ಗೋಳಿತ್ತೊಟ್ಟು: ಬಿಜೆಪಿ ಕಾರ್ಯಕರ್ತರ ಸಭೆ

0

ಎಲೆಚುಕ್ಕಿ, ಹಳದಿ ಎಲೆ ರೋಗಕ್ಕೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರಕ್ಕೆ ಪ್ರಯತ್ನ- ಕ್ಯಾ.ಬ್ರಿಜೇಶ್ ಚೌಟ

ನೆಲ್ಯಾಡಿ: ಅಡಿಕೆ ಕೃಷಿಗೆ ಕಾಡುತ್ತಿರುವ ಎಲೆಚುಕ್ಕಿ, ಹಳದಿ ಎಲೆ ರೋಗಕ್ಕೆ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ತಜ್ಞರೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದ.ಕ.ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.


ಅವರು ಎ.17ರಂದು ಸಂಜೆ ಗೋಳಿತೊಟ್ಟು ಶ್ರೀ ಸಿದ್ಧಿ ವಿನಾಯಕ ಕಲಾಮಂದಿರದಲ್ಲಿ ನಡೆದ ನೆಲ್ಯಾಡಿ ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ದೇಶದ ಆಡಳಿತ ನೀತಿ ರೂಪಿಸುವಲ್ಲಿ ಯುವ ಜನತೆಗೆ ದೊಡ್ಡ ಪಾತ್ರ ಇದೆ. ಯುವಕರು ದೇಶದ ದೊಡ್ಡ ಆಸ್ತಿ, ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಬದಲಾವಣೆಗೆ ಯುವ ಜನತೆ ಮುನ್ನುಡಿ ಬರೆಯಬೇಕು. ಗೆದ್ದು ಬಂದಲ್ಲಿ ಜನರ ಪ್ರತಿನಿಧಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಭಾರತ ದೇಶದ ಮಣ್ಣಿನ ಸಂಸ್ಕೃತಿ, ಭಾಷೆ ಉಳಿವಿಗಾಗಿ ಸಂಘಟನೆ ಹಿರಿಯರು ಹಾಕಿದ ಮಾರ್ಗದರ್ಶನಂತೆ ಬಿಜೆಪಿ ಪಕ್ಷ ನಡೆಯುತ್ತಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಅವಕಾಶವನ್ನು ನೀಡುವಂತಹ ಪಕ್ಷ ಇದಾಗಿದೆ ಎಂದರು. ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಲೋಕಸಭಾ ಚುನಾವಣೆ ಉಸ್ತುವಾರಿ ಹರೀಶ್ ಕಂಜಿಪಿಲಿ, ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ, ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ ಬಲ್ಯ, ಬಿಜೆಪಿ ಹಿರಿಯ ಮುಖಂಡ ಅಪ್ಪಯ್ಯ ಮಣಿಯಾಣಿ, ಜಿ.ಪಂ.ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಬಾಲಕೃಷ್ಣ ಬಾಣಜಾಲು ಉಪಸ್ಥಿತರಿದ್ದರು. ರವಿರಾಜ್ ಸ್ವಾಗತಿಸಿದರು. ವಿನಯ ನಿರೂಪಿಸಿದರು. ನೂಜಿ ಚಂದ್ರಶೇಖರ್ ವಂದಿಸಿದರು.

LEAVE A REPLY

Please enter your comment!
Please enter your name here