ನೆಕ್ಕಿಲಾಡಿ: ಪುತ್ತಿಲ ಪರಿವಾರದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ, ಮತದಾರರಿಗೆ ಅಭಿನಂದನೆ

0

ಪುತ್ತೂರು: ಪುತ್ತಿಲ ಪರಿವಾರ 34 ನೆಕ್ಕಿಲಾಡಿ ಗ್ರಾಮ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಕೆ, ಸಾಧಕರಿಗೆ ಸನ್ಮಾನ ಮತ್ತು ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಜೂ. 18ರಂದು ನೆಕ್ಕಿಲಾಡಿಯ ಶಾಂತ ಸಭಾಭವನದಲ್ಲಿ ನಡೆಯಿತು.

ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಭೆಯಲ್ಲಿ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ‌ ಹಿಂದುತ್ವದ ಸಿದ್ಧಾಂತದೊಂದಿಗೆ ಸ್ಪರ್ಧಿಸಿದಾಗ ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪುತ್ತಿಲ ಪರಿವಾರದ 34 ನೆಕ್ಕಿಲಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಾಜೇಶ್ ಶಾಂತಿನಗರ‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಶಿವಾಜಿನಗರ, ಆದರ್ಶನಗರ ಶ್ರೀರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಪದ್ಮಯ್ಯ ಗೌಡ, ಉದ್ಯಮಿ ಕಿರಣ್ ಧರ್ಮಸ್ಥಳ ಮತ್ತು ಪುತ್ತೂರಿನ ಪುತ್ತಿಲ ಪರಿವಾರದ ಗೌರವ ಸಲಹೆಗಾರ ರಾಜ್ ಗೋಪಾಲ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿವಕುಮಾರ್ ಬಾರಿತ್ತಾಯ ಮತ್ತು ಸಚಿನ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ವಿನೀತ್ ಶಗ್ರಿತ್ತಾಯ ವಂದಿಸಿದರು. ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here