ರಹ:
ಗ್ರಾ.ಪಂ. ಸಿಬ್ಬಂದಿಗಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳಾದ ಯಮುನಾ, ನವೀನ್ ನಾಯ್ಕ ಮತ್ತು ಮಂಜುನಾಥ ಸಾಲಿಯಾನ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ತನಕ ತೆಕ್ಕಾರು ಪಂಚಾಯತ್ ಗ್ರಾಮ ಪಂಚಾಯತ್ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಗ್ರಾಮ ಪಂಚಾಯತ್ ಕಚೇರಿಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವ ಕುರಿತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಯವರಿಗೆ ತಿಳಿಸಲಾಗಿದ್ದು ನ್ಯಾಯ ಸಿಗದಿದ್ದಲ್ಲಿ ರಾಜ್ಯದ ಎಲ್ಲಾ ನೌಕರರನ್ನು ಸೇರಿಸಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಗ್ರಾಮ ಪಂಚಾಯತ್ ಸಿಬ್ಬಂದಿಯ ಮೇಲೆ ಮಾಡಿರುವ ಸುಳ್ಳು ಕೇಸುಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಿಬ್ಬಂದಿಗಳು ಆಗ್ರಹಿಸಿದ್ದಾರೆ. ಪಿಡಿಓ ಮತ್ತು ಸಿಬ್ಬಂದಿ ಮೇಲೆ ಮಾಡಲಾಗಿರುವ ದೌರ್ಜನ್ಯವನ್ನು ಖಂಡಿಸುವುದಾಗಿ ಹೇಳಿಕೆ ನೀಡಿರುವ ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿಯ ಅಧ್ಯಕ್ಷ ನಝೀರ್ ಬಾಜಾರುರವರು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here