ಇಚ್ಲಂಪಾಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ, ಉಚಿತ ಕನ್ನಡಕ ವಿತರಣೆ

0

ನೆಲ್ಯಾಡಿ: ಶ್ರೀ ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಕೌಕ್ರಾಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ದುರ್ಗಾಂಬಾ ಅಲಂಕಾರು, ಜೆಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವರ ಸಹಯೋಗದೊಂದಿಗೆ ತಜ್ಞ ವೈದ್ಯರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡ ವಿತರಣೆ ಕಾರ್ಯಕ್ರಮ ಇಚ್ಲಂಪಾಡಿ ನೇರ್ಲ ಸರಕಾರಿ ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಜು.21ರಂದು ನಡೆಯಿತು.


ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶುಭಕರ ಹೆಗ್ಗಡೆಯವರು ಶಿಬಿರ ಉದ್ಘಾಟಿಸಿ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗಿದೆ. ಗ್ರಾಮೀಣ ಭಾಗದ ಜನರಿಗೆ ಇಂತಹ ಚಿಕಿತ್ಸಾ ಶಿಬಿರ ವರದಾನವಾಗಿದೆ ಎಂದರು. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಡಾ. ಅನಿಲ್ ರಾಮಾನುಜಂರವರು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಮನವಳಿಕೆಗುತ್ತುರವರು ಮಾತನಾಡಿ, ಜನರ ಸೇವೆಯೇ ಲಯನ್ಸ್ ಕ್ಲಬ್‌ನ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳ ಮೂಲಕ ಜನರಿಗೆ ನಿಜವಾದ ಸೇವೆಯನ್ನು ಕೊಟ್ಟಂತಾಗುತ್ತದೆ. ಈ ಮೂಲಕ ಅಂತರಾಷ್ಟ್ರೀಯ ಸಮಾಜ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್‌ನ ಧ್ಯೇಯೋದ್ದೇಶಗಳು ಸಾಕಾರಗೊಳ್ಳುತ್ತದೆ ಎಂದರು.

ನೆಲ್ಯಾಡಿ ಜೆಸಿಐ ಸಂಸ್ಥೆಯ ಅಧ್ಯಕ್ಷ, ನೆಲ್ಯಾಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಲಗುತ್ತುರವರು ಮಾತನಾಡಿ, ಕಳೆದ 15 ವರ್ಷಗಳಿಂದ ಅನೇಕ ಶಿಬಿರಗಳನ್ನು ಸಂಘಟಿಸಿ ಜನರಿಗೆ ಆರೋಗ್ಯ ಸೇವೆ ಮತ್ತು 48 ಕಣ್ಣಿನ ಶಿಬಿರಗಳ ಮೂಲಕ ಜನಪರ ಸೇವೆಯನ್ನು ಮಾಡಿದ ಗಂಗಾಧರ ಶೆಟ್ಟಿ ಹೊಸಮನೆಯವರ ಸೇವೆ ಸಾರ್ಥಕವಾಗಿದೆ. ಈ ಶಿಬಿರದಲ್ಲಿ ಜೆಸಿಐ ಸಂಸ್ಥೆಯೂ ತೊಡಗಿಸಿಕೊಂಡಿರುವುದು ಬಹಳಷ್ಟು ಸಂತೋಷ ತಂದಿದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಗೌಡ ಹಾರ್ಪಳ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಉದಯಕುಮಾರ್ ಗೌಡ ದೋಂತಿಲ, ರೋಯಿ ಟಿ.ಎಂ., ಶಾಲಾ ಮುಖ್ಯಗುರು ಜಯಶ್ರೀ, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಬಿಜೇರು, ಆನಂದಾಶ್ರಮ ಸೇವಾ ಟ್ರಸ್ಟ್‌ನ ಮುಖ್ಯಸ್ಥರಾದ ಸದಾಶಿವ ಪೈ ಉಪಸ್ಥಿತರಿದ್ದರು. ೪೮ನೇ ನೇತ್ರ ಚಿಕಿತ್ಸಾ ಶಿಬಿರದ ಸಂಘಟಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಂಗಾಧರ ಶೆಟ್ಟಿ ಹೊಸಮನೆಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆಯಾಗಿದೆ. ಇಚ್ಲಂಪಾಡಿಯಲ್ಲಿ ನಡೆದ ಈ ಶಿಬಿರ ಈ ಮಣ್ಣಿನ ದೈವ ದೇವರುಗಳ ಆಶೀರ್ವಾದದಿಂದ ಯಶಸ್ವಿಯಾಗಿದೆ. ಸರಕಾರದಿಂದ ನಡೆಸಲ್ಪಡುವ ಇಂತಹ ಶಿಬಿರಗಳು ಜನರ ನಂಬಿಕೆಯನ್ನು ಉಳಿಸಿಕೊಂಡಿದೆ ಎಂದರು. ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಸುಧೀರ್ ಕುಮಾರ್ ವಂದಿಸಿದರು. ನೂರಾರು ಶಿಬಿರಗಳ ಮೂಲಕ ಸಾವಿರಾರು ಜನರಿಗೆ ಉಚಿತ ಕನ್ನಡಕ ವಿತರಿಸಿ ಸಮಾಜ ಸೇವೆ ಮಾಡುತ್ತಿರುವ ಡಾ.ಗೌರಿ ಪೈಯವರ ಪರವಾಗಿ ಆನಂದಾಶ್ರಮ ಸೇವಾ ಟ್ರಸ್ಟ್‌ನ ಮುಖ್ಯಸ್ಥ ಸದಾಶಿವ ಪೈಯವರನ್ನು ಸನ್ಮಾನಿಸಲಾಯಿತು.

200ಕ್ಕೂ ಹೆಚ್ಚು ಮಂದಿಯಿಂದ ತಪಾಸಣೆ:
ಮಧ್ಯಾಹ್ನದ ತನಕ ನಡೆದ ಶಿಬಿರದಲ್ಲಿ 200ಕ್ಕೂ ಹೆಚ್ಚು ಸಾರ್ವಜನಿಕರು ಕಣ್ಣಿನ ತಪಾಸಣೆಯನ್ನು ಮಾಡಿಸಿಕೊಂಡರು. 15 ಜನ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು. ಶ್ರೀ ಆನಂದಾಶ್ರಮ ಸೇವಾ ಟ್ರಸ್ಟ್‌ನ ವತಿಯಿಂದ 180 ಮಂದಿಗೆ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು.

LEAVE A REPLY

Please enter your comment!
Please enter your name here