ಪುತ್ತೂರು: ಸದ್ವರ್ತನೆಗಾಗಿ ಪಡೆದಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿರುವ ಬಿಜೆಪಿ ಕಾರ್ಯಕರ್ತ ನವೀನ್ ರೈ ಅವರ ಬಾಂಡ್ನ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರು ಮನವಿ ಮಾಡಿದ್ದಾರೆ.
ಪುತ್ತೂರು ಒಳಮೊಗ್ರು ಗ್ರಾಮದ ಕೈಕಾರ ಪನಡ್ಕ ನಿವಾಸಿ ಬಿಜೆಪಿ ಕಾರ್ಯಕರ್ತ ನವೀನ್ ರೈ ಎಂಬವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸದ್ವರ್ತನೆಗಾಗಿ ಪಿ.ಎ.ಆರ್ 2022ರ ಆಗಸ್ಟ್ 20ರಂದು ದಾಖಲಾಗಿತ್ತು. ಬಳಿಕ ಇವರ ವಿರುದ್ದ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಲ್ಲಿ 2022 ನವೆಂಬರ್ 2 ರಿಂದ 2023ರ ನವೆಂಬರ್ 2ರ ವರೆಗೆ 1 ವರ್ಷದ ಅವಧಿಗೆ ರೂ.50 ಸಾವಿರ ಮೊತ್ತದ ಜಾಮೀನು ಸಹಿತ ಮುಚ್ಚಳಿಕೆ ಪತ್ರವನ್ನು ಪಡೆಯಲಾಗಿತ್ತು. ನವೀನ್ ರೈ ಸದ್ವರ್ತನೆಗಾಗಿ ಹಾಕಿದ ಷರತ್ತುಬದ್ಧ ಮುಚ್ಚಳಿಕೆಯನ್ನು ಉಲ್ಲಂಘನೆ ಮಾಡಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 42/2023 ಕಲಂ : 504, 160, 34 ಐಪಿಸಿ, ಕಲಂ : 25(1ಬಿ)(ಬಿ) ರಂತೆ ಪ್ರಕರಣ ದಾಖಲಾಗಿದೆ. ಆದ್ದರಿಂದ ನವೀನ್ ರೈ ಸದ್ವರ್ತನೆಗಾಗಿ ಹಾಕಿದ ಜಾಮೀನು ಸಹಿತ ಮುಚ್ಚಳಿಕೆಯೊಂದಿಗೆ ನೀಡಿದ ಬಾಂಡ್ನ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕರು ಮನವಿ ಮಾಡಿದ್ದಾರೆ.