ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದಿಂದ ಸಂವಿಧಾನ ಶಿಲ್ಪಿಯ ಪುನರಾವಲೋಕನ ವಿಶೇಷ ಶಿಬಿರ – ಎಲ್ಲಾ ಗ್ರಂಥಗಳಿಗಿಂತ ಸಂವಿಧಾನ ಶ್ರೇಷ್ಠ ಗ್ರಂಥ: ಸಚಿವ ಡಾ.ಎಚ್.ಸಿ ಮಹಾದೇವಪ್ಪ

0

ಪುತ್ತೂರು: ನಮ್ಮ ದೇಶದ ಸಂವಿಧಾನ ವಿಶ್ವಕ್ಕೆ ಮಾದರಿಯಾದಂತದ್ದು, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಮಗೆ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಎಲ್ಲಾ ಗ್ರಂಥಗಳಿಗಿಂತ ಶ್ರೇಷ್ಠ ಗ್ರಂಥವಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ತತ್ವ ಆದರ್ಶಗಳನ್ನು ಗೌರವಿಸಿ ಅದನ್ನು ಪಾಲಿಸಿ ಜೀವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ| ಹೆಚ್.ಸಿ ಮಹಾದೇವಪ್ಪ ಹೇಳಿದರು.

ಅವರು ಜ.21ರಂದು ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ನಡೆದ ಸಂವಿಧಾನ ಶಿಲ್ಪಿಯ ಪುನರಾವಲೋಕನ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವು ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗದ ಆಶ್ರಯದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ, ಕರ್ನಾಟಕ ಸರ್ಕಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮಂಗಳೂರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ಹಂಪನಕಟ್ಟೆ ಇದರ ಸಂಯುಕ್ತಾಶ್ರಯದಲ್ಲಿ ನಡೆಯಿತು.

ಕಾರ್ಯಕ್ರಮದ ಆಯೋಜಕರಾದ ಬಿ ಜನಾರ್ದನ್ ರವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಪ್ರಯೋಜಕತ್ವದಲ್ಲಿ ಪುತ್ತೂರು ಸ್ವರ ಮಾಧುರ್ಯ ಸಂಗೀತ ಬಳಗ ವತಿಯಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂದಿತು. ಈ ಬಳಗದಲ್ಲಿ ಶಿವ ಉಪ್ಪಳ ಕೀಬೋರ್ಡ್, ಜಗದೀಶ್ ಮಂಗಲ್ಪಾಡಿ ತಬಲ, ಕೃಷ್ಣರಾಜ್ ಪ್ಯಾಡ್, ಗಾಯಕರಾಗಿ ಪ್ರಕೃತಿ, ಅಶ್ವಿತ್, ಪೂರ್ಣಿಮಾ ಕೃಷ್ಣರಾಜ್ ಇಂಪಾದ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಭಾಗವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಯರಾಜ್ ಅಮೀನ್ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಅಂಬೇಡ್ಕರ್ ಅವರ ತತ್ವ ಆದರ್ಶದ ಕುರಿತು ವಿದ್ಯಾರ್ಥಿಗಳಿಗೆ ಹಿತವಚನವನ್ನು ನುಡಿದರು. ಪುತ್ತೂರು ಸುಧಾನ ಶಿಕ್ಷಣ ಸಂಸ್ಥೆ ಸಂಚಾಲಕ ರೇ ವಿಜಯ ಹಾರ್ವಿನ್, ಮಾಜಿ ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಮನೋರಾಜ್ ರಾಜೀವ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ, ಸುಳ್ಯ ನಗರ ಪಂಚಾಯತಿ ಸದಸ್ಯ ಹಿರಿಯ ವಕೀಲರಾದ ಎಂ ವೆಂಕಪ್ಪಗೌಡ ರವರುಗಳು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಮಾಧವ ಎಂ ಕೆ, ಮಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ, ಸ್ವರ ಮಾಧುರ್ಯ ಸಂಗೀತ ಬಳಗದ ನಿರ್ದೇಶಕಿ ಪ್ರಮೀಳಾ ಜನಾರ್ದನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಘಟಕ ಜನಾರ್ದನ್ ಬಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಬಾಲ ಪ್ರತಿಭೆ ಅಸ್ಮಿತ್ ಎ ಜೆ ಪ್ರಾರ್ಥಿಸಿದರು. ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಾದ ಕೃತಿಕಾ, ರಮಿತಾ, ಅಕ್ಷಿತ್, ಹಾಗೂ ಶ್ರೇಯಸ್ ಸಹಕರಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಧ್ವನಿ ಫೌಂಡೇಶನ್ ಸಂಸ್ಥಾಪಕರಾದ ಡಾ.ಶ್ವೇತ ಮಡಪ್ಪಾಡಿ ರವರಿಂದ ಡಾ. ಬಿ.ಆರ್ ಅಂಬೇಡ್ಕರ್‌ರವರ ವಿಚಾರಧಾರೆಗಳ ಕುರಿತು ಉಪನ್ಯಾಸ ನಡೆದು ಸುಂದರ ಜಾನಪದ ಗೀತೆಯನ್ನು ಆಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.

ಸಾಧಕರಿಗೆ ಸೇವಾ ಗೌರವ ಪುರಸ್ಕಾರ :
ಸ್ವರ ಮಾಧುರ್ಯ ಸಂಗೀತ ಬಳಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ಸೇವಾ ಗೌರವ ನೀಡಿ ಅಭಿನಂದಿಸಲಾಯಿತು. ಮಾಧ್ಯಮ ಕ್ಷೇತ್ರದಿಂದ ಹಸೈನಾರ್ ಜಯನಗರ ಸುಳ್ಯ, ಸಿಶೇ ಕಜೆಮಾರ್, ಚಿತ್ರಕಲೆ ಶಿಕ್ಷಕ ಜಗನ್ನಾಥ್ ಅರಿಯಡ್ಕ, ಸಮಾಜ ಸೇವೆ ಬಿ ಕೆ ಸೇಸಪ್ಪ ಬೆದ್ರೆಕಾಡ್, ಸಂಗೀತ ಕೃಷ್ಣರಾಜ್ ಸುಳ್ಯ, ಬಾಲ ಪ್ರತಿಭೆ ಅಸ್ಮಿತ್ ಎ ಜೆರವರುಗಳು ಸನ್ಮಾನ ಸ್ವೀಕರಿಸಿದರು.

LEAVE A REPLY

Please enter your comment!
Please enter your name here