ಉಪ್ಪಿನಂಗಡಿ: ಪ್ರವಾಹ ರಕ್ಷಣಾ ತಂಡ ಸನ್ನದ್ಧ

0

ಉಪ್ಪಿನಂಗಡಿ: ದ.ಕ. ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಹಾಗೂ ದ.ಕ. ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಅವರ ಸೂಚನೆಯಂತೆ ಮಳೆಗಾಲದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡ ರಚಿಸಲಾಗಿದೆ.

ಜಿಲ್ಲಾಡಳಿತ ಕೊಡಮಾಡಿದ ಕಾರ್ಯಾಚರಣೆಗೆ ಬಳಸುವ ರಬ್ಬರ್ ದೋಣಿ, ಇಂಜಿನ್, ಲೈಟ್ ಜಾಕೆಟ್, ಆಸ್ಕ ಲೈಟ್, ಮರಕತ್ತರಿಸುವ ಯಂತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಗೃಹರಕ್ಷಕದಳ ಪ್ರಭಾರ ಘಟಕಾಧಿಕಾರಿ ದಿನೇಶ್ ಅವರ ನೇತೃತ್ವದ ತಂಡದಲ್ಲಿ ಜನಾರ್ದನ ಆಚಾರ್ಯ, ಅಣ್ಣು, ಮಂಜುನಾಥ್ ಪ್ರಸಾದ್, ಸಮದ್, ಶಿವಪ್ರಸಾದ್, ಡೀಕಯ್ಯ, ಶಿಭುಜಾನ್ ಇದ್ದಾರೆ. ಇವರಲ್ಲಿ ಓರ್ವ ಎಲೆಕ್ಟ್ರಿಷಿಯನ್, ದೋಣಿ ಆಪರೇಟರ್, ಓರ್ವ ಪ್ಲಂಬರ್, ಇಬ್ಬರು ಈಜುಗಾರರು, ಸಹಾಯಕರುಗಳಾಗಿದ್ದಾರೆ. ಈ ತಂಡವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಉಪ್ಪಿನಂಗಡಿ ದೇವಾಲಯದ ಸ್ಥಾನ ಘಟ್ಟದ ಬಳಿ ದೋಣಿ, ರಕ್ಷಣಾ ಸಲಕರಣೆಯೊಂದಿಗೆ ಮೊಕ್ಕಾಂ ಇರಲಿದ್ದು, ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದರೆ ತೆರವುಗೊಳಿಸುವುದು ಹಾಗೂ ನೆರೆ ಬಂದ ಸಮಯದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆ ಕಾರ್ಯಗಳನ್ನು ನಡೆಸಲಿದೆ. ಈ ಪ್ರವಾಹ ರಕ್ಷಣಾ ತಂಡವು ಪುತ್ತೂರು ತಹಶೀಲ್ದಾರ್ ಅಧೀನದಲ್ಲಿದ್ದು ಕಂದಾಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಿದೆ. ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡರವರು ಈ ಪ್ರವಾಹ ರಕ್ಷಣಾ ತಂಡದ ಉಸ್ತುವಾರಿ ವಹಿಸಲಿದ್ದಾರೆ.


ತಂಡ ರಚನಾ ಸಂದರ್ಭ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಗ್ರಾಂ.ಪಂ. ಸದಸ್ಯೆ ವಿದ್ಯಾ ಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಶರೀಫ್, ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಯ ಎಸ್‌ಡಿಎಂಸಿ ಸದಸ್ಯರಾದ ಮೊಯ್ದೀನ್ ಕುಟ್ಟಿ, ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here