ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ರೂ.1,70,72,894 ರೂ. ಲಾಭ ; 15.ಶೇ ಡಿವಿಡೆಂಡ್-ಅಧ್ಯಕ್ಷ ಬಾಬು ಶೆಟ್ಟಿ ಘೋಷಣೆ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 348.09 ಕೋಟಿ ವ್ಯವಹಾರ ಮಾಡಿ 1,70,72,894 ರೂ ಲಾಭ ಗಳಿಸಿದ್ದು ಕಳೆದ ವರ್ಷಕ್ಕಿಂತ 44,82,417 ರೂ ಜಾಸ್ತಿ ಲಾಭ ಗಳಿಸಿದೆ. ಸದಸ್ಯರ ಆಗ್ರಹದ ಮೇರೆಗೆ ಶೇ.15 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ವಿ ಬಾಬು ಶೆಟ್ಟಿ ಘೋಷಿಸಿದರು.

ಆ.26ರಂದು ಪುರುಷರಕಟ್ಟೆಯಲ್ಲಿರುವ ಸಂಘದ ರೈತ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಸಂಘವು ಎಲ್ಲರ ಸಹಕಾರದಿಂದಾಗಿ ಉತ್ತಮ ಪ್ರಗತಿ ಸಾಧಿಸಿದ್ದು ವರದಿ ವರ್ಷದಲ್ಲಿ ಆಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದಿದೆ. ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ, ಸರಕಾರದ ಯೋಜನೆಗಳಾದ ಬೆಳೆ ಸಾಲ, ಕೃಷಿ ಅಭಿವೃದ್ಧಿ ಸಾಲಗಳನ್ನು ನಿಯಮಾನುಸಾರ ವಿತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ಸಾಲ ಮನ್ನಾ ವಂಚಿತರ ಬಗ್ಗೆ ಶಾಸಕರಿಗೆ ತಿಳಿಸಬೇಕು:
ನಮ್ಮ ಸಂಘದಲ್ಲಿ ಸಾಲ ಮನ್ನಾದಿಂದ ವಂಚಿತಗೊಂಡಿರುವ ಸದಸ್ಯರ ವಿಚಾರದ ಬಗ್ಗೆ ಈಗಿನ ಶಾಸಕರಿಗೆ ತಿಳಿಸುವ ಕೆಲಸವಾಗಬೇಕು ಮತ್ತು ಸಾಲಮನ್ನಾ ವಂಚಿತ ಸದಸ್ಯರಿಗೆ ನ್ಯಾಯ ಒದಗಿಸಬೇಕು ಎಂದು ಸದಸ್ಯ ಸುರೇಶ್ ಪ್ರಭು ಹೇಳಿದರು. ಅಧ್ಯಕ್ಷ ಬಾಬು ಶೆಟ್ಟಿ ಉತ್ತರಿಸಿ ಮುಂದಿನ ದಿನಗಳಲ್ಲಿ ಶಾಸಕರನ್ನು ನಮ್ಮ ಸಂಘಕ್ಕೆ ಬರುವ ಹಾಗೆ ವ್ಯವಸ್ಥೆ ಮಾಡುವ, ಅಂದಿನ ದಿನ ಸಾಲ ಮನ್ನಾ ವಂಚಿತರನ್ನೂ ಬರುವ ಹಾಗೆ ಮಾಡಿ ಸಮಸ್ಯೆಯ ಬಗ್ಗೆ ತಿಳಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಲಾಭಾಂಶ ಹೆಚ್ಚಳದ ಬೇಡಿಕೆ ಈಡೇರಿಸಿದ ಅಧ್ಯಕ್ಷ:
ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ.12 ಲಾಭಾಂಶ ನೀಡುವ ಬಗ್ಗೆ ಸಂಘದ ಅಧ್ಯಕ್ಷ ವಿ ಬಾಬು ಶೆಟ್ಟಿ ಘೋಷಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯ ಸುರೇಶ್ ಪ್ರಭು ಮಾತನಾಡಿ ಈ ಸಾಲಿನಲ್ಲಿ ಸಂಘಕ್ಕೆ ಲಾಭಾಂಶ ಹೆಚ್ಚಳ ಆಗಿರುವಾಗ ಸದಸ್ಯರಿಗೆ 12.ಶೇ ಡಿವಿಡೆಂಡ್ ಸಾಲದು, 15.ಶೇ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಭೆಯಲ್ಲಿದ್ದ ಹಲವರು ಧ್ವನಿಗೂಡಿಸಿದರು. ಅಧ್ಯಕ್ಷ ವಿ ಬಾಬು ಶೆಟ್ಟಿ ಉತ್ತರಿಸಿ ನೀವು ಕೇಳುವುದು ತಪ್ಪಲ್ಲ, ಆದರೆ ಅದೇ ಹಣವನ್ನು ಒಟ್ಟಾಗಿ ನಮ್ಮ ಸಂಘದ ಬೇರೆ ಉದ್ದೇಶಕ್ಕೆ ಬಳಸಿಕೊಂಡರೆ ಹೆಚ್ಚು ಪ್ರಯೋಜನವಾಗುತ್ತದೆ ಎಂದು ಹೇಳಿದರು. ಸಂಘದ ಮಾಜಿ ಅಧ್ಯಕ್ಷ ರತ್ನಾಕರ ಪಿ.ಎಸ್ ಮಾತನಾಡಿ ನೀವು ದೊಡ್ಡ ಮನಸ್ಸು ಮಾಡಿ 15.ಶೇ ಡಿವಿಡೆಂಡ್ ಕೊಡಿ ಎಂದು ಹೇಳಿದರು. ನಂತರ ಸದಸ್ಯರ ಬೇಡಿಕೆ ಮನ್ನಿಸಿದ ಅಧ್ಯಕ್ಷ ವಿ ಬಾಬು ಶೆಟ್ಟಿಯವರು ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು. ಇದಕ್ಕೆ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಅಭಿನಂಧಿಸಿದರು.

ಸದಸ್ಯರಿಗೆ ಗಿಫ್ಟ್ ಕೊಡಬೇಕು:
ಸಂಘದ ಸದಸ್ಯ ವೃಷಭರಾಜ್ ಜೈನ್ ಮಾತನಾಡಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರಿಗೆ ಗಿಫ್ಟ್ ಕೊಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.

ಹಿರಿಯ ಸದಸ್ಯರಿಗೆ ಸನ್ಮಾನ:
ಸಂಘದ ಹಿರಿಯ ಸದಸ್ಯರಾದ ಸುಂದರ ಪುರುಷ, ಶೀನಪ್ಪ ಪೂಜಾರಿ, ಈಶ್ವರ ಭಟ್ ಎನ್, ಇಬ್ರಾಹಿಂ ಕೆ, ಮಮ್ಮದ್ ಬ್ಯಾರಿ, ದೇವಪ್ಪ ಗೌಡ, ಅಬ್ದುಲ್ಲ ಎಂ, ಸುಲೈಮಾನ್ ವಿ ಮೊದಲಾದವರನ್ನು ಅಧ್ಯಕ್ಷ ವಿ.ಬಾಬು ಶೆಟ್ಟಿಯವರು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಸಂಘದ ಉಪಧ್ಯಕ್ಷೆ ಲತಾ ಮೋಹನ್ ಮತ್ತು ನಿರ್ದೇಶಕಿ ನಾಗಮ್ಮ ಟಿ ಸನ್ಮಾನ ಪತ್ರ ವಾಚಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ ಯಚ್ ಅವರು ಕಾರ್ಯಸೂಚಿ ಪ್ರಕಾರ ಸಭೆ ನಡೆಸಿಕೊಟ್ಟರು. ಸಿಬ್ಬಂದಿ ಸಂದೀಪ್ ಕೆ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಲತಾ ಮೋಹನ್, ನಿರ್ದೇಶಕರಾದ ಕುಶಾಲಪ್ಪ ಗೌಡ, ನಾರಾಯನ ಪೂಜಾರಿ, ವಿಜೇಶ್ ಕುಮಾರ್ ಎಂ, ಹಸನ್ ಎ, ಹೊನ್ನಪ್ಪ ಪೂಜಾರಿ ಕೈಂದಾಡಿ, ಪರಮೇಶ್ವರ ಭಂಡಾರಿ, ನಾಗಮ್ಮ ಟಿ, ಶಿವರಾಮ, ವಿಶ್ವನಾಥ ನಾಯ್ಕ, ಯಮುನಾ ಉಪಸ್ಥಿತರಿದ್ದರು. ಅಧ್ಯಕ್ಷ ವಿ ಬಾಬು ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಹೊನ್ನಪ್ಪ ಪೂಜಾರಿ ಕೈಂದಾಡಿ ವಂದಿಸಿದರು. ಸಿಬ್ಬಂದಿಗಳಾದ ಜಯರಾಮ ಬಿ, ರೋಹಿತ್ ಪಿ, ಅಶ್ವಿತಾ ಎ, ರೇಷ್ಮಾ ಎಂ, ನಳಿನಿ ಬಿ.ಕೆ, ಮೇಘ, ಜಿತೇಶ್ ಯಸ್, ಶ್ರಾವ್ಯ ಶಾಂತಿಗೋಡು ಸಹಕರಿಸಿದರು.

ಸೀತರಾಮ ಗೌಡರಿಗೆ ಸನ್ಮಾನ:
ಸಂಘಕ್ಕೆ ಜಾಗ ಖರೀದಿಸುವ ವಿಚಾರದಲ್ಲಿ ವಿಶೇಷ ಸಹಕಾರ ನೀಡಿದ ಸೀತರಾಮ ಗೌಡ ಓಲಾಡಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here