ಕನ್ನಡಪರ ಸೇವೆಗಾಗಿ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಅವರಿಗೆ ‘ವಿಶ್ವ ಮಾನ್ಯ’ ಅಂತರಾಷ್ಟ್ರೀಯ ಪ್ರಶಸ್ತಿ

0

ಪುತ್ತೂರು: 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ‘ಗ್ರಾಮ ಸಾಹಿತ್ಯ ಸಂಭ್ರಮ’ ದ ಮೂಲಕ ಹಳ್ಳಿಹಳ್ಳಿಗೂ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ದೇಶ ವಿದೇಶಗಳಲ್ಲಿಲ್ಲೂ ಕನ್ನಡದ ಕಂಪು ಪಸರಿಸಲು ಕಾರಣೀಭೂತರಾದ ಇವರ ಕನ್ನಡ ಪರ ಸೇವೆಯನ್ನು ಗುರುತಿಸಿ ಫೆ.18ರಂದು ದುಬೈನಲ್ಲಿ ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿರುವ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ “ವಿಶ್ವ ಮಾನ್ಯ ಪ್ರಶಸ್ತಿ 2024 “ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಸ್ಥಾಪಕ ಅಧ್ಯಕ್ಷ ಮಂಜುನಾಥ ಸಾಗರ್, ಅಬುದಾಬಿಯ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಲೆಫ್ಟಿನೆಂಟ್ ಜನರಲ್ ಅಂಬಾಸಿಡರ್ ಆಗಿರುವ ಡಾ. ಡೇವಿಡ್ ಫ್ರ್ಯಾಂಕ್ ಫರ್ನಾಂಡಿಸ್, ಸೆಂಟ್ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರ ಶೋಧನ್ ಪ್ರಸಾದ್, ಅಂತಾರಾಷ್ಟ್ರೀಯ ಜಾನಪದ ಗಾಯಕರಾದ ಗೋ. ನಾ. ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಮಿತ್ರಂಪಾಡಿ ಜಯರಾಮ್ ರೈ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ದಿವಂಗತ ಮಿತ್ರಂಪಾಡಿ ಚನ್ನಪ್ಪ ರೈ ಹಾಗೂ ದಿಂಬ್ರಿ ಗುತ್ತು ಸರಸ್ವತಿ ರೈ ಅವರ ಸುಪುತ್ರ. ಪ್ರಸ್ತುತ ಬಿನ್ ಫರ್ದನ್ ಸಂಸ್ಥೆಯ ಸಿ. ಎಫ್. ಓ ಆಗಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೈವ, ದೇವಸ್ಥಾನಗಳ ಜೀರ್ಣೋದ್ಧಾರದಲ್ಲಿ ಗೌರವಾಧ್ಯಕ್ಷರಾಗಿ, ಜೀರ್ಣೋದ್ದಾರ ಸಮಿತಿ ಸದಸ್ಯರಾಗಿ ಮಹತ್ತರ ಕಾರ್ಯವನ್ನು ಮಾಡುವ ಜೊತೆಗೆ ನೂರಕ್ಕೂ ಅಧಿಕ ಬಡಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ, ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಿರುತ್ತಾರೆ. ಕೊರೊನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಸಾವಿರಕ್ಕೂ ಅಧಿಕ ಬಡಕುಟುಂಬಗಳಿಗೆ ಅಕ್ಕಿಯನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಜಾತ್ರಾ ಗದ್ದೆಯಲ್ಲಿ ಸಿಲುಕಿರುವ ಜಾಯಿಂಟ್ ವಿಲ್ ಕುಟುಂಬಕ್ಕೆ ಎರಡು ತಿಂಳು ಆಶ್ರಯದಾತರಾಗಿದ್ದ ವಿಚಾರವನ್ನು ನಾವು ಸ್ಮರಿಸಬಹುದಾಗಿದೆ.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ನಡೆಸಲ್ಪಡುವ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮದಲ್ಲಿ ಪ್ರತಿ ತಿಂಗಳು ನಡೆಯುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮಹಾ ಪೋಷಕರಾಗಿರುತ್ತಾರೆ. ಈ ಗ್ರಾಮ ಸಾಹಿತ್ಯ ಸಂಭ್ರಮದಲ್ಲಿ, ಕನ್ನಡದಲ್ಲೂ ಐ.ಎ.ಎಸ್ ಬರೆಯಿರಿ ಅಭಿಯಾನ, ಕವಿಗೋಷ್ಠಿ ಕಥಾ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ನಡೆಯುತ್ತಿದ್ದು ಸುಮಾರು 5000 ಪುಟಾಣಿ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಗೌರವ ಹಾಗೂ 50 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ ಇದನ್ನ ನೋಡಿ ಆನಂದಿಸಿದ ಗೌರವ ಇವರಿಗೆ ಸಲ್ಲುತ್ತದೆ. ಈ ರೀತಿಯ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ಬಹುಶಃ ಭಾರತದಲ್ಲಿಯೇ ಪ್ರಥಮ ಎನ್ನಬಹುದು.

ಕಳೆದ ಇಪ್ಪತೈದು ವರ್ಷಗಳಿಂದ ಅರಬ್ ರಾಷ್ಟ್ರದಲ್ಲೂ ಕನ್ನಡ ಸೇವೆ ಹಾಗೂ ಕನ್ನಡಿಗರ ಸೇವೆ ಮಾಡುವ ಇವರು ಕನ್ನಡ ಬಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ತನು ಮನ ಧನಗಳಿಂದ ಸಹಕಾರ ನೀಡುತ್ತಾ ಬಂದಿದ್ದಾರೆ. ಡಾ ಹರ್ಷ ಕುಮಾರ್ ರೈ ಅವರ ನಿರ್ದೇಶನದ, ಪುತ್ತೂರು ಉಮೇಶ್ ನಾಯಕ ಅವರ ಸಾಹಿತ್ಯದ ‘ಅಷ್ಟ ಕ್ಷೇತ್ರ ಗಾನ ವೈಭವ’ ಎಂಬ ಕನ್ನಡದ ಭಕ್ತಿ ಗೀತೆಯನ್ನು ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಿದ್ದು, ಇದು ಇಂಡಿಯಾ ಬುಕ್ಸ್ ಆಫ್ ರೆಕಾರ್ಡಿನಲ್ಲೂ ಕೂಡ ವಿಶ್ವ ದಾಖಲೆಯಾಗಿರುತ್ತದೆ.

ಕಳೆದ 25ವರ್ಷಗಳಿಂದ ಇವರ ಧಾರ್ಮಿಕ, ಶೈಕ್ಷಣಿಕ, ಸಮಾಜಸೇವೆ ಹಾಗೂ ಕನ್ನಡಪರ ಸೇವೆಯನ್ನು ಗುರುತಿಸಿ 2022 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ‘2023 ರ ‘ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ’ ,ಇಂಟರ್ನ್ಯಾಷನಲ್ ಐಕಾನ್ ಪ್ರಶಸ್ತಿ’ ಟೋಸ್ಟ್ ಮಾಸ್ಟರ್ ಅಂತರಾಷ್ಟ್ರೀಯ ಪ್ರಶಸ್ತಿಯಾದ DTM ಮತ್ತು “ಟ್ರಿಪಲ್ ಕ್ರೌನ್” ಪ್ರಶಸ್ತಿಗೂ ಭಾಜನರಾಗಿದ್ದಾರೆ ಇತ್ಯಾದಿ ಸಂಘ-ಸಂಸ್ಥೆಗಳಿಂದಲೂ ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಯೇರಿದೆ.

ದೂರದ ಗಲ್ಫ್ ರಾಷ್ಟ್ರದಲ್ಲಿ ಇದ್ದರೂ ಸದಾ ಭಾರತ ದೇಶ, ಕನ್ನಡ ನಾಡು,ನುಡಿ, ನೆಲ, ಜಲದ ಶ್ರೇಯೋಭಿವೃದ್ಧಿಗಾಗಿ ಸದಾ ತನ್ನನ್ನು ತಾನು ಅರ್ಪಿಸಿಕೊಂಡು ಗಲ್ಫ್ ರಾಷ್ಟ್ರದಲ್ಲೂ ಸಮಾಜ ಸೇವೆಯನ್ನು ಮಾಡುತ್ತಾ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಸದಾ ಕನ್ನಡಪರ ವಿಚಾರವನ್ನು ಚಿಂತಿಸುವ ಅಬುದಾಬಿಯಲ್ಲಿರುವ ಮಿತ್ರಂಪಾಡಿ ಜಯರಾಮ ರೈ ಅವರ ದೇಶ ಸೇವೆ ಹಾಗೂ ಸಮಾಜ ಸೇವೆ ನಿಜವಾಗಿಯೂ ಅಭಿನಂದನೀಯ ಹಾಗೂ ಶ್ರೇಷ್ಠವೆನಿಸುತ್ತದೆ.

LEAVE A REPLY

Please enter your comment!
Please enter your name here