ಅ.26: ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಅಗ್ರಹಿಸಿ ರೈತ ಹಕ್ಕೊತ್ತಾಯ ಬೃಹತ್ ಮೆರವಣಿಗೆ

0

ಕಡಬ: ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಆನೆ ಹಾಗೂ ಇತರ ಪ್ರಾಣಿಗಳ ಉಪಟಳ ಮಿತಿ ಮೀರುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಅಗ್ರಹಿಸಿ ಅ 26ರಂದು ಕಡಬದಲ್ಲಿ ಬೃಹತ್ ಮೆರವಣಿಗೆ ನಡೆಸಿ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಐತ್ತೂರು ಮರ್ದಾಳ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ಅತ್ಯಡ್ಕ ನಾರಾಯಣ ಶೆಟ್ಟಿ ಹೇಳಿದರು.


ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆನೆ ಉಪಟಳದಿಂದ ಬೇಸತ್ತ ರೈತರು ಒಗ್ಗೂಡಿ ಪಕ್ಷಾತೀತವಾಗಿ ಸಂಘಟಿತರಾಗಿದ್ದಾರೆ. ಗುರುವಾರ ಬೆಳಿಗ್ಗೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವಠಾರದಲ್ಲಿ ಸೇರಿ ಬಳಿಕ ಬೃಹತ್ ಮೆರವಣಿಗೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕಡಬ ತಾಲೂಕು ಕಛೇರಿಯಲ್ಲಿ ಜಮಾವಣೆಗೊಂಡು ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಸಲಾಗುವುದು, ಮನವಿಗೆ ಸ್ಪಂದನೆ ದೊರೆಯದೇ ಹೋದಲ್ಲಿ ಮುಂದೆ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದರು.


ಇತ್ತೀಚಿನ ವರ್ಷಗಳಲ್ಲಿ ಕಡಬ ತಾಲೂಕಿನ ಬಿಳಿನೆಲೆ, ಕೈಕಂಬ , ಕೊಂಬಾರು ಸಿರಿಬಾಗಿಲು, ರೆಂಜಲಾಡಿ, ನೂಜಿಬಾಳ್ತಿಲ, ಕೌಕ್ರಾಡಿ, ಇಚ್ಲಂಪಾಡಿ, ಸುಬ್ರಹ್ಮಣ್ಯ, ಐನೆಕಿದು ಮುಂತಾದ ಗ್ರಾಮದ ಜನ ಆನೆ ಹಾವಳಿಯಿಂದಾಗಿ ಭೀತಿಯಿಂದ ಬದುಕುವಂತಾಗಿದೆ. ಯಾವುದೇ ಕೃಷಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಾವು ಈಗ ಒಗ್ಗಟ್ಟಾಗಿ ಬದುಕುವಂತ ದಾರಿ ನೋಡಬೇಕಾಗಿದೆ, ಹಾಗಾಗಿ ಎಲ್ಲಾ ಪಕ್ಷ, ವರ್ಗದವರನ್ನೊಳಗೊಂಡ ಒಕ್ಕೂಟವನ್ನು ರಚಿಸಿಕೊಂಡು ಸರಕಾರಕ್ಕೆ ಒತ್ತಡ ತರುವ ಕೆಲಸಕ್ಕೆ ಹೊರಟಿದ್ದೇವೆ. ನಮ್ಮ ಪರಿಸರದಲ್ಲಿ ಎರಡು ಜೀವಗಳು ಆನೆ ದಾಳಿಗೆ ಬಲಿಯಾಗಿದೆ. ಇತ್ತೀಚೆಗೆ ಓರ್ವನ ಮೇಲೆ ಆನೆ ದಾಳಿ ನಡೆಸಿ ಆತನ ಸ್ಥಿತಿ ಚಿಂತಾಜನಕವಾಗಿದೆ. ಆತ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಪರಿಸರದಲ್ಲಿ ಆನೆಗಳು ಸಂಜೆಯಾಗುತ್ತಲೇ ರಸ್ತೆಗೆ ಬರುತ್ತವೆ ಮತ್ತೆ ನಾವೆಲ್ಲಾ ಗೂಡು ಸೇರಬೇಕಷ್ಟೆ ಮನೆಯಿಂದ ಅಗತ್ಯ ಕೆಲಸಗಳಿಗೂ ಹೊರ ಬರುವ ಹಾಗಿಲ್ಲ. ಸರಕಾರ ಆನೆ ಹಾವಳಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಲಿ ನಿರ್ಮಾಣ, ಮಾಡಿದೆ. ಅಗಲು ತೆಗೆದಿದ್ದಾರೆ. ಇದೆಲ್ಲಾ ಅವೈಜ್ಞಾನಿಕವಾಗಿದ್ದು, ಇದು ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಆನೆಗಳು ಕೃಷಿ ತೋಟಗಳಿಗೆ ಬಂದು ಹಾನಿ ಮಾಡುವುದು ನಿಂತಿಲ್ಲ. ಮನುಷ್ಯರಿಗೆ ಭಯದಿಂದ ಬದುಕುವುದು ತಪ್ಪಿಲ್ಲ. ಸರಕಾರ ಕೂಡಲೇ ಎಚ್ಚೆತ್ತು, ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು, ರೈಲ್ವೇ ಕಂಬಿಯಲ್ಲಿ ಬೇಲಿ ನಿರ್ಮಾಣ ಮಾಡಬೇಕು, ವೈಜ್ಞಾನಿಕವಾಗಿ ಅಗಲು ನಿರ್ಮಾಣ ಮಾಡಬೇಕು ಎಂದು ಅಗ್ರಹಿಸಿದ ನಾರಾಯಣ ಶೆಟ್ಟಿ ನಮ್ಮ ಬೇಡಿಕೆ ಈಡೇರದಿದ್ದರೆ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.


ಕಾಂಗ್ರೆಸ್ ಮುಖಂಡ ಪಿ.ಪಿ.ವರ್ಗೀಸ್ ಮಾತನಾಡಿ ಆನೆ ಹಾವಳಿಯಿಂದಾಗಿ ಕಡಬ ತಾಲೂಕಿನ ಕೆಲವು ಗ್ರಾಮದ ರೈತರು ಕಂಗಾಲಾಗಿದ್ದಾರೆ. ಇತ್ತೀಚೆಗೆ ಆನೆ ದಾಳಿಯಿಂದಾಗಿ ಮೃತಪಟ್ಟವರ ಕುಟುಂಬಕ್ಕೆ ಸರಿಯಾದ ಪರಿಹಾರ ಸಿಕಿಲ್ಲ ಎನ್ನುವ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ನಾವು ನಮ್ಮ ಸರಕಾರದ ಪ್ರತಿನಿಧಿಗಳಲ್ಲಿ, ಮುಖ್ಯಮಂತ್ರಿಯವರಲ್ಲಿ, ಸಚಿವರಲ್ಲಿ, ಸಂಬಂಧಪಟ್ವವರೊಡನೆ ಸೇರಿಕೊಂಡು ರೈತರ ಮನವಿಗೆ ಶೀಘ್ರ ಸ್ಪಂದಿಸುವ ಬಗ್ಗೆ ಒತ್ತಡ ಹೇರುವ ಹಾಗೂ ಮೃತಕುಟುಂಬಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದರು.


ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಕಡಬ ಮಾತನಾಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆನೆ ದಾಳಿಯಿಂದಾಗಿ ತಾಲೂಕಿನಲ್ಲಿ ನಾಲ್ಕು ಜನ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಇದಕ್ಕೆ ಒಂದಷ್ಟು ನ್ಯಾಯವನ್ನು ನೀಡಬೇಕು, ಜನ ಇವತ್ತು ಬದುಕುವುದಕ್ಕೋಸ್ಕರ ಹೋರಾಟ ಮಾಡಬೇಕಾದ ಅನಿವಾರ್ಯತೆ ಕಾಲಘಟ್ಟದಲ್ಲಿ ಇದ್ದೇವೆ. ಹಾಗಾಗಿ ಆನೆ ಬಾಧಿತ ಪ್ರದೇಶದ ಜಾಗೃತ ರೈತ ಕುಟುಂಬಗಳು ಒಟ್ಟಾಗಿ ಸರಕಾರದ ಗಮನ ಸೆಳೆಯುವ ಕಾರ್ಯಕ್ಕೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಈಗಾಗಲೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಹೋರಾಟದ ಮುಂದಡಿ ಇಟ್ಟಿದ್ದೇವೆ ಎಂದರು.
ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ ತಾಲೂಕಿನ 26 ಗ್ರಾಮಗಳು ಅರಣ್ಯ ಪ್ರದೇಶದಿಂದ ಕೂಡಿದೆ ಇಲ್ಲಿ ಆನೆ ದಾಳಿಯಿಂದಾಗಿ ಪ್ರಾಣ ಹಾನಿ , ಕೃಷಿ ಹಾನಿ ನಿರಂತರ ಅಗುತ್ತಲೇ ಇದೆ. ಇದಕ್ಕೆ ಸೂಕ್ತ ಕ್ರಮ ಈವರೆಗೆ ನಡೆದಿಲ್ಲ. ಆದರೆ ನಮ್ಮ ಜಿಲ್ಲೆಯ ಆನೆ ಬಾಧಿತ ಪ್ರದೇಶಗಳಲ್ಲಿ ಅಗಲು ನಿರ್ಮಾಣ ಸೇರಿದಂತೆ ಇನಿತರ ಕಾರ್ಯಕ್ಕೆ 77 ಕೋಟಿ ರೂ ಮಂಜೂರಾಗಿದೆ. ಈ ಹಣ ಏನಾಯ್ತು, ಯಾವುದಕ್ಕೆ ಬಳಕೆಯಾಗಿದೆ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಾಗೃತ ರೈತ ಕುಟುಂಬಗಳ ಒಕ್ಕೂಟದ ಪ್ರಮುಖರಾದ ಕೆ.ಟಿ.ಫಿಲಿಪ್, ತಮ್ಮಯ್ಯ ಗೌಡ, ಅಶ್ರಫ್ ಶೇಡಿಗುಂಡಿ, ಯೂಸೂಫ್ ಸುಂಕದಕಟ್ಟೆ, ಸತೀಶ್ ಮೀನಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here