ಪುತ್ತೂರು ಜಾತ್ರೋತ್ಸವ: ರಥ ಕಲಶ ಮತ್ತು ತೇರ ಬಲಿ ಕಾರ್ಯಕ್ರಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಎ.17ರಂದು ರಾತ್ರಿ ಜರುಗುವ ಬ್ರಹ್ಮರಥೋತ್ಸವದ ಮೊದಲು ನಸುಕಿನ ಜಾವ ರಥ ಕಲಶ ಮತ್ತು ತೇರ ಬಲಿ ಕಾರ್ಯಕ್ರಮ ನಡೆಯಿತು.


ಭವ್ಯವಾಗಿ ಕಂಗೊಳಿಸುವ ರಥದ ಕಣ್ ದೃಷ್ಟಿ ತೆಗೆಯಲು ರಥ ಕಲಶ ಮತ್ತು ತೇರ ಬಲಿ ಮಾಡಲಾಗುತ್ತದೆ. ದೇವಳದ ತಂತ್ರಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರು ಬ್ರಹ್ಮರಥದಲ್ಲಿ ಶ್ರೀ ದೇವರ ಪೀಠದಲ್ಲಿ ಕಲಶಾಭಿಷೇಕ ಮಾಡಿದರು. ದೇವಳದ ಪರಿಚಾರಕರಾದ ಚಿಕ್ಕಪುತ್ತೂರು ಕುಟುಂಬದ ಪೂರ್ವಜರು ಮಾಡಿದ ಸಂಪ್ರದಾಯದಂತೆ ತೇರ ಬಲಿ ತಯಾರಿ ಕಾರ್ಯ ಚಿಕ್ಕಪುತ್ತೂರಿನ ಲಿಂಗಪ್ಪ ಗೌಡ ಅವರ ನೇತೃತ್ವದಲ್ಲಿ ನಡೆಯಿತು.

ಎ.17ರಂದು ನಸುಕಿನ ಜಾವ ತಂತ್ರಿಗಳು ದೇವಳದ ಒಳಗಿನಿಂದ ತರುವ ಕಲಶ ನೀರನ್ನು ಬ್ರಹ್ಮರಥದ ದೇವರ ಪೀಠಕ್ಕೆ ತಂತ್ರಿಗಳು ಅಭಿಷೇಕ ಮಾಡುತ್ತಾರೆ. ರಥದ ಸುತ್ತ ವಿವಿಧ ಹೊರಗಿನ ಗಣಗಳಿಗೆ ಬಲಿ ಹಾಕಿ ರಥಕ್ಕೆ ರಕ್ಷಣೆ ಮಾಡುತ್ತಾರೆ. ಮತ್ತೊಂದು ಕಡೆ ತೇರ ಬಲಿ ಸಿದ್ಧತೆ ಮಾಡುವ ಚಿಕ್ಕಪುತ್ತೂರು ಕುಟುಂಬದವರು ರಥ ಸಾಗುವ ರಥ ಬೀದಿಯ ಇಕ್ಕೆಲಗಳಲ್ಲಿ ಕುರ್ದಿ ನೀರು ಹಾಕಿ ಕೋಳ್ತಿರಿ ಇಡುತ್ತಾರೆ. ರಥದ ಬೀದಿಯ ಉದ್ದಕ್ಕೂ ಸುಮಾರು 150 ಕೋಳ್ತಿರಿ, 170 ಹಾಳೆಚಿಲ್ಲಿ ಇಡಲಾಗುತ್ತದೆ.ಎ.17ರಂದು ನಸುಕಿನ ಜಾವ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಥ ಕಲಶ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ಎ.ವಸಂತ ಕುಮಾರ್ ಕೆದಿಲಾಯ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಪರಿಚಾರಕ ಚಂದ್ರಶೇಖರ್ ಪಿ.ಜಿ., ನಾಗೇಶ್ ಮತ್ತು ದೇವಳದ ಅರ್ಚಕ ಉದಯ ಭಟ್ ಮತ್ತು ಇತರ ಅರ್ಚಕ ವೃಂದದವರು, ದೇವಳದ ಸಿಬ್ಬಂದಿ ಪದ್ಮನಾಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here