ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ-ಪರನೀರು ರಸ್ತೆ – ವಿವಾದಕ್ಕೆ ತೆರೆ, ಸಂಚಾರಕ್ಕೆ ಮುಕ್ತ- ಶಾಸಕರ ಮುತುವರ್ಜಿಗೆ ಜೈ ಎಂದ ಸ್ಥಳೀಯರು

0

40 ವರ್ಷಗಳ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿದ ಶಾಸಕ ಅಶೋಕ್‌ ರೈ: ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರ ಸಾಥ್

ಪುತ್ತೂರು: ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ ಪರನೀರು ರಸ್ತೆ ವಿವಾದ ಕೊನೆಗೂ ಇತ್ಯರ್ಥವಾಗಿದೆ, ಕಳೆದ 40 ವರ್ಷಗಳಿಂದ ಇದ್ದ ಈ ವಿವಾದವನ್ನು ಪುತ್ತೂರು ಶಾಸಕ ಅಶೋಕ್ ರೈ ಮಾತುಕತೆ ಮೂಲಕ ಇತ್ಯರ್ಥ ಮಾಡಿದ್ದು ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಅವರ ಮುತವರ್ಜಿಯಿಂದ ವಿವಾದವೊಂದು ಇತ್ಯರ್ಥವಾಗಿದ್ದು ರಸ್ತೆ ನಿರ್ಮಾಣ ಕಾರ್ಯ ನಡೆದಿದೆ.

ಏನಿದು ವಿವಾದ?
ಡೆಕ್ಕಾಜೆ ಪರನೀರು ರಸ್ತೆಯ ವಿವಾದ ಸೃಷ್ಟಿಯಾಗಿ ಸುಮಾರು 40 ವರ್ಷಗಳು ಕಳೆದಿದೆ. ರಸ್ತೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೋಡಿಂಬಾಡಿ ಗ್ರಾಪಂನಿಂದ ಹಿಡಿದು ಹೈಕೋರ್ಟು, ಲೋಕಾಯುಕ್ತ ನ್ಯಾಯಾಲಯ ಬಹುಶಃ ಎಲ್ಲಾ ನ್ಯಾಯಾಲಯಗಳಲ್ಲೂ ಈ ವ್ಯಾಜ್ಯ ತಲುಪಿತ್ತು. ಆದರೆ ಇದುವರೆಗೂ ಸ್ಪಷ್ಟವಾದ ಪರಿಹಾರ ಅಥವಾ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶವೂ ಬಂದಿರಲಿಲ್ಲ. ಕೋಡಿಂಬಾಡಿ ಗ್ರಾಪಂ ಗ್ರಾಮಸಭೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಈ ರಸ್ತೆ ವಿಚಾರ ಪ್ರತೀ ವರ್ಷವೂ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಹಲವು ಬಾರಿ ಇದೇ ಕಾರಣಕ್ಕೆ ಗ್ರಾಮಸಭೆಯೇ ಅಲ್ಲೋಕಲ್ಲೋಲವಾಗಿತ್ತು. ಆದರೆ ಪರಿಹಾರ ಅಥವಾ ವಿವಾದ ಇತ್ಯರ್ಥ ಮಾಡಲು ಸಾದ್ಯವಾಗಿರಲಿಲ್ಲ.

ಸಂಘಟನೆಗಳ ಪ್ರಯತ್ನವೂ ವಿಫಲವಾಗಿತ್ತು
ವಿವಿಧ ಸಂಘಟನೆಗಳ ಮುಖಂಡರು, ಜಾತಿ ಸಂಘಟನೆಗಳ ಮುಖಂಡರು, ಧಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ವ್ಯಾಜ್ಯದ ಬಗ್ಗೆ ರಾಜಿಮಾತುಕತೆ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಾಜಿ ಶಾಸಕರ ಬಳಿಯೂ ಇದೇ ವಿಚಾರವನ್ನು ಕೊಂಡೊಯ್ಯಲಾಗಿತ್ತಾದರೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಪರನೀರು ಡೆಕ್ಕಾಜೆ ರಸ್ತೆ ವಿಚಾರ ಗ್ರಾಮದ ಪ್ರತೀಯೊಬ್ಬರಿಗೂ ಗೊತ್ತಿದೆ ಎನ್ನುವಷ್ಟರ ಮಟ್ಟಿಗೆ ಇಲ್ಲಿ ವಿವಾದ ಜೀವಂತವಾಗಿತ್ತು. ರಾಜಿಮಾತುಕತೆ ಎಲ್ಲವೂ ವಿಫಲವಾದಾಗ ಇನ್ನೇನು ಮಾಡಲು ಸಾಧ್ಯವಿಲ್ಲ ಎಂದು ರಸ್ತೆ ಬೇಡಿಕೆಯಿತ್ತ ಕುಟುಂಬಗಳು ರಸ್ತೆ ನಿರ್ಮಾಣದ ಆಸೆಯನ್ನೇ ಬಿಟ್ಟಿದ್ದರು.

ಕೊಂಡಿಯಂತೆ ಕೆಲಸ ಮಾಡಿದ ಗ್ರಾಪಂ ಉಪಾಧ್ಯಕ್ಷ
ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ರವರು ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಕೊಂಡಿಯಂತೆ ಕೆಲಸ ಮಾಡಿದ್ದಾರೆ. ಇಲ್ಲಿನ ವಿವಾದವನ್ನು ಮುಗಿಸಲೇಬೇಕು ಎಂಬ ಉದ್ದೇಶದಿಂದ ಕೆಲವರನ್ನು ಸೇರಿಸಿ ಒಂದು ಹಂತದ ಮಾತುಕತೆಯನ್ನು ನಡೆಸಿದ ಬಳಿಕ ಪುತ್ತೂರು ಶಾಸಕ ಅಶೋಕ್ ರೈ ಗಮನಕ್ಕೆ ತಂದಿದ್ದಾರೆ. ವಿವಾದದ ಬಗ್ಗೆ ತಿಳಿದಿದ್ದ ಶಾಸಕರು ಎರಡೂ ಕಡೆಯವನರನ್ನು ಕರೆಸಿ ಮಾತುಕತೆ ನಡೆಸಿದರು. ಒಂದೆರಡು ಹಂತದ ಮಾತುಕತೆ ನಡೆಸಿದ ಬಳಿಕ ಎರಡೂ ಕಡೆಯವರು ಒಪ್ಪಿಕೊಂಡರು. ವಿವಾದವನ್ನು ಇತ್ಯರ್ಥ ಪಡಿಸುವುದು ಮತ್ತು ಈ ಹಿಂದೆ ರಸ್ತೆಗಳಾಗಿ ವಿವಿಧ ಕಡೆಗಳಲ್ಲಿ ಹಾಕಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯುವುದು ಸೇರಿದಂತೆ ಎಲ್ಲಾ ವಿಧದ ಮಾತುಕತೆಗಳನ್ನು ನಡೆಸಿದ ಶಾಸಕರು ಕೊನೆಗೂ 40 ವರ್ಷಗಳ ಹಿಂದಿನ ವಿವಾದವನ್ನು ಇತ್ಯರ್ಥ ಪಡಿಸಿದ್ದಾರೆ. ವಿವಾದ ಇತ್ಯರ್ಥವಾದ ಬಳಿಕ ಸುಮಾರು 15 ಅಡಿ ಅಗಲದ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಶಾಸಕರು ಭೇಟಿ ನೀಡಿ ರಸ್ತೆ ವೀಕ್ಷಣೆ ಮಾಡಿದರು.

ಅತ್ಯಂತ ಸಂತೋಷವಾಗಿದೆ: ಅಶೋಕ್ ರೈ
ಡೆಕ್ಕಾಜೆ -ಪರನೀರು ರಸ್ತೆ ವಿವಾದ ಇತ್ಯರ್ಥಗೊಂಡಿರುವುದು ನನಗೆ ಅತ್ಯಂತ ಸಂತೋಷವಾಗಿದೆ. ನಮ್ಮ ಮಾತಿಗೆ ಗೌರವ ಕೊಡುವ ಕೆಲಸ ಎರಡೂ ಕಡೆಯಿಂದ ಆಗಿದೆ, ಅವರ ಮಾತಿಗೂ ನಾವು ಗೌರವ ಕೊಡುತ್ತೇವೆ. ಏನೋ ಒಂದು ಸಣ್ಣ ಗಳಿಗೆಯಲ್ಲಿ ಉಂಟಾಗಿದ್ದ ವಿವಾದ 40 ವರ್ಷಗಳ ಬಳಿಕ ಇತ್ಯರ್ಥವಾಗಿದೆ. ರಸ್ತೆ ನಿರ್ಮಾಣ ಕಾರ್ಯವೂ ಆಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಗೆ ಕಾಂಕ್ರೀಟ್ ಕೂಡಾ ಆಗಲಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಶಾಸಕರು ಹೇಳಿದ್ದಾರೆ.

ಬಹುಕಾಲದ ಬೇಡಿಕೆ ಈಡೇರಿತು: ಡಾ.‌ರಾಜಾರಾಂ
ಪರನೀರು ರಸ್ತೆ ವಿಚಾರ ಗೊತ್ತಿಲ್ಲದವರು ಬಹಳ ಅಪರೂಪ. ಇದಕ್ಕೆ ಪರಿಹಾರ ಸೂಚಿಸಬೇಕೆಂದು ಹಲವಾರು ಮಂದಿ ವ್ಯರ್ಥ ಪ್ರಯತ್ನವನ್ನು ಮಾಡಿದ್ದರು. ರಸ್ತೆಗಾಗಿ ಕೋರ್ಟು ಕೇಸಿನ‌ ಅಲೆದಾಟವೂ ನಡೆದಿತ್ತು. ಎಲ್ಲವನ್ನೂ ಮೆಟ್ಟಿ ಮಾನವೀಯತೆಗೆ ರಹದಾರಿ ಎಂಬಂತೆ ಶಾಸಕ ಅಶೋಕ್ ರೈ ಎಲ್ಲರನ್ನೂ ಒಟ್ಟಾಗಿ ಸೇರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಈ ಒಗ್ಗಟ್ಟು ಮುಂದೆಯೂ‌ ಮುಂದುವರೆಯಲಿ, ಎಂದು ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ ಶುಭಹಾರೈಸಿದರು.

ಎಲ್ಲರಿಗೂ ಕೃತಜ್ಞತೆಗಳು: ಪದ್ಮಪ್ಪ ಪೂಜಾರಿ
ಪುತ್ತೂರಿನ ಶಾಸಕ ಅಶೋಕ್ ರೈಯವರ ನೇತೃತ್ವ ಹಾಗೂ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಸಹಕಾರದಿಂದಾಗಿ ಕಳೆದ 40 ವರ್ಷಗಳಿಂದ ಇದ್ದ ವಿವಾದ ಇತ್ಯರ್ಥವಾಗಿದೆ. ಓರ್ವ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನೂ ಮಾಡಬಹುದು ಎಂಬುದಕ್ಕೆ ಅಶೋಕ್ ರೈ ಸಾಕ್ಷಿಯಾಗಿದ್ದಾರೆ. ಶಾಸಕರ ನೇತೃತ್ವ ಇಲ್ಲದೇ ಇರುತ್ತಿದ್ದರೆ ಈ ವಿವಾದ ಇತ್ಯರ್ಥ ವಾಗುತ್ತಿರಲಿಲ್ಲ. ಎಲ್ಲರಿಗೂ ಸಂತೋಷವಾಗಿದೆ ಎಂದು ರಸ್ತೆ ಹೋರಾಟಗಾರ ಪದ್ಮಪ್ಪ ಪೂಜಾರಿ ತಿಳಿಸಿದ್ದಾರೆ.

40 ವರ್ಷಗಳ ವಿವಾದ ಇತ್ಯರ್ಥವಾಗಿದೆ, ನಾವೆಲ್ಲರೂ ಇದರಲ್ಲಿ ಭಾಗಿಯಾಗಿದ್ದರೂ ಶಾಸಕ ಅಶೋಕ್ ರೈ ರಾಜಿ ಮಾತುಕತೆಯ ನೇತೃತ್ವ ವಹಿಸಿಕೊಳ್ಳದೇ ಇರುತ್ತಿದ್ದರೆ ಇದು ಇತ್ಯರ್ಥವಾಗುತ್ತಲೇ ಇರಲಿಲ್ಲ. ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಶಾಸಕರು ಮಾಡಿದ್ದಾರೆ. ನಾಲ್ಕರಿಂದ 5 ಕುಟುಂಬಗಳನ್ನು ಒಂದು ಗೂಡಿಸುವ ಪುಣ್ಯದ ಕಾರ್ಯವನ್ನು ಮಾಡಿದ್ದಾರೆ. ಓರ್ವ ಶಾಸಕನಾದವರು ಜನತೆಗೆ ಹೇಗೆ ಒಳಿತನ್ನು ಬಯಸಬಹುದು ಎಂಬುದಕ್ಕೆ ಶಾಸಕರು ಮಾದರಿಯಾಗಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಗ್ರಾಮವೇ ಸಂತೋಷಗೊಂಡಿದೆ ಎಂದು ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಹೇಳಿದ್ದಾರೆ.

ಶಾಸಕರಿಗಾಗಿ ನಾವು ಒಂದಾಗಿದ್ದೇವೆ: ವೀರಪ್ಪ ಪೂಜಾರಿ
ಶಾಸಕ ಅಶೋಕ್ ರೈಯವರ ಮನವಿ ಮಾಡಿದ ಕಾರಣಕ್ಕೆ ನಾವು ಎಲ್ಲಾ ವಿಚಾರವನ್ನು ಬದಿಗಿಟ್ಟು ವಿವಾದವನ್ನು ಇತ್ಯರ್ಥಪಡಿಸಿಕೊಂಡಿದ್ದೇವೆ. ಶಾಸಕರು ಈ ವಿಚಾರದಲ್ಲಿ ಕೈ ಹಾಕದೇ ಇರುತ್ತಿದ್ದರೆ ಇನ್ನಷ್ಟು ವರ್ಷ ವಿವಾದ ಹಾಗೆಯೇ ಇರುತ್ತಿತ್ತು. ಶಾಸಕರ ತಂದೆಯವರು ನಮ್ಮ ಗುರುಗಳಾಗಿದ್ದಾರೆ. ಒಳ್ಳೆಯದಕ್ಕೆ ರಸ್ತೆ ಆಗುವುದಾದರೆ ನಮ್ಮ ಅಭ್ಯಂತರವಿಲ್ಲ. ಪರಸ್ಪರ ಸಹಕಾರದಿಂದ ಏನೂ ಬೇಕಾದರೂ ಮಾಡಬಹುದು. ಶುಭವಾಗಲಿ ಎಂದು ಸ್ಥಳೀಯರಾದ ವೀರಪ್ಪ ಪೂಜಾರಿಯವರು ಅಭಿಪ್ರಾಯಪಟ್ಟಿದ್ದಾರೆ. ರಸ್ತೆ ವೀಕ್ಷಿಸಿ ಉದ್ಘಾಟನೆ ನೆರವೇರಿಸಿದ ಶಾಸಕರನ್ನು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು. ರಸ್ತೆ ನಿರ್ಮಾಣಕ್ಕೆ ಜಾಗ ನೀಡಿದ ಎಲ್ಲರನ್ನೂ ಶಾಸಕರು ಗೌರವಿಸಿದರು.

ಈ ಸಂದರ್ಭದಲ್ಲಿ ಮುರಳೀಧರ್ ರೈ ಮಠಂತಬೆಟ್ಟು, ನಿರಂಜನ್ ರೈ ಮಠಂತಬೆಟ್ಟು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ ಬಿ, ಕೋಡಿಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ, ಕೋಡಿಂಬಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ, ಹಿರಿಯರಾದ ಸೀತಾರಾಮ ಶೆಟ್ಟಿ ಹಗ್ಗಡೆಹಿತ್ಪು, ಪದ್ಮಪ್ಪ ಪೂಜಾರಿ, ಪಂಜಿಗುಡ್ಡೆ ಈಶ್ವರಭಟ್, ರೂಪೇಶ್ ಶೆಟ್ಟಿ ಅಲಿಮಾರ್, ಸದಸ್ಯರಾದ ಪುಷ್ಪಾ ನಾಯ್ಕ, ವೀರಪ್ಪ ಪೂಜಾರಿ ಡೆಕ್ಕಾಜೆ, ಕೃಷ್ಣ ಪ್ರಭು ಕೋಲಾಜೆ, ಪದ್ಮನಾಭ ಶೆಟ್ಟಿ ರೆಂಜಾಜೆ, ವಿಕ್ರಂ ಶೆಟ್ಟಿ ಅಂತರ, ಯೋಗೀಶ್ ಸಾಮಾನಿ, ಪದ್ಮನಾಭ ಆಚಾರಿ ಪರನೀರು, ಶಿವಪ್ರಸಾದ್ ಕೋಡಿಂಬಾಡಿ, ಸುಬ್ರಹ್ಮಣ್ಯ ಶೆಟ್ಟಿ ರೆಂಜಾಜೆ, ಪ್ರೇಮ ಪರನೀರು, ಪ್ರೇಮ ಡೆಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here