ನೈತಿಕ ಪೊಲೀಸ್‌ಗಿರಿ ತಡೆಯಲು ಆ್ಯಂಟಿ  ಕಮ್ಯುನಲ್ ವಿಂಗ್ ಮಂಗಳೂರಿನಲ್ಲಿ ಕಾರ್ಯಾರಂಭ

0

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೂಕ್ಷ್ಮ ಕರಾವಳಿ ನಗರ ಮಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣಗಳನ್ನು ತಡೆಯಲು ಕಾಂಗ್ರೆಸ್ ಸರ್ಕಾರ ರಚಿಸಿರುವ ಆ್ಯಂಟಿ ಕಮ್ಯುನಲ್ ವಿಂಗ್ (ಎಸಿಡಬ್ಲ್ಯು) ತನ್ನ ಕೆಲಸವನ್ನು ಪ್ರಾರಂಭಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್, ರಾಜ್ಯ ಗೃಹ ಸಚಿವರ ನಿರ್ದೇಶನದಂತೆ ಆ್ಯಂಟಿ  ಕಮ್ಯುನಲ್ ವಿಂಗ್ ಅನ್ನು ಎರಡು ದಿನಗಳ ಹಿಂದೆ ರಚಿಸಲಾಗಿದೆ ಎಂದು ಹೇಳಿದರು. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ|ಜಿ.ಪರಮೇಶ್ವರ ಅವರು ಎಸಿಡಬ್ಲ್ಯು ಸ್ಥಾಪನೆಯ ಘೋಷಣೆ ಮಾಡಿದ್ದರು. ಅದನ್ನು ಈಗ ಸ್ಥಾಪಿಸಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ ಇನ್ಸ್‌ಪೆಕ್ಟರ್ ಷರೀಫ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.‌ ಸಹಾಯಕ ಪೊಲೀಸ್ ಕಮಿಷನರ್ ಪಿ.ಎ. ಹೆಗಡೆ ತಂಡ ನಿಗಾ ವಹಿಸಲಿದ್ದು ಅವರು ನೇರವಾಗಿ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಲಿದ್ದಾರೆ. ಎಸಿಡಬ್ಲ್ಯು ಎಲ್ಲಾ ಕೋಮು ಪ್ರಕರಣಗಳು ಮತ್ತು ಅಂತಹ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ನಿಗಾ ಇಡುತ್ತದೆ. ಅವರ ಚಟುವಟಿಕೆಗಳನ್ನು ವೀಕ್ಷಿಸಲಾಗುವುದು. ಪ್ರಕರಣದಲ್ಲಿ ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.ಈ ಸಂಬಂಧ ನ್ಯಾಯಾಲಯಗಳಲ್ಲಿ ಹಿಂದಿನ ಪ್ರಕರಣಗಳನ್ನು ಸಹ ನೋಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಕಳೆದ 10 ವರ್ಷಗಳಲ್ಲಿ ವರದಿಯಾಗಿರುವ 200 ಪ್ರಕರಣಗಳ ಮೇಲೆ ತಂಡ ನಿಗಾ ವಹಿಸಲಿದೆ. ಕೋಮುಗಲಭೆ, ದ್ವೇಷ ಭಾಷಣಗಳು, ನೈತಿಕ ಪೊಲೀಸ್‌ಗಿರಿ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವುದು ಮತ್ತು ಗೋವು ಕಳ್ಳತನ ಸೇರಿದಂತೆ ಕೋಮುಗಲಭೆಗೆ ಪ್ರಚೋದನೆ ನೀಡುವ ಯಾವುದೇ ವಿಷಯಗಳ ಮೇಲೂ ತಂಡ ನಿಗಾ ಇಡಲಿದೆ. ಈ ಸಂಬಂಧದ ಯಾವುದೇ ಪ್ರಕರಣವನ್ನು ಮೊದಲು ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಲಾಗುವುದು ಮತ್ತು ಎಸಿಡಬ್ಲ್ಯುಗೆ ವರ್ಗಾಯಿಸಲಾಗುತ್ತದೆ. ನಂತರ ಆ ವಿಭಾಗದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here