‘ಗುರು’ ಎಂದರೆ ಬೆಳಕು, ಜ್ಞಾನ, ತೇಜಸ್ಸು. ನಮ್ಮ ಬದುಕಿನಲ್ಲಿಯೂ ಇಂತಹ ಒಂದು ಅರಿವಿನ ಬೆಳಕು ಒಬ್ಬ ಸಹೃದಯಿ ಗುರುವಿನಿಂದ ದೊರೆತರೆ ಬಹುಶಃ ಎಲ್ಲರ ಬದುಕು ಪಾವನಬಹುದು. ಇಂತಹ ಒಂದು ಸೌಭಾಗ್ಯ ನನ್ನ ಬದುಕಲ್ಲಿ ದೊರೆತಿದ್ದು ಬಹು ದೊಡ್ಡ ಯೋಗ ಎಂದೇ ಹೇಳುತ್ತೇನೆ. ಡಾ.ಹೆಚ್.ಜಿ ಶ್ರೀಧರ ಸರ್ ವಿವೇಕಾನಂದ ಕಾಲೇಜಿನಲ್ಲಿ ನನ್ನ ಪದವಿ ವ್ಯಾಸಾಂಗದ ಕನ್ನಡದ ಗುರು.
ಶ್ರೀಧರ್ ಸರ್ ಎಂದರೆ ನನ್ನ ಬದುಕಿನಲ್ಲಿ ದೊರೆತ ಅದ್ಭುತ ಗುರುಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು. 2006 ರಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ನಾನು ವಿದ್ಯಾರ್ಥಿಯಾಗಿ ಸೇರಿಕೊಂಡಾಗ ಇವರ ಕನ್ನಡ ಪಾಠದ ವೈಖರಿಗೆ ಆಗಲೇ ಮನಸೋತವಳಲ್ಲಿ ನಾನು ಒಬ್ಬಳು..ಅಪಾರ ಜ್ಞಾನ ಭಂಡಾರ..ಸಾಹಿತ್ಯವನ್ನು ಅರೆದು ಕುಡಿದಷ್ಟು ಲೀಲಾಜಾಲವಾಗಿ ಪಾಠ ಪ್ರವಚನ ಮಾಡುತ್ತಿದ್ದರು. ಬಹುಷಃ ನಾನಿಂದು ಸಾಹಿತ್ಯ ಪ್ರಿಯೆ ಆಗಿದ್ದೇನೆ ಎಂದರೆ ಅದರಲ್ಲಿ ಶ್ರೀಧರ್ ಸರ್ ಅವರ ಪಾಠವೇ ಸ್ಪೂರ್ತಿ ಎಂದರೆ ತಪ್ಪಾಗಲಾರದು.ಮೂರು ವರ್ಷದಲ್ಲಿ ಖಂಡಿತವಾಗಿಯೂ ನಾನು ಕನ್ನಡ ಭಾಷೆಯ ಬಗೆಗೆ ಅಪಾರ ಒಲವು ಇರಿಸಿಕೊಂಡಿದ್ದೆ.ಅಲ್ಲದೇ ಆ ಸಂದರ್ಭದಲ್ಲಿ ಕನ್ನಡ ಪಾಠಕ್ಕೆ ಉಪನ್ಯಾಸಕರಾಗಿದ್ದ ಕ್ಯಾ.ಡಿ.ಮಹೇಶ್ ರೈ, ಡಾ.ಎಸ್ ಇಂದಿರಮ್ಮ, ಡಾ.ಮನಮೋಹನ, ಡಾ.ಹರಿಣಾಕ್ಷಿ ಕೇವಳ ,ಡಾ.ರೋಹಿಣಾಕ್ಷ ಶಿರ್ಲಾಲು ಇವರುಗಳ ಪಾಠದ ವೈಖರಿಗಳು ಕೂಡಾ ಎನಗೆ ಕನ್ನಡ ಸಾಹಿತ್ಯದ ಬಗೆಗೆ ಒಲವು ಹುಟ್ಟಲು ಕಾರಣವಾದುದು ಎನ್ನಲು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ.
ಮುಂದೆ ಕಾರಣಾಂತರಗಳಿಂದ ನಾನು ಮುಂದೆ ಪತ್ರಿಕೋದ್ಯಮ ದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರೂ ಕೂಡಾ ವೃತ್ತಿ ಜೀವನಕ್ಕೆ ಮತ್ತೆ ಇದೇ ವಿದ್ಯಾಸಂಸ್ಥೆಯನ್ನು ಆಯ್ದುಕೊಂಡೆ.ಅದರಲ್ಲೂ ಬಹಳ ವಿಶೇಷವಾದ ವಿಚಾರ ಏನೆಂದರೆ ಶ್ರೀಧರ್ ಸರ್ ನ ಪಕ್ಕದ ಕುರ್ಚಿಯಲ್ಲೇ ಕೂತು ಸುಮಾರು ಎಂಟು ವರ್ಷ ಅವರ ಗರಡಿಯಲ್ಲಿ ಪಳಗುವ ಅವಕಾಶ ದೊರೆಯಿತು.ಬಹುಷ ಒಬ್ಬ ಆದರ್ಶ ಗುರು ಹೇಗಿರಬೇಕು ಎಂಬುವುದನ್ನು ನಾನು ಇವರನ್ನು ನೋಡಿಯೇ ಕಲಿತದ್ದು ಹಾಗೂ ಈಗಲೂ ಅವರನ್ನೇ ಅನುಸರಿಸುತ್ತಿರುವುದು ಕೂಡ. ವೃತ್ತಿ ಬದುಕಿನಲ್ಲಿ ಅವರಿಗಿದ್ದ ತಾಳ್ಮೆ..ಸಹನೆ ನನ್ನ ಮೇಲೆ ಅಗಾಧವಾಗಿ ಪರಿಣಾಮ ಬೀರಿದೆ.ಎಲ್ಲದಕ್ಕಿಂತ ಲೂ ಮಿಗಿಲು ಏನೆಂದರೆ ಅವರು ವಿದ್ಯಾರ್ಥಿಗಳನ್ನು ಪ್ರೀತಿಸುತ್ತಿದ್ದ ಪರಿಗೆ ನಾನು ಅಕ್ಷರಶಃ ಮಾರು ಹೋಗಿದ್ದೆ. ಪದವಿ ವಿದ್ಯಾರ್ಥಿಗಳು ಅಂದಾಗ ಖಂಡಿತವಾಗಿಯೂ ಕೂಡಾ ಅವರಲ್ಲಿ ಮೆಚ್ಯುರಿಟಿ ಬಂದಿರುತ್ತದೆ.ಅಂತಹ ಸಂದರ್ಭದಲ್ಲಿ ಅವರನ್ನು ಪ್ರೀತಿಯಿಂದ ಗೆಲ್ಲಬೇಕೆ ಹೊರತು ಸಿಟ್ಟಿನಿಂದಲ್ಲ ಎಂಬ ಸತ್ಯವನ್ನು ನಾನು ಅಂದೇ ಇವರಿಂದ ಅರಿತಿದ್ದೆ.
ಶ್ರೀಧರ್ ಸರ್ ಎಂದರೆ ವಿವೇಕಾನಂದ ಕಾಲೇಜಿನಲ್ಲಿ ‘ನಡೆದಾಡುವ ವಿಶ್ವಕೋಶ’ ಇದ್ದಂತೆ. ಹೆಸರಾಂತ ಸಾಹಿತಿ ವಿದ್ವಾಂಸ ಪ್ರೊ.ವೆಂಕಟಾಚಲ ಶಾಸ್ತ್ರಿ ಅವರ ಜ್ಞಾನದ ಅಡಿಯಲ್ಲಿ ಮಿಂದೆದ್ದ ನನ್ನ ಗುರುಗಳು ನನಗೆ ಒಂದು ಸದಾ ಅಚ್ಚರಿಯೇ ಸರಿ.
ಇನ್ನು ಇವರ ಸಾಹಿತ್ಯಿಕ ಬದುಕಿನ ಬಗೆಗೆ ಒಂದು ದೊಡ್ಡ ಕುತೂಹಲವೇ ಇದೆ.ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ವತ್ ಪರಂಪರೆಯ ಕೊನೆಯ ಕೊಂಡಿ ಎಂದೇ ಹೇಳಬಹುದು. ಇವರ ಸಂಶೋಧನಾ ಕೃತಿಗಳು, ವಿಮರ್ಶಾ ಕೃತಿಗಳು, ನಾಟಕ, ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ದೊಡ್ಡ ಕೊಡುಗೆ ಇದ್ದಂತೆ. ಒಂದು ಕೃತಿ ಹೊರತರಬೇಕಾದರೆ ಅದರ ಹಿಂದೆ ಇವರು ಮಾಡುತ್ತಿದ್ದ ಪೂರ್ವ ತಯಾರಿಯನ್ನು ಅತ್ಯಂತ ಹತ್ತಿರದಿಂದ ಕಂಡವಳು ನಾನು.ಅದರಲ್ಲೂ ಇವರ ಒಂದೆರಡು ಕೃತಿಯ ಮೊದಲ ಓದುಗಳು ನಾನು ಎನ್ನಲು ಹೆಮ್ಮೆ ಅನಿಸುತ್ತದೆ. ಪ್ರತಿ ಬಾರಿಯೂ ಮಳೆ ಬಂದಾಗಲೆಲ್ಲ ಇವರು ಬರೆದ ಪ್ರಸ್ಥಾನ ಕಾದಂಬರಿ ನನ್ನ ಮನಸ್ಸನ್ನು ಕದಡದೆ ಇರಲಾರದು. ಪ್ರತಿಯೊಂದು ಸಾಲುಗಳಲ್ಲಿ ಇಣುಕುವ ಇವರ ಜ್ಞಾನ ಭಂಡಾರ ನನ್ನಂತವಳಿಗೆ ಖಂಡಿತವಾಗಿಯೂ ಸ್ಫೂರ್ತಿಯಾಗುತ್ತದೆ.
ಜೊತೆಗೆ ನಮ್ಮ ಕಾಲೇಜಿನಲ್ಲಿ ಸುಮಾರು ಹದಿನೆಂಟು ವರುಷಗಳಿಂದ ಬಹಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವ ಪತ್ರಿಕೋದ್ಯಮ ವಿಭಾಗಕ್ಕಂತೂ ಇವರೇ ಬೆನ್ನೆಲುಬು.ವಿಭಾಗದಿಂದ ಪ್ರತಿ ತಿಂಗಳು ಮೂಡಿ ಬರುವ ವಿಕಸನ ಪತ್ರಿಕೆ ಇವರ ಕನಸು. ಅದನ್ನು ಇಂದಿಗೂ ಜತನದಿಂದ ಮುಂದುವರೆಸುತ್ತಿರುವುದು ಇವರ ಹಾರೈಕೆ ಸದಾ ನಮ್ಮ ವಿಭಾಗದ ಮೇಲಿರಲಿ ಎಂಬ ಸದುದ್ದೇಶದಿಂದ. ಪ್ರತಿ ವರ್ಷ ವಿಭಾಗದಲ್ಲಿ ಹೊಸ ಬ್ಯಾಚು ಬಂದಾಗ ಇವರಿಂದಲೇ ಅವರಿಗೆ ಆಶೀರ್ವಚನ ಮಾಡಿದರೆ ಅವರೆಲ್ಲರ ಬದುಕು ಹಸನಾಗುತ್ತದೆ ಎಂಬುವುದು ನಮ್ಮ ಬಲವಾದ ನಂಬಿಕೆ. ಹಾಗಾಗಿ ವಿಭಾಗದಿಂದ ಸುಮಾರು ಹನ್ನೊಂದು ವರುಷದಿಂದದ ನಡೆದುಕೊಂಡು ಬರುತ್ತಿರುವ ಮಣಿಕರ್ಣಿಕ ಎನ್ನುವ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಇವರೇ ಫಿಕ್ಸ್. ವಿಭಾಗದ ಎಲ್ಲಾ ಚಟುವಟಿಕೆಗಳನ್ನು ನಾನು ಇಂದಿಗೂ ಅವರೊಂದಿಗೆ ಚರ್ಚಿಸಿಯೇ ನಿರ್ಧಾರ ಕೈಗೊಳ್ಳುತ್ತೇನೆ.ಹಾಗಾಗಿ ನಮ್ಮ ಪತ್ರಿಕೋದ್ಯಮ ವಿಭಾಗ ಇಂದಿಗೂ ಸುಭೀಕ್ಷವಾಗಿ ನಡೆಯುತ್ತಿದೆ ಎನ್ನಲು ಹೆಮ್ಮೆ ಯಾಗುತ್ತದೆ.
ಶ್ರೀಧರ್ ಸರ್ ಕಾಲೇಜಿನಲ್ಲಿ ಒಂದು ರೀತಿಯ ಪಾದರಸ ಇದ್ದಂತೆ.ಇವರೊಂದಿಗೆ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದ್ದು ನನಗೊಂದು ಸದಾ ಅನುಪಮ ನೆನಪು. ನಾನು ನನ್ನ ಪತಿ ಹರೀಶ್ ಮಂಜೊಟ್ಟಿ ಇವರೊಂದಿಗೆ ಸೇರಿ ಕವನ ಸಂಕಲನ ಎನ್ನುವ ಕೂಸನ್ನು ಹೊರತಂದಾಗ ಅದಕ್ಕೆ “ಸಾಂಗತ್ಯ”. ಎನ್ನುವ ನಾಮಕರಣ ಮಾಡಿದ್ದೂ ಇವರೆ. ಹೀಗೆ ಗುರುಗಳೊಂದಿಗೆ ಮೂರು ವರ್ಷ ವಿದ್ಯಾರ್ಥಿನಿಯಾಗಿ ಹಾಗೂ ಹತ್ತು ವರ್ಷ ಸಹೋದ್ಯೋಗಿಯಾಗಿ ನಾ ಕಳೆದ ಹದಿಮೂರು ವರ್ಷ ನನ್ನ ಬದುಕಿನ ಅವಿಸ್ಮರಣೀಯ ದಿನಗಳು ಎಂದೇ ಪರಿಗಣಿಸಬಲ್ಲೆ.
ಅವರ ವೃತ್ತಿ ಬದುಕಿನ ನಿವೃತ್ತಿ ನನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಲ್ಲಿ ಒಂದು ದೊಡ್ಡ ಖಾಲಿತನವನ್ನೇ ತುಂಬಬಹುದು ಎಂದೆನಿಸುತ್ತದೆ.ಶ್ರೀಧರ್ ಸರ್ ಗೆ ಅವರೇ ಸರಿಸಾಟಿ..ಬೇರೆನೂ ಇಲ್ಲ. ಬದುಕಿನುದ್ದಕ್ಕೂ ಅವರ ಆಶಿರ್ವಾದವನ್ನಷ್ಟೇ ಬಯಸುವೆ.ಅವರ ನಿವೃತ್ತಿ ಬದುಕು ಅತ್ಯಂತ ಸುಂದರವಾಗಿರಲಿ ಎಂಬುದೇ ಅವರ ಶಿಷ್ಯೆಯಾಗಿ ಬಯಸುವೆ..ಮುಂದೊಂದು ದಿನ ಸಾಹಿತ್ಯ ಲೋಕದ ಅನರ್ಘ್ಯ ರತ್ನವಾಗಲಿ..ಅವರ ಸಾಹಿತ್ಯ ಕೃಷಿಗೆ ಇನ್ನಷ್ಟು ಸನ್ಮಾನ ಪ್ರಶಸ್ತಿಗಳು ಒಲಿದುಬರಲಿ..ಸರ್ ನಿಮಗೆ ಅಕ್ಷರ ನಮನದೊಂದಿಗೆ ಶುಭ ವಿದಾಯ.ಸದಾ ನಮ್ಮನ್ನು ಹರಸಿ ಹಾರೈಸಿ..ಎಂದಷ್ಟೇ ಕೇಳಿಕೊಳ್ಳುತ್ತೇನೆ.

ಭವ್ಯಾ.ಪಿ.ಆರ್ ನಿಡ್ಪಳ್ಳಿ
ಮುಖ್ಯಸ್ಥೆ
ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಕಾಲೇಜು ಪುತ್ತೂರು