ಸೂಟೆಯ ಬೆಳಕಿನೊಂದಿಗೆ ಕಲ್ಲೇಗಕ್ಕೆ ದೈವಗಳ ಭಂಡಾರ ಆಗಮನ-ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ವೈಭವದ ವಾರ್ಷಿಕ ಜಾತ್ರೆ

0

ಸಹಸ್ರ ಸಹಸ್ರ ಸಂಖ್ಯೆಯ ಭಕ್ತರಿಗೆ ಅನ್ನಪ್ರಸಾದ ವಿತರಣೆ

ಪುತ್ತೂರು: ಪುತ್ತೂರಿನ ಎರಡನೇ ಜಾತ್ರೆ ಎಂದೇ ಕರೆಯಲಾಗುತ್ತಿರುವ, ಕಾರಣಿಕ ಕ್ಷೇತ್ರವಾದ ಇತಿಹಾಸ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಜ.24ರಂದು ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು. ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ರಾತ್ರಿ ವಿವಿಧ ಬಿರುದಾವಳಿಗಳು, ದಂಡ್ ಶಿಲಾಲ್, ಕೊಂಬು, ಶಂಖ, ಜಾಗಟೆ, ಟಾಸೆ, ಚೆಂಡೆಯ ಸದ್ದು ಮತ್ತು ಬೆಳಕಿನ ಸೂಟೆಯೊಂದಿಗೆ ದೈವಗಳ ಮೂಲ ನೆಲೆ ಕಾರ್ಜಾಲು ಗುತ್ತುವಿನಿಂದ ದೈವಗಳ ಭಂಡಾರ ಬರುವುದೇ ವಿಶೇಷವಾಗಿತ್ತು. ದೈವಗಳ ಭಂಡಾರದ ಜೊತೆ ಪಲ್ಲಕ್ಕಿಯ ಅಕ್ಕಪಕ್ಕ ದಂಡ್ ಶಿಲಾಲ್ ಬೆಳಕಿತ್ತು. ಮಧ್ಯಾಹ್ನ ಕಲ್ಲೇಗ ದೈವಸ್ಥಾನದಲ್ಲಿ ಸಹಸ್ರಾರು ಮಂದಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.


ಬೆಳಿಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ, ಮಧ್ಯಾಹ್ನ ಶ್ರೀ ದೈವಸ್ಥಾನದ ಬಳಿ ಶ್ರೀ ದೈವಗಳ ಭಂಡಾರದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಾರ್ಜಾಲು ಗುತ್ತಿನಿಂದ ಶ್ರೀ ದೈವಗಳ ಭಂಡಾರ ಹೊರಟು ದೈವಸ್ಥಾನಕ್ಕೆ ಬಂದ ಬಳಿಕ ಗೋಂದೊಲು ಪೂಜೆ, ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಿತು.


ರಸ್ತೆಯುದ್ದಕ್ಕೂ ಬಣ್ಣದ ವಿದ್ಯುತ್ ದೀಪಗಳು, ವಿಶೇಷ ಸುಡುಮದ್ದು ಪ್ರದರ್ಶನ:
ರಾತ್ರಿ ಕಾರ್ಜಾಲು ಗುತ್ತುವಿನಿಂದ ಭಂಡಾರ ಬರುವ ಸಂದರ್ಭ ಮುಖ್ಯರಸ್ತೆಯುದ್ದಕ್ಕೂ ಮಾಲೆ ಪಟಾಕಿ, ಬಣ್ಣ ಬಣ್ಣದ ಸುಡುಮದ್ದು ಪ್ರದರ್ಶನಗೊಂಡಿತು. ಅದೇ ರೀತಿ ರಸ್ತೆಯುದ್ದಕ್ಕೂ ಬಣ್ಣ ಬಣ್ಣದ, ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ದೈವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿತ್ತು.

ದೈವಸ್ಥಾನದ ಆಡಳಿತಾಧಿಕಾರಿಯಾಗಿರುವ ಕಬಕದ ವಿ.ಎ ಚಂಗಪ್ಪ, ಶ್ರೀ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಕೆ., ಕೆ.ಜಿನ್ನಪ್ಪ ಗೌಡ ಕಲ್ಲೇಗ, ನಗರಸಭಾ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಕಲ್ಲೇಗ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನ ಅಧ್ಯಕ್ಷ ಕಲ್ಲೇಗ ಸಂಜೀವ ನಾಯಕ್ ಕಲ್ಲೇಗ, ನವೀನ್ ಕುಮಾರ್, ವಸಂತ ಕಾರೆಕ್ಕಾಡು, ಕಬಕ ಗ್ರಾ.ಪಂ ಸದಸ್ಯ ವಿನಯ ಕಲ್ಲೇಗ, ಜಿನ್ನಪ್ಪ ಪೂಜಾರಿ ಮುರ, ಪ್ರಶಾಂತ್ ಎಸ್, ರಾಘವೇಂದ್ರ ಪ್ರಭು, ಮಾಧವ ಪೂಜಾರಿ ಪಟ್ಲ, ಪ್ರಸಾದ್ ಬೀಡಿಗೆ, ಬಿ.ರವಿಕಿರಣ, ಚಂದ್ರಶೇಖರ್ ಗೌಡ ಕಲ್ಲೇಗ, ಸಂತೋಷ್ ಶೆಟ್ಟಿ, ಪ್ರಶಾಂತ್ ಮುರ, ಶ್ರೀಧರ್ ಪಟ್ಲ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ.ಜಗನ್ನಿವಾಸ ರಾವ್, ಉಮೇಶ್ ಅಜೇಯನಗರ, ಮಹೇಶ್ ಕಲ್ಲೇಗ, ಉಳಿಯ ಶ್ರೀಧರ್ ಸಹಿತ ಸಾವಿರಾರು ಮಂದಿ ರಾತ್ರಿ ಭಂಡಾರ ಬರುವ ಸಂದರ್ಭ ಜೊತೆಗಿದ್ದರು. ಮಧ್ಯಾಹ್ನ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿ ತೆರಳಿದರು.

ಜಗಮಗಿಸಿದ ಬಣ್ಣದ ದೀಪಗಳಿಂದ ಅಲಂಕೃತಗೊಂಡ ಕಲ್ಲೇಗ:
ಕಲ್ಲೇಗ ದೈವಸ್ಥಾನದ ಮುಂದೆ ದ್ವಾರದ ಉದ್ದಕ್ಕೂ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಂಗೊಳಿಸಿತು. ಇದರ ಜೊತೆಗೆ ಭಂಡಾರದ ಮನೆಯಿಂದ ಕಲ್ಲೇಗದ ತನಕ ರಸ್ತೆಯುದ್ದಕ್ಕೂ ಬಾನೆತ್ತರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕೇಸರಿ ಬಂಟಿಂಗ್ಸ್ ಅಳವಡಿಸಲಾಗಿತ್ತು. ಅಲ್ಲಲ್ಲಿ ನಡುವೆ ಭಗವಧ್ವಜವನ್ನು ಅಳವಡಿಸಲಾಗಿತ್ತು. ವರ್ಷಂಪ್ರತಿ ರಸ್ತೆಯ ಬದಿಯಲ್ಲಿ ಇರುವ ಟ್ಯೂಬ್‌ಲೈಟ್ ಬದಲು ಈ ಬಾರಿ ರಸ್ತೆಗೆ ಅಡ್ಡಲಾಗಿ ಎತ್ತರದಲ್ಲೇ ವಿದ್ಯುತ್ ದೀಪಗಳ ಮಾಲೆಗಳನ್ನು ಅಳವಡಿಸಲಾಗಿತ್ತು.


ಮಂಜಲ್ಪಡ್ಪುವಿನಿಂದ ಕಲ್ಲೇಗದ ತನಕ ಸಿಡಿಮದ್ದು ಪ್ರದರ್ಶನ:
ದೈವಗಳ ಭಂಡಾರ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಂಜಲ್ಪಡ್ಪುವಿಗೆ ಆಗಮಿಸಿದ ವೇಳೆ ಸಿಡಿಮದ್ದು ಪ್ರದರ್ಶನ ನಡೆಯಿತು. ಮಂಜಲ್ಪಡ್ಪುವಿನಿಂದ ಕಲ್ಲೇಗ ದೈವಸ್ಥಾನದ ತನಕ ಮಾಲೆ ಪಟಾಕಿ ಸಹಿತ ಅಲ್ಲಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here