ಚಂದನವನದಲ್ಲಿ ಸದ್ದು ಮಾಡಿ ಸುದ್ದಿಯಾಗುತ್ತಿದೆ ‘ಶಿವಾನಿ….’ ಹಾಡು

0

ನಿಶಾನ್ ರೈ ಮಠಂತಬೆಟ್ಟು ಹಾಡಿರುವ ‘ಕೌಸಲ್ಯ ಸುಪ್ರಜ ರಾಮ’ ಚಲನಚಿತ್ರದ ಗೀತೆಗೆ 105 ಮಿಲಿಯನ್ಸ್ ವೀಕ್ಷಕರು!

ಪುತ್ತೂರು: ಕನ್ನಡ ಚಲನಚಿತ್ರ ರಂಗದಲ್ಲಿ ಈಗಾಗಲೇ ಖ್ಯಾತ ಹಿನ್ನೆಲೆ ಗಾಯಕನಾಗಿ ಹೆಸರು ಗಳಿಸಿ ಸಂಗೀತ ನಿರ್ದೇಶಕನಾಗುವ ಕನಸು ಹೊತ್ತು ಬೆಂಗಳೂರಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆಯಲ್ಲಿ SINGER, PROGRAMMER ಮತ್ತು LYRICIST ಆಗಿ ಕೆಲಸ ಮಾಡುತ್ತಿರುವ ಪುತ್ತೂರಿನ ಪ್ರತಿಭಾವಂತ ಕಲಾವಿದ ನಿಶಾನ್ ರೈ ಮಠಂತಬೆಟ್ಟು ಅವರು ‘ಕೌಸಲ್ಯ ಸುಪ್ರಜ ರಾಮ’ ಚಲನಚಿತ್ರದಲ್ಲಿ ಹಾಡಿರುವ ‘ಶಿವಾನಿ….’ ಹಾಡು ಸಂಗೀತ ಲೋಕದಲ್ಲಿ ಸಖತ್ ಸದ್ದು ಮಾಡಿ ಸುದ್ದಿಯಾಗಿದೆ.


ಜು.28ರಂದು ತೆರೆ ಕಂಡು ಯಶಸ್ವಿಯಾಗಿ ಕರ್ನಾಟಕದಾದ್ಯಂತ ಪ್ರದರ್ಶನ ಕಾಣುತ್ತಿರುವ ಕನ್ನಡದ ಖ್ಯಾತ ನಿರ್ದೇಶಕ ಶಶಾಂಕ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಬ್ರಿಂದಾ ಆಚಾರ್ಯ ಮತ್ತಿತರರು ನಟಿಸಿರುವ ‘ಕೌಸಲ್ಯ ಸುಪ್ರಜ ರಾಮ’ ಚಲನಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದಲ್ಲಿ ನಿಶಾನ್ ರೈ ಮಠಂತಬೆಟ್ಟು ಅವರು ಹಾಡಿರುವ ‘ಶಿವಾನಿ…’ ಹಾಡು ಈಗಾಗಲೇ ತುಂಬಾ ಜನಪ್ರಿಯ ಹಾಡಾಗಿ ಎಲ್ಲೆಡೆ ವೈರಲ್ ಆಗಿದೆ.
‘ಶಿವಾನಿ’ ಹಾಡು ಈಗಾಗಲೇ YouTubeನಲ್ಲಿ 3.8 ಮಿಲಿಯನ್ views ಹಾಗೂ Instagramನಲ್ಲಿ 32000 ರೀಲ್ಸ್ ಜೊತೆಗೆ 105 ಮಿಲಿಯನ್ viewsಗಳೊಂದಿಗೆ ಚಂದನವನದಲ್ಲಿ ಸಖತ್ ಸದ್ದು ಮಾಡಿದೆ.‌ ಈ ಹಾಡು ನಿಶಾನ್ ರೈ ಯವರಿಗೆ ಈಗಾಗಲೇ ದೊಡ್ಡ ಹೆಸರು ತಂದುಕೊಟ್ಟಿದೆ.


ಸುಮಾರು ಒಂದೂವರೆ ವರ್ಷಗಳಿಂದೀಚೆಗೆ ನಿಶಾನ್ ರೈಯವರು ಅರ್ಜುನ್ ಜನ್ಯ ಜೊತೆಗಿದ್ದು ಅವರ ಸಂಗೀತ ನಿರ್ದೇಶನದಲ್ಲಿ ಕನ್ನಡ ಚಿತ್ರ ರಂಗದ ಖ್ಯಾತ ನಟರಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಡಾರ್ಲಿಂಗ್ ಕೃಷ್ಣ, ಧೀರೇನ್ ರಾಮ್ ಕುಮಾರ್, ರಾಕ್‌ಸ್ಟಾರ್‌ ರೂಪೇಶ್ ಶೆಟ್ಟಿ ಮುಂತಾದವರು ನಟಿಸಿರುವ ಘೋಸ್ಟ್, ಕೌಸಲ್ಯ ಸುಪ್ರಜ ರಾಮ, ಬಾನ ದಾರಿಯಲ್ಲಿ, ಲವ್ ಬರ್ಡ್ಸ್, ದಿಲ್ ಪಸಂದ್, ರೇಸರ್, ಶಿವ 143, ಕಟಪಾಡಿ ಕಟ್ಟಪ್ಪ, ಗಮ್ಜಾಳ್ ಮುಂತಾದ ಕನ್ನಡ ಹಾಗೂ ತುಳು ಚಲನಚಿತ್ರಗಳ 15ಕ್ಕಿಂತಲೂ ಅಧಿಕ ಗೀತೆಗಳು ಹಾಗೂ ಹಲವಾರು ಆಲ್ಬಂ ಸಾಂಗ್ ಗಳನ್ನು ಹಾಡಿ ಸದ್ಯ ಚಂದನವನದ ಖ್ಯಾತ ಹಿನ್ನೆಲೆ ಗಾಯಕರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಚಿಕ್ಕಂದಿನಿಂದಲೇ ಪುತ್ತೂರಿನಲ್ಲಿ ಚಿದಾನಂದ ಕಾಮತ್ ಕಾಸರಗೋಡು ಅವರ ಬಾರಿಸು ಕನ್ನಡ ಡಿಂಡಿಮ ತಂಡ, ಮಂಗಳೂರಿನ ಹೆಜ್ಜೆನಾದ ಮುಂತಾದ ತಂಡಗಳಲ್ಲಿ ಹಾಡುಗಾರನಾಗಿ ಗುರುತಿಸಿ ಕೊಂಡಿದ್ದ ನಿಶಾನ್ ರೈ TV ರಿಯಾಲಿಟಿ ಶೋಗಳಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕ, ಕೇರಳ, ದೆಹಲಿ, ಮುಂಬಯಿ, ಗುಜರಾತ್ ಜೊತೆಗೆ ಕತಾರ್, ಬಹರೀನ್, ಅಬುದಾಬಿ, ದುಬೈ, ಕುವೈಟ್‌ ಮುಂತಾದೆಡೆ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ದೇಶ ವಿದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಕಲಾವಿದನಾಗಿರುವ‌ ನಿಶಾನ್ ರೈ ಅವರು ಸದ್ಯ ಅರ್ಜುನ್ ಜನ್ಯ ತಂಡದ ಲೈವ್ ಶೋಗಳಲ್ಲಿ ಮತ್ತು ಟಿ.ವಿ. ಹಾಡುಗಾರನಾಗಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ತನ್ನ ಸಾಧನೆಗಳ ಜೊತೆಗೆ MBA ವ್ಯಾಸಂಗ ಮಾಡುತ್ತಿರುವ ಇವರು ಬಾಲ್ಯೊಟ್ಟುಗುತ್ತು ಕರುಣಾಕರ ರೈ ಮತ್ತು ನಿರತ ಕೆ.ರೈ ಮಠಂತಬೆಟ್ಟು ಇವರ ಪುತ್ರ, ನಿರೀಕ್ಷಾ ರೈಯವರ ಸಹೋದರ.

LEAVE A REPLY

Please enter your comment!
Please enter your name here