ಕಡಬ: ಸ್ಪಂದನಾ ಸಮುದಾಯ ಸಹಕಾರ ಸಂಘ ಶುಭಾರಂಭ

0

ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿವೆ – ಭಾಗೀರಥಿ ಮುರುಳ್ಯ


ಕಾಣಿಯೂರು: ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿವೆ. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ದಿ ಹೊಂದಲು ಸಾಧ್ಯ. ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಸಹಕಾರ ಸಂಘಗಳು ಸಹಕಾರಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.


ಅವರು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಫೆ.11ರಂದು ನಡೆದ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಸಹಕಾರ ಕೊಟ್ಟಾಗ ಮಾತ್ರ ಸಂಘ ಅಭಿವೃದ್ದಿಯಾಗುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಸ್ಪಂದನಾ ಸಹಕಾರ ಸಂಘ ಕಡಬ ತಾಲೂಕಿನಲ್ಲಿ ಮಾತ್ರವಲ್ಲದೇ ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ಮಾದರಿ ಸಂಘವಾಗಿ ಮೂಡಿಬರಲಿ ಎಂದರು.


ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಸುರೇಶ್ ಬೈಲುರವರು ಮಾತನಾಡಿ, ಕಡಬದಲ್ಲಿ ಆರಂಭಗೊಂಡಿರುವ ಸ್ಪಂದನಾ ಸಮುದಾಯ ಸಹಕಾರಿ ಸಂಘವು ಎಲ್ಲರ ಜೊತೆ ಸ್ಪಂದಿಸಲಿದೆ. ಸಮಾಜದ ಪ್ರತಿಯೊಬ್ಬರೂ ಸದಸ್ಯರಾಗುವ ಮೂಲಕ ಸಂಘದಲ್ಲಿ ವ್ಯವಹಾರ ನಡೆಸಬೇಕು. ಆ ಮೂಲಕ ಸಂಘ ಅಭಿವೃದ್ದಿಯಲ್ಲಿ ಸಹಕಾರ, ಪ್ರೋತ್ಸಾಹ ನಿರಂತರ ನೀಡಬೇಕು ಎಂದರು. ಕೆಪಿಸಿಸಿ ಸದಸ್ಯ ಜಿ.ಕೃಷ್ಣಪ್ಪರವರು ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಉನ್ನತ್ತ ಹುದ್ದೆಗಳನ್ನು ದ.ಕ ಜಿಲ್ಲೆಯವರು ಅಲಂಕರಿಸಿಕೊಳ್ಳಬೇಕು. ಆ ಮೂಲಕ ಜಿಲ್ಲೆಯ ಪ್ರತಿಯೊಬ್ಬರು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಕಡಬ ತಾಲೂಕಿನಲ್ಲಿ ಪ್ರಾರಂಭಗೊಂಡಿರುವ ಸ್ಪಂದನಾ ಸಮುದಾಯ ಸಹಕಾರ ಸಂಘವು ಮಾದರಿ ಸಂಘವಾಗಿ ಮೂಡಿಬರಲಿ. ಸಂಘದ ಬೆಳವಣಿಗೆಯ ನಿಟ್ಟಿನಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ನ್ಯಾಯಾಧಿಶೆ ನೂರುನ್ನೀಸ ಮಾತನಾಡಿ, ನಮಗೆ ಸಮಾಜ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎನ್ನುವ ಬಗ್ಗೆ ಚಿಂತನೆ ಮಾಡಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ, ಮೌಲ್ಯಯುತ ಶಿಕ್ಷಣ ಕೊಡುವ ಅನಿವಾರ್ಯತೆಯಿದೆ. ಆ ಮೂಲಕ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಸ್ಪಂದನೆ ಸಿಕ್ಕಿದಾಗ ಸ್ಪಂದನಾ ಯಶಸ್ವಿಯಾಗಲು ಸಾಧ್ಯವಿದೆ. ಸಮರ್ಥ ನಾಯಕರು ಸಿಕ್ಕಿದಾಗ ಸಂಸ್ಥೆ ಯಶಸ್ವಿಯಾಗಲು ಸಾಧ್ಯವಿದೆ. ಸುರೇಶ್ ಬೈಲು ಹಾಗೂ ಕೇಶವ ಅಮೈಯವರ ನೇತೃತ್ವದಲ್ಲಿ ಸಹಕಾರಿ ಸಂಘವು ಉನ್ನತ್ತ ಮಟ್ಟಕ್ಕೇರಲಿ ಎಂದರು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಶೆಟ್ಟಿ ಮಾತನಾಡಿ, ಇಚ್ಛಾಶಕ್ತಿಯಿದ್ದಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವೆಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ತಾಲೂಕಿನಲ್ಲಿ ಅನೇಕ ಸಂಘ ಸಂಸ್ಥೆಗಳು ಆರಂಭಗೊಂಡಿದ್ದರೂ, ಅರ್ಥಪೂರ್ಣವಾಗಿ ಇಡೀ ಸಮಾಜಕ್ಕೆ ಒತ್ತು ಕೊಡುವ ಕಾರ್ಯಕ್ರಮ ಇದಾಗಿದೆ. ಕಡಬದಲ್ಲಿ ಆರಂಭಗೊಂಡಿರುವ ಈ ಸಹಕಾರ ಸಂಘವು ರಾಜ್ಯ ಮಟ್ಟದಲ್ಲಿಯೇ ಮಾದರಿ ಸಂಘವಾಗಿ ಉನ್ನತ್ತ ಮಟ್ಟಕ್ಕೇರಲಿ ಎಂದು ಹಾರೈಸಿದರು.

ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಕಡಬ ಶಾಖೆಯ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುದರ್ಶನ ಗೌಡ ಕೋಡಿಂಬಾಳ, ಕಡಬ ಶಾಖೆಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ. ಅಪರೇಟಿವ್ ಸೊಸ್ಶೆಟಿಯ ಅಧ್ಯಕ್ಷ ಗಣೇಶ್ ಕೈಕುರೆ ಶುಭಹಾರೈಸಿದರು. ಕಡಬ ಶಾಖೆಯ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ವ್ಯವಸ್ಥಾಪಕರಾದ ಅಮಿತಾ ಶೆಟ್ಟಿ, ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಗೌರವ ಸಲಹೆಗಾರರಾದ ಚಂದ್ರಶೇಖರ ಗೌಡ ಕೋಡಿಬೈಲು, ಕೃಷ್ಣಪ್ಪ ಗೌಡ ಕೆಂಜಾಳ, ಉಪಾಧ್ಯಕ್ಷ ಚೇತನ್ ಆನೆಗುಂಡಿ, ನಿರ್ದೇಶಕರಾದ ಚಂದ್ರಶೇಖರ ಸಣ್ಣಾರ, ಚಂದ್ರಶೇಖರ ಗೌಡ ಬರೆಪ್ಪಾಡಿ, ನಾಗೇಶ್ ಕೆಡೆಂಜಿ, ರೋಹಿತ್ ಎಚ್.ಎಚ್, ಗೋಪಾಲ ಎಣ್ಣೆಮಜಲು, ಕಾಂತಪ್ಪ ಗೌಡ, ಗೀತಾ ಕುಮಾರಿ ಕೇವಳ, ಹಿರಿಯಣ್ಣ ಗೌಡ, ಆಶಾ ತಿಮ್ಮಪ್ಪ ಗೌಡ, ದಾಮೋದರ ಪಿ, ಲೋಕೇಶ್ ಬಿ.ಎನ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಚೇತನ್ ಆನೆಗುಂಡಿ ಪ್ರಾಸ್ತಾವಿಕ ಮಾತನಾಡಿ, ಸಹಕಾರಿ ಇಲಾಖೆಯ ನಿಯಮ, ನಿಬಂಧನೆಗಳು, ಇಲಾಖೆಯವರು ನೀಡುವ ಮಾರ್ಗದರ್ಶನಗಳು, ಇವೆಲ್ಲವುಗಳನ್ನು ಅನುಸರಿಸಿಕೊಂಡು ಬ್ಯಾಂಕ್‌ನ್ನು ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಜೊತೆಗೆ ಇತರ ಸಮುದಾಯದವರನ್ನು ಸದಸ್ಯರನ್ನಾಗಿ ಸೇರಿಸಿಕೊಂಡು ಬ್ಯಾಂಕ್‌ನ್ನು ಲಾಭದಾಯಕ ಸಹಕಾರ ಸಂಘವನ್ನಾಗಿ ಪರಿವರ್ತಿಸುವ, ಮುನ್ನಡೆಸುವ ಎಲ್ಲರ ಸಹಕಾರ ಅಗತ್ಯ ಎಂದರು. ನಿರ್ದೇಶಕಿ ಗೀತಾ ಕುಮಾರಿ ಕೇವಳ ಪ್ರಾರ್ಥಿಸಿದರು. ನಿರ್ದೇಶಕರಾದ ಹಿರಿಯಣ್ಣ ಗೌಡ ಸ್ವಾಗತಿಸಿ, ರೋಹಿತ್ ಎಚ್.ಎಚ್ ವಂದಿಸಿದರು. ಗೋಪಾಲ ಎಣ್ಣೆಮಜಲು ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ: ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಕರ್ನಾಟಕ ರಾಜ್ಯ ಕೆಪಿಸಿಸಿ ಸದಸ್ಯ ಜಿ.ಕೃಷ್ಣಪ್ಪ, ನ್ಯಾಯಧಿಶೆ ನೂರುನ್ನೀಸ, ಒಕ್ಕಲಿಗ ಗೌಡ ಸಮುದಾಯ ಭವನಕ್ಕೆ ಸ್ಥಳ ನೀಡಿರುವ ಚಾಕೊ ಫಿಲೀಪ್, ಸಹಕಾರ ನೀಡಿರುವ ಮಹಮ್ಮದ್ ರಫಿಕ್ ಅವರನ್ನು ಸನ್ಮಾನಿಸಲಾಯಿತು. ವೀಣಾ ಕೊಲ್ಲೆಸಾಗು, ಗಣೇಶ್ ಕೈಕುರೆ, ಚೇತನ್ ಸನ್ಮಾನಿತರ ಪರಿಚಯ ಓದಿದರು.

LEAVE A REPLY

Please enter your comment!
Please enter your name here