ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ-4 ಸಾವಿರ ಸೇವಾ ಕಾರ್ಯಕರ್ತರ ನೇಮಕ, ತಾಲೂಕು ಮಟ್ಟದಲ್ಲೂ ಕಚೇರಿ-‌ಡಿಸಿಎಂ ಡಿ.ಕೆ ಶಿವಕುಮಾರ್

0

ಪುತ್ತೂರು:ರಾಜ್ಯ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಲು 4000 ಮಂದಿ ಸೇವಾ ಕಾರ್ಯಕರ್ತರನ್ನು ಸರಕಾರ ನೇಮಕ ಮಾಡಲಿದ್ದು ಎರಡು ದಿನದೊಳಗೆ ಆದೇಶ ಹೊರ ಬೀಳಲಿದೆ.ತಾಲೂಕು ಮಟ್ಟದಲ್ಲೂ ಕಚೇರಿ ಆರಂಭ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಪಕ್ಷದ ಕಾರ್ಯಕರ್ತರಾಗಿ ತಳ ಮಟ್ಟದಲ್ಲಿ ಕೆಲಸ ಮಾಡಿದವರಿಗೆ ಗ್ಯಾರಂಟಿ ಯೋಜನೆ ಇಂಪ್ಲಿಮೆಂಟ್‌ನಲ್ಲಿ ಸೇವಾ ಕಾರ್ಯಕರ್ತರಾಗಿ ನೇಮಿಸಲಾಗುವುದು,ಅವರಿಗೆ ವೇತನವನ್ನೂ ಸರಕಾರ ನೀಡಲಿದೆ ಎಂದು ಡಿಕೆಶಿ ಹೇಳಿದರು.


ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ 9 ಸೀಟು ಗೆಲ್ಲುವ ವಿಶ್ವಾಸ ಇತ್ತು.ಆದರೆ ಜಿಲ್ಲೆಯ ಫಲಿತಾಂಶ ಸಮಾಧಾನ ತಂದಿಲ್ಲ ಎಂದು ಹೇಳಿದ ಡಿ.ಕೆ.ಶಿವಕುಮಾರ್, ನಾಯಕರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ನಾಯಕರೆಂದು ತೋರಿಸಿಕೊಳ್ಳಬೇಕು.ಬೂತ್ ಮಟ್ಟದಲ್ಲಿ ಕೆಲಸ ಮಾಡಿದವ ಮಾತ್ರ ನಾಯಕ ಹೊರತು ನಾನು ಬರುವಾಗ ಏರ್ ಪೋರ್ಟ್‌ನಲ್ಲಿ ಸೂಟು ಬೂಟು ಹಾಕಿ ನಿಂತವ ಮಾತ್ರ ನಾಯಕನಲ್ಲ ಎಂದು ಹೇಳಿದರು.


ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ.ಆದರೆ ಈ ಬಾರಿ ಎಲ್ಲವನ್ನೂ ಗೆದ್ದಿದ್ದೇವೆ.ಸಿ.ಟಿ.ರವಿಯವರ ನಾಲಗೆ ಬಹಳ ಉದ್ದ ಇತ್ತು ಜನ ಅದನ್ನು ಕತ್ತರಿಸಿ ಬಿಟ್ಟಿದ್ದಾರೆ ಎಂದು ಹೇಳಿದ ಅವರು, ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯ ಅಲ್ಲ.ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.ಬಿಜೆಪಿಯವರು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುವುದಾಗಿ ಹೇಳಿದ್ದರು.ಆದರೆ ಕೊಟ್ಟಿಲ್ಲ,ಉದ್ಯೋಗವನ್ನೂ ಕೊಟ್ಟಿಲ್ಲ,ಆದರೆ ನಾವು ಗ್ಯಾರಂಟಿ ಯೋಜನೆ ಕೊಡುವುದಾಗಿ ಹೇಳಿದ್ದೆವು,ನುಡಿದಂತೆ ನಡೆದಿದ್ದೇವೆ.5 ಗ್ಯಾರಂಟಿಗಳೂ ಜನತೆಗೆ ಪ್ರಯೋಜನ ತಂದಿದೆ ಎಂಬ ವಿಚಾರ ತಿಳಿದು ಸಂತೋಷವಾಯಿತು.ಜನತೆಗೆ ಬೇಕಾದ್ದನ್ನೇ ನಾವು ಕೊಟ್ಟಿದ್ದೇವೆ ಎಂದರಲ್ಲದೆ, ಗ್ಯಾರಂಟಿ ಯೋಜನೆಗಿಂತ ಮಿಗಿಲಾಗಿ ನಾವು ಏನನ್ನು ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.


ರಾಜಕೀಯ ಅಂದ್ರೆ ಕೃಷಿ ಇದ್ದಂತೆ: ರಾಜಕೀಯ ಅಂದ್ರೆ ಕೃಷಿ ಇದ್ದ ಹಾಗೆ, ಉಳಬೇಕು, ಬಿತ್ತಬೇಕು, ಗೊಬ್ಬರ ಹಾಕಬೇಕು ಕೇವಲ ಕಟೌಟ್ ಹಾಕಿದ ಕೂಡಲೇ ನಾಯಕನಾಗಲು ಸಾಧ್ಯವಿಲ್ಲ.ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ಪಕ್ಷ ಬೆಳೆಯಲು ಸಾಧ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.


ವೋಟು ಕೇಳಲು ಗ್ಯಾರಂಟಿ ಯೋಜನೆ ಸಾಕು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೋಟು ಕೇಳಲು ಕೇವಲ ನಾವು ಕೊಟ್ಟ ಐದು ಗ್ಯಾರಂಟಿ ಯೋಜನೆಗಳೇ ಸಾಕು. ಕಾರ್ಯಕರ್ತರು ಇದನ್ನೇ ಮುಂದಿಟ್ಟು ವೋಟು ಕೇಳುವಂತಾಗಬೇಕು ಎಂದು ಹೇಳಿದ ಡಿ.ಕೆ.ಶಿವಕುಮಾರ್, ಗ್ಯಾರಂಟಿಯನ್ನು ಟೀಕೆ ಮಾಡುತ್ತಿದ್ದ ಪ್ರಧಾನಿ ಮೋದಿಯವರೇ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ವ್ಯಂಗ್ಯವಾಡಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್,ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ನಿಕೇತ್‌ರಾಜ್ ಮೌರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್,ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಡಾ|ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಮಾಜಿ ಎಂಎಲ್‌ಸಿ ಐವನ್ ಡಿ ಸೋಜ, ಪಕ್ಷದ ಧುರೀಣರಾದ ಡಾ.ರಘು,ಮಿಥುನ್ ರೈ,ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಕಣಚೂರ್ ಮೋನು, ಅಶೋಕ್ ಕೊಡವೂರ್,ಇನಾಯತ್ ಅಲಿ, ಪದ್ಮರಾಜ್ ಆರ್, ಗ-ರ್ ಉಡುಪಿ ಉಪಸ್ಥಿತರಿದ್ದರು.

ಪಕ್ಷಕ್ಕಾಗಿ ಕೆಲಸ ಮಾಡದ ನಾಯಕರಿದ್ದರೆ ಅವರ ಸ್ಥಾನ ಬದಲಾಯಿಸಿ
ಫೆಬ್ರವರಿ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ನಡೆಯಲಿದ್ದು ಎಐಸಿಸಿ ಅಧ್ಯಕ್ಷರಾದಿ ನಾಯಕರು ಭಾಗವಹಿಸಲಿದ್ದಾರೆ.ಸಮಾವೇಶ ಯಶಸ್ವಿಯಾಗಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್ 5 ಬಾರಿ ಲೋಕಸಭಾ ಕ್ಷೇತ್ರವನ್ನು ಸೋತಿದ್ದರೂ ಧೃತಿಗೆಡಬೇಡಿ. ಚಿಕ್ಕಮಗಳೂರು ಮತ್ತು ಮಡಿಕೇರಿ ಕ್ಷೇತ್ರದ ಗೆಲುವು ನಮಗೆ ಶಕ್ತಿ ತುಂಬಿದೆ.ಬೇರೆ ಪಕ್ಷದಿಂದ ಕಾರ್ಯಕರ್ತರನ್ನು, ನಾಯಕರನ್ನು ಕರೆ ತರಬೇಕು.ಅಲ್ಲಲ್ಲಿ ಪಕ್ಷಕ್ಕೆ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು.ನಾವು ನಾಯಕರೆಂದು ಹೇಳಿಕೊಂಡು ಶೋ ಮಾಡಬಾರದು ತಳಮಟ್ಟದಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಗಟ್ಟಿ ಗೊಳಿಸಬೇಕು.ಪಕ್ಷಕ್ಕಾಗಿ ಕೆಲಸ ಮಾಡದ ನಾಯಕರಿದ್ದರೆ ಅವರ ಸ್ಥಾನವನ್ನು ಬದಲಾಯಿಸಿ ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದರು.

LEAVE A REPLY

Please enter your comment!
Please enter your name here