ನಗರಸಭೆ ಉಪಚುನಾವಣೆ – ಬಿಜೆಪಿಯಿಂದ ಅಭ್ಯರ್ಥಿಗಳ ಘೋಷಣೆ – ವಾರ್ಡ್ ನಂ.1ರಲ್ಲಿ ಸುನಿತಾ – 11ರಲ್ಲಿ ರಮೇಶ್ ರೈ ಕಣಕ್ಕೆ

0

1ನೇ ವಾರ್ಡ್ ಉಳಿಸಿಕೊಂಡು 11ನೇ ವಾರ್ಡ್‌ನಲ್ಲೂ ಬಿಜೆಪಿ ಜಯಭೇರಿ – ಸುದರ್ಶನ್ ಮೂಡಬಿದ್ರೆ ಭವಿಷ್ಯ

ಪುತ್ತೂರು: ನಗರಸಭೆಯ 1ನೇ ವಾರ್ಡ್‌ ನಲ್ಲಿ ಜಯಗಳಿಸಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ ಸಪಲ್ಯ ಮತ್ತು 11ನೇ ವಾರ್ಡ್ ನಲ್ಲಿ‌ ಜಯಗಳಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಶಕ್ತಿ ಸಿನ್ಹಾ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಘೋಷಣೆ ಮಾಡಿದ್ದಾರೆ. 1ನೇ ವಾರ್ಡ್‌ ಗೆ ಈ ಹಿಂದೆ ಸದಸ್ಯರಾಗಿದ್ದ ದಿ.ಶಿವರಾಮ ಸಪಲ್ಯ ಅವರ ಅತ್ತಿಗೆ ಸುನಿತಾ ಮತ್ತು ವಾರ್ಡ್‌ ನಂಬರ್‌ 11ರಲ್ಲಿ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಭ್ಯರ್ಥಿ ರಮೇಶ್‌ ರೈ ಅವರನ್ನು ಕಣಕ್ಕಿಳಿಸುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಅಭ್ಯರ್ಥಿಗಳ ಘೋಷಣೆಯ ಬಳಿಕ ಮಾತನಾಡಿದ ಅವರು, ನಗರಸಭೆ ಚುನಾವಣೆಯಲ್ಲಿ ಕಳೆದ ಬಾರಿ 31 ವಾರ್ಡ್ ಗಳ ಪೈಕಿ 25 ವಾರ್ಡ್‌ ಗಳಲ್ಲಿ ಸ್ಥಾನ ಪಡೆದುಕೊಂಡಿದ್ದೆವು. ಈ ಬಾರಿ ಎರಡು ವಾರ್ಡ್ ಗಳ ಉಪಚುನಾವಣೆಯಲ್ಲಿ 1ನೇ ವಾರ್ಡ್ ಉಳಿಸಿಕೊಂಡು 11ನೇ ವಾರ್ಡ್ ನಲ್ಲಿಯೂ ಜಯಗಳಿಸಲಿದ್ದೇವೆ. ನಗರಸಭೆಯಲ್ಲಿ ಬಿಜೆಪಿ 26 ಸ್ಥಾನಗಳನ್ನು ಹೊಂದಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಗೆಲುವು ಸಾಧಿಸಿದೆ. ಇಂತಹ ಸಂದರ್ಭದಲ್ಲಿ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದ ಅವರು ಡಿ.15ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದರು.


ಬಿಜೆಪಿಯಿಂದ ಭ್ರಷ್ಟಾಚಾರ ರಹಿತ ಆಡಳಿತ:
ಪುತ್ತೂರು ನಗರಸಭೆ ಜೀವಂಧರ್ ಜೈನ್ ಅಧ್ಯಕ್ಷತೆಯಲ್ಲಿ ಚ್ಛತೆಯ ವಿಚಾರದಲ್ಲಿ 31ನೇ ಸ್ಥಾನದಿಂದ ರಾಜ್ಯದಲ್ಲಿ 6ನೇ ಸ್ಥಾನಕ್ಕೆ ಬಂದಿದೆ. ಇದರೊಂದಿಗೆ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ನಡೆಸಿದೆ. ಉತ್ತಮ ರಸ್ತೆಗಳ ನಿರ್ಮಾಣ, ಸ್ಮಾರ್ಟ್ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವ ಮೂಲಕ ಬಿಜೆಪಿ ಬಹಳ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದೆ. ಮಾಜಿ ಶಾಸಕ ಸಂಜೀವ ಮಠಂದೂರು ನಗರೋತ್ಥಾನದ ಮೂಲಕ 31 ಕೋಟಿ ರೂ. ಅನುದಾನ ನೀಡುವ ಮೂಲಕ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪುತ್ತೂರಿನ ಜನರಿಗೆ ನೀರಿನ ಸಮಸ್ಯೆ ಬರಬಾರದು ಎಂಬ ದೃಷ್ಟಿಯಿಂದ 113 ಕೋಟಿ ರೂ. ಜಲಸಿರಿ ಯೋಜನೆ ಪ್ರಗತಿಯಲ್ಲಿದೆ. ಭ್ರಷ್ಟಾಚಾರ ರಹಿತವಾದ ಆಡಳಿತ ನೀಡಿದ ಇತಿಹಾಸ ಬಿಜೆಪಿ ಆಡಳಿತದಲ್ಲಿದ್ದ ನಗರಸಭೆಯಲ್ಲಿತ್ತು ಎಂದು ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಆರ್.ಸಿ.ನಾರಾಯಣ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here