ಸಖತ್ ಸೌಂಡ್ ಮಾಡುತ್ತಿರುವ ʼಬೇರ’ದಲ್ಲಿ ಪುತ್ತೂರಿನ ಪ್ರತಿಭೆ – ʼಖಾಸಿಂ’ ಪಾತ್ರದಲ್ಲಿ ಮಿಂಚಿದ ಪ್ರಸನ್ನ ಬಾಗಿನ

0

ಪುತ್ತೂರು: ಎಸ್.ಎಲ್.ವಿ.ಕಲರ್ಸ್ ಬ್ಯಾನರ್‌ನಡಿ ಉದ್ಯಮಿ ದಿವಾಕರ್ ದಾಸ್ ನೇರ್ಲಾಜೆ ನಿರ್ಮಾಣ ಮಾಡಿರುವ, ಖ್ಯಾತ ನಿರ್ದೇಶಕ ವಿನು ಬಳಂಜ ನಿರ್ದೇಶನದ ʼಬೇರ’ ಕನ್ನಡ ಸಿನಿಮಾ ಬಿಡುಗಡೆಗೊಂಡು ಭರ್ಜರಿ ಸದ್ದು ಮಾಡುತ್ತಿದೆ. ಕರಾವಳಿಯ ಬಹುತೇಕ ಪ್ರತಿಭೆಗಳು ನಟಿಸಿರುವ ಈ ಸಿನಿಮಾದಲ್ಲಿ ಪುತ್ತೂರು ಮೂಲದ ಪ್ರತಿಭೆ ಪ್ರಸನ್ನ ಬಾಗಿನ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಬೇರ ಸಿನಿಮಾದಲ್ಲಿ ʼಖಾಸಿಂʼ ಎನ್ನುವ ಪ್ರಮುಖ ಪಾತ್ರ ನಿರ್ವಹಿಸಿರುವ ಪ್ರಸನ್ನ ಬಾಗಿನ ನಟನೆಗೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.

ಪ್ರಸನ್ನ ಬಾಗಿನ ಅವರು ಈ ಹಿಂದೆಯೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿರುವ ಪ್ರತಿಭಾನ್ವಿತ ಕಲಾವಿದ. ಕರುನಾಡ ಚಕ್ರವರ್ತಿ, ನಟ ಶಿವರಾಜ್ ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಮಿಂಚಿದ್ದಾರೆ. ಇವರ ಕಾಂಬಿನೇಷನ್ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಕೆಜಿಎಫ್, ಮಫ್ತಿ, ಕಿರಿಕ್ ಪಾರ್ಟಿ ಸಹಿತ ಹಲವು ಸಿನಿಮಾಗಳ ಸಣ್ಣ ಪುಟ್ಟ ಪಾತ್ರಗಳೂ ಕೂಡ ಇವರ ನಟನಾ ಸಾಮರ್ಥ್ಯವನ್ನು ಎತ್ತಿ ಹಿಡಿದಿದೆ. ಕಿರುತೆರೆಯಲ್ಲೂ ತನಗೆ ಸಿಕ್ಕ ಅವಕಾಶಕ್ಕೆ ಸಮನಾದ ಪ್ರತಿಭೆ ಮೆರೆದಿರುವ ಪ್ರಸನ್ನ ಬಾಗಿನ, ಉದಯ ಟಿವಿಯ ಜೈ ಹನುಮಾನ್ ಧಾರವಾಹಿಯಲ್ಲಿ ನಿರ್ವಹಿಸಿದ ಬಾಲಹನುಮನ ತಂದೆಯ ಪಾತ್ರ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಝೀ ಕನ್ನಡದ ಉಘೇ ಉಘೇ ಮಾದೇಶ್ವರದಲ್ಲಿಯೂ ಗಮನೀಯ ಪಾತ್ರ ನಿರ್ವಹಿಸಿದ ಹಿರಿಮೆ ಇವರದಾಗಿದ್ದು, ಕಳೆದ ವರ್ಷ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ಪ್ರಮುಖ ಖಳನಾಯಕ ಜಾಗ್ರವನ ಪಾತ್ರ ಇವರಿಗೆ ವಿಶೇಷ ಪ್ರಸಿದ್ಧಿ ತಂದುಕೊಟ್ಟಿತ್ತು. ಆ ಬಳಿಕ ಅಪ್ಪು ನಟನೆಯ ಜೇಮ್ಸ್, ಶಿವಣ್ಣ ನಟನೆಯ ಬೈರಾಗಿಯಲ್ಲೂ ನಟಿಸಿದ್ದಾರೆ. ಜೊತೆಗೆ ಶಿವಣ್ಣನ 125ನೇ ಸಿನಿಮಾ ವೇದದಲ್ಲೂ ಪ್ರಮುಖ ಖಳನಾಯಕ`ನಂಜಪ್ಪ’ನ ಪಾತ್ರದಲ್ಲಿ ಮಿಂಚಿದ್ದಾರೆ. ಇದೀಗ ʼಬೇರʼ ಸಿನಿಮಾದ ಖಾಸಿಂ ಪಾತ್ರವೂ ಪ್ರೇಕ್ಷಕರ ಮನಗೆದ್ದಿದೆ.

ಅಂದಹಾಗೆ ಪ್ರಸನ್ನ ಬಾಗಿನ ಅವರು ಪುತ್ತೂರು ಬಪ್ಪಳಿಗೆ ನಿವಾಸಿ, ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದ ದಿ. ನಾರಾಯಣ ಗೌಡ ಹಾಗೂ ಭಾಗೀರಥಿ ದಂಪತಿಯ ಪುತ್ರ. ಇವರ ಸಹೋದರ ರಾಜ್‌ಗೋಪಾಲ್ ಸರಕಾರಿ ಕಚೇರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅಕ್ಕ ಚಂದ್ರಲೇಖ ದುಬೈನಲ್ಲಿ ಕಾಲೇಜೊಂದಲ್ಲಿ ರಿಜಿಸ್ಟ್ರಾರ್ ಆಗಿ ದ್ದಾರೆ. ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರೌಢ ಹಂತದವರೆಗಿನ ಶಿಕ್ಷಣ ಪಡೆದು ನಂತರ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿದ ಪ್ರಸನ್ನ ಬಾಗಿನ ಶಾಲಾ ಹಂತದಲ್ಲಿಯೇ ನಟನೆಯ ಕುರಿತಾಗಿ ಒಲವು ಇರಿಸಿಕೊಂಡವರು. ಕಾಲೇಜು ವ್ಯಾಸಂಗದ ಬಳಿಕ ಪುತ್ತೂರಿನ ಆರ್ವಿ ಇಂಟರ್‌ಗ್ರಾಫಿಕ್ಸ್ ನಲ್ಲಿ ಕೆಲ ಸಮಯ ಉದ್ಯೋಗದಲ್ಲಿದ್ದ ಇವರು, ಮೈಸೂರಿನ ವಿಪ್ರೋ ಸಂಸ್ಥೆಯಲ್ಲಿಯೂ ಕೆಲಸ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಪ್ರಸನ್ನ ಅವರ 6.3 ಎತ್ತರದ ಶರೀರವನ್ನು ಗಮನಿಸಿದ ಆಪ್ತರೊಬ್ಬರು ಸಿನಿಮಾದಲ್ಲಿ ಹೀರೋ ಆಗಬಹುದಲ್ವಾ ಎಂದು ತಲೆಗೆ ಹುಳಬಿಟ್ಟರಂತೆ. ಈ ಬಗ್ಗೆ ಆರಂಭದಲ್ಲಿ ತಲೆಕೆಡಿಸಿಕೊಂಡು ಸಿನಿಮಾ ಲೋಕಕ್ಕೆ ಕಾಲಿಟ್ಟ ಇವರು, ಕಳೆದ ಏಳು ವರ್ಷಗಳಿಂದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರ ಸಿನಿ ಜರ್ನಿ ಹೀಗೆಯೇ ಮುಂದುವರೆಯುತ್ತಿರಲಿ, ಇನ್ನಷ್ಟು ಪ್ರಮುಖ ಪಾತ್ರಗಳು ಇವರನ್ನು ಅರಸಿ ಬರಲಿ ಎನ್ನುವುದು ಸುದ್ದಿಯ ಆಶಯ.

LEAVE A REPLY

Please enter your comment!
Please enter your name here