ಸಾಮೆತ್ತಡ್ಕ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವಿವೇಕ ತರಗತಿ ಉದ್ಘಾಟನೆ

0

ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಬೇಕಿದೆ: ಶಾಸಕ ಅಶೋಕ್ ರೈ
ಪುತ್ತೂರು: ಸರಕಾರಿ ಶಾಲೆಗಳಲ್ಲಿ ಕನ್ನಡ ಕಲಿಕೆಯ ಜೊತೆಗೆ ಇಂಗ್ಲೀಷ್ ಕಲಿಕೆಗೂ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯೂ ಹೆಚ್ಚಾಗಲಿದೆ ಈ ನಿಟ್ಟಿನಲ್ಲಿ ಮುಂದಿನ ಅಧಿವೇಶನದಲ್ಲಿ ಸರಕಾರವನ್ನು ಒತ್ತಾಯಮಾಡುವುದಾಗಿ ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಸಾಮೆತ್ತಡ್ಕ ಸರಕಾರಿ ಹಿ ಪ್ರಾ ಶಾಲೆಯಲ್ಲಿ ವಿವೇಕ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಬಡವರ ಮಕ್ಕಳು ಇಂಗ್ಲೀಷ್‌ ಕಲಿಯಬೇಕು, ಕೇವಲ ಉಳ್ಳವರ ಮಕ್ಕಳು ಮಾತ್ರ ಖಾಸಗಿ ಶಾಲೆಗಳಿಗೆ ತೆರಳಿ ಇಂಗ್ಲೀಷ್ ಕಲಿಯುವಂತಾಗಬಾರದು, ಉಳ್ಳವರೂ ಇಲ್ಲದವರೂ ಎಲ್ಲರ ಮಕ್ಕಳೂ ಸರಕಾರಿ ಶಾಲೆಗೆ ಬರುವಂತಹ ವಾತಾವರಣ ಸರಕಾರಿ ಶಾಲೆಗಳಲ್ಲಿ ಸೃಷ್ಟಿಯಾಗಬೇಕು. ಈಗ ಬಹುತೇಕ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಎಲ್‌ಕೆಜಿ , ಯುಕೆಜಿ ತರಗತಿಗಳು ಆರಂಭಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದ್ದು ಸದ್ಯ ಶಾಲೆಯವರೇ ಸ್ವಂತ ಹಣದಿಂದ ಶಿಕ್ಷಕರಿಗೆ ವೇತನವನ್ನು ನೀಡುತ್ತಿದ್ದಾರೆ. ಮುಂದೆ ಸರಕಾರವೇ ಶಿಕ್ಷಕರನ್ನು ನೇಮಕ ಮಾಡುವಂತೆ ನಾನು ಸರಕಾರದ ಗಮನಕ್ಕೆ ತರುತ್ತೇನೆ ಎಂದು ಶಾಸಕರು ಹೇಳಿದರು.

ಪುತ್ತೂರಿಗೆ 130 ಹೊಸಶಿಕ್ಷಕರ ನೇಮಕ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಸಾಲೆಗಳಿಗೆ ಹೊಸದಾಗಿ 130 ಶಿಕ್ಷಕರ ನೇಮಕಾತಿ ನಡೆಯಲಿದೆ. ಶಿಕ್ಷಕರ ನೇಮಕಾತಿ ವಿವಾದ ನ್ಯಾಯಾಲಯದಲ್ಲಿ ಶೀಘ್ರವೇ ಇತ್ಯರ್ಥವಾಗಲಿದ್ದು ಒಂದು ತಿಂಗಳೊಳಗೆ ಈ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಭರವಸೆ ಇದ್ದು ಆ ಬಳಿಕ ಕೊರತೆ ಇರುವ ಶಾಲೆಗಳಿಗೆ ಹೊಸ ಶಿಕ್ಷಕರ ನೇಮಕಾತಿ ನಡೆಯಲಿದೆ. ಕಲಿಕೆಗೆ ಎಲ್ಲೂ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗುವುದು ಇದಕ್ಕೆ ಪೋಷಕರ ಮತ್ತು ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದೆ ಎಂದು ಹೇಳಿದರು.

3.61 ಕೋಟಿ ಅನುದಾನ ಬಂದಿದೆ
ಶಾಲೆಗಳ ಅಭಿವೃದ್ದಿಗೆ, ಕೊಠಡಿ ನಿರ್ಮಾಣಕ್ಕೆ, ಲ್ಯಾಬ್, ಗ್ರಂಥಾಲಯ ನಿರ್ಮಾಣಕ್ಕೆಂದು ಸರಕಾರದಿಂದ 3.61 ಕೋಟಿ ಅನುದಾನ ಬಂದಿದ್ದು, ಈ ಅನುದಾನವನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಕೊರತೆ ಇರುವ ಶಾಲೆಗಳನ್ನು ಗುರುತಿಸಿ ಅಲ್ಲಿಗೆ ನೀಡಲಾಗುವುದು ಎಂದು ಶಾಸಕರು ಹೇಳಿದರು.

ಶಾಸಕರಿಗೆ ಸನ್ಮಾನ
ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಟ್ರಸ್ಟ್‌ನ ವತಿಯಿಂದ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಪುಟಾಣಿ ವಿದ್ಯಾರ್ಥಿಗಳು ಶಾಸಕರಿಗೆ ಹೂವಿನ ಸಿಂಚನಗೈದರು. ನೂತನ ವಿವೇಕ ತರಗತಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಶಾಸಕರು ಉದ್ಘಾಟಿಸಿದರು.
ವೇದಿಕೆಯಲ್ಲಿ ಶಾಲೆಯ ಸ್ಥಾಪಕಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ, ಟ್ರಸ್ಟ್‌ನ ಉಪಾಧ್ಯಕ್ಷ ಪ್ರಸನ್ನ ಶೆಟ್ಟಿ ಸಿಝ್ಲರ್, ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್, ನಗರಸಭಾ ಸದಸ್ಯ ಮನೋಹರ್, ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಗುತ್ತಿಗೆದಾರ ಆಶಿಕ್, ಡ್ಯಾಸ್ ಮಾರ್ಕೆಟಿಂಗ್ ಮಾಲಕಿ ನಳಿನಿ, ಟ್ರಸ್ಟ್ ಪ್ರತಿನಿಧಿ ಮೀನಾಕ್ಷಿ, ಯೆಳ್ತಿಮಾರ್ ಸಂಸ್ಥೆ ಮಾಲಕಿ ವಿಜಯಲಕ್ಷ್ಮಿ ಉಪಸ್ತಿತರಿದ್ದರು.
ಮುಖ್ಯ ಶಿಕ್ಷಕಿ ಶಶಿಕಲಾ ಸ್ವಾಗತಿಸಿದರು. ಶಿಕ್ಷಕಿ ಮರಿಯಾ ಎಂ ಎ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here