ಪ್ರತ್ಯೇಕ ಪಾಲ್ತಾಡಿ ಗ್ರಾ.ಪಂ.ರಚನೆಗೆ ಹೆಚ್ಚಿದ ಕೂಗು

0

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿ ರುವ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ. ಮಾಡಬೇಕು ಎಂಬ ಕೂಗು ಮತ್ತೆ ಮುನ್ನಲೆಗೆ ಬಂದಿದೆ.
2014ರಲ್ಲಿ ಗ್ರಾಮ ಪಂಚಾಯತ್ ಪುನರ್ವಿಂಗಡನೆ ಸಮಯದಲ್ಲಿಯೇ ಗ್ರಾಮಸ್ಥರಿಂದ ಪ್ರತ್ಯೇಕ ಗ್ರಾ.ಪಂ.ನ ಬೇಡಿಕೆ ವ್ಯಕ್ತವಾಗಿತ್ತು. ಬಳಿಕ ಗ್ರಾಮಸ್ಥರು ಕಂದಾಯ ಇಲಾಖೆಯ ಸಚಿವರಿಗೆ, ಗ್ರಾ.ಪಂ. ಪುನರ್ ವಿಂಗಡನ ಸಮಿತಿಗೆ, ಇಲಾಖೆಯ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಸರಕಾರ 2015ರಲ್ಲಿ ಘೋಷಣೆ ಮಾಡಿದ ನೂತನ ಗ್ರಾ.ಪಂ.ಗಳ ಪಟ್ಟಿಯಲ್ಲಿ ಪಾಲ್ತಾಡಿ ಹೆಸರು ಇಲ್ಲವಾಗಿತ್ತು.ಈ ಭಾಗದ ಜನತೆಯ ಪ್ರತ್ಯೇಕ ಗ್ರಾ.ಪಂ. ಕನಸು ಕನಸಾಗಿಯೇ ಉಳಿದಿದೆ.ಮುಂದಿನ ಬಾರಿಯಾದರೂ ನೂತನ ಗ್ರಾ.ಪಂ.ಆಗುವುದೇ ಎಂಬ ಆಶಾ ಭಾವನೆ ಇಲ್ಲಿನ ಗ್ರಾಮಸ್ಥರದ್ದು.
610 ಕುಟುಂಬಗಳಿವೆ: ಪಾಲ್ತಾಡಿ ಗ್ರಾಮದ ಒಟ್ಟು ವಿಸ್ತೀರ್ಣ 2668.1೦ ಎಕರೆ ಆಗಿದ್ದು, ಅರಣ್ಯ ಜಮೀನಿನ ವಿಸ್ತೀರ್ಣ 338.73 ಆಗಿದೆ.
ಈ ಗ್ರಾಮದಲ್ಲಿ ಒಟ್ಟು 610 ಕುಟುಂಬಗಳು ವಾಸ್ತವ್ಯವಿದ್ದು 2011ರ ಜನಗಣತಿ ಪ್ರಕಾರ 2,838 ಜನಸಂಖ್ಯೆ ಇದ್ದು,ಪ್ರಸ್ತುತ 3383 ಜನಸಂಖ್ಯೆ ಇದೆ. ಇದರಲ್ಲಿ 801 ಪರಿಶಿಷ್ಟ ಜಾತಿ, 294 ಪರಿಶಿಷ್ಟ ಪಂಗಡ, 2,268 ಮಂದಿ ಇತರರು ಇದ್ದಾರೆ.
ಗ್ರಾಮವು 2 ವಾರ್ಡ್‌ಗಳನ್ನು ಹೊಂದಿದ್ದು, 8 ಗ್ರಾ.ಪಂ. ಸದಸ್ಯರಿದ್ದಾರೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಬೂತ್ ಸಂಖ್ಯೆ 70 (ಪಾಲ್ತಾಡಿ ವಾರ್ಡ್ 1)ರಲ್ಲಿ 1255 ಮತದಾರರು ಇದ್ದು, 651 ಪುರುಷರು, 604 ಮಹಿಳಾ ಮತದಾರರು.ಬೂತ್ ಸಂಖ್ಯೆ 71ರಲ್ಲಿ (ಪಾಲ್ತಾಡಿ ವಾರ್ಡ್ 2) ರಲ್ಲಿ 986 ಮತದಾರರು ಇದ್ದು,494 ಪುರುಷರು, 492 ಮಹಿಳಾ ಮತದಾರರು ಇದ್ದಾರೆ. ಒಟ್ಟು 2241 ಮಂದಿ ಮತದಾರರು ಪಾಲ್ತಾಡಿ ಗ್ರಾಮದಲ್ಲಿದ್ದಾರೆ. ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಅವರ ಹುಟ್ಟೂರು ಪಾಲ್ತಾಡಿ ಗ್ರಾಮದ ಕುಂಜಾಡಿಯಾಗಿದೆ.
ವಿವಿಧ ಸೌಕರ್ಯಗಳಿವೆ: ಪಾಲ್ತಾಡಿ, ಅಂಕತ್ತಡ್ಕ, ಮಂಜುನಾಥ ನಗರದಲ್ಲಿ ಸ.ಹಿ.ಪ್ರಾ. ಶಾಲೆ, ಚೆನ್ನಾವರದಲ್ಲಿ ಕಿ.ಪ್ರಾ. ಶಾಲೆ ಇದೆ. ಮಂಜುನಾಥ ನಗರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಂಕತ್ತಡ್ಕ, ಮಂಜುನಾಥ ನಗರ, ಚೆನ್ನಾವರ, ಪಾಲ್ತಾಡಿ, ಉಪ್ಪಳಿಗೆಯಲ್ಲಿ ಅಂಗನವಾಡಿ ಕೇಂದ್ರಗಳಿವೆ. ಕೊಳ್ತಿಗೆ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ಶಾಖೆಯೂ ಪಾಲ್ತಾಡಿಯ ಅಂಕತ್ತಡ್ಕದಲ್ಲಿ ಇದೆ.
ಅಂಕತ್ತಡ್ಕದಲ್ಲಿ ಕೊಳ್ತಿಗೆ ಸಹಕಾರಿ ಸಂಘದ ಹಾಗೂ ಮಂಜುನಾಥನಗರದಲ್ಲಿ ಸವಣೂರು ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಇದೆ.
ಸೂಕ್ತ ನಿವೇಶನ: ಚೆನ್ನಾವರ, ಅಂಕತ್ತಡ್ಕದಲ್ಲಿ ಮಸೀದಿ, ಮದ್ರಸ ಇವೆ. ಮಂಜುನಾಥ ನಗರ, ಪಾದೆಬಂಬಿಲ, ಅಲ್ಯಾಡಿಯಲ್ಲಿ ಭಜನಾ ಮಂದಿರಗಳಿವೆ. ಮಂಜುನಾಥ ನಗರದಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನವೂ ಇದೆ.
ದೇವಸ್ಥಾನ, ದೈವಸ್ಥಾನಗಳಿದೆ. ಬಂಬಿಲ ಮತ್ತು ಉಪ್ಪಳಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಯುವಕ ಮಂಡಲ, ಯುವತಿ ಮಂಡಲ ಸಹಿತ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳೂ ಇವೆ.
ಗ್ರಾ.ಪಂ.ಗೆ ಸೂಕ್ತವಾದ ನಿವೇಶನವೂ ಪಾಲ್ತಾಡಿ ಗ್ರಾಮದಲ್ಲಿದೆ. ಒಟ್ಟಿನಲ್ಲಿ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆನ್ನುವ ಬೇಡಿಕೆ ಪ್ರಬಲವಾಗಿದೆ.
ಗ್ರಾಮವಾಸ್ತವ್ಯದಲ್ಲಿ ಪ್ರಸ್ತಾಪ: ಕಡಬ ತಾಲೂಕಿನ ದೋಳ್ಪಾಡಿಯಲ್ಲಿ ನಡೆದಿದ್ದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್‍ಯಕ್ರಮದಲ್ಲಿ, ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ.ಮಾಡಬೇಕೇಂಬ ಬೇಡಿಕೆಯನ್ನು ಗ್ರಾಮಸ್ಥರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದರು.
ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಬೇಕೆಂಬ ನಿಟ್ಟಿನಲ್ಲಿ ಗ್ರಾ.ಪಂ. ಸಾಮಾನ್ಯ ಸಭೆ, ಗ್ರಾಮ ಸಭೆಗಳಲ್ಲಿ ಕಳೆದ 7 ವರ್ಷಗಳಿಂದ ಪ್ರಸ್ತಾಪಿಸಿ,ಸರಕಾರಕ್ಕೂ ಮನವಿ ಸಲ್ಲಿಸಲಾಗಿದೆ.
-ಸತೀಶ್ ಅಂಗಡಿಮೂಲೆ
ಸದಸ್ಯರು ಸವಣೂರು ಗ್ರಾ.ಪಂ.


ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ. ಮುಂದಿನ ಬಾರಿಯಾದರೂ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕು.
-ಪಿ.ಎನ್.ಕಿಟ್ಟಣ್ಣ ರೈ ನಡುಕೂಟೇಲು,
ಮಾಜಿ ಉಪಾಧ್ಯಕ್ಷರು ಸವಣೂರು ಗ್ರಾ.ಪಂ.

LEAVE A REPLY

Please enter your comment!
Please enter your name here