ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಸ್ಕಿಲ್ ಎಡ್ಜ್ ಕಾರ್ಯಾಗಾರಕ್ಕೆ ಚಾಲನೆ

0

ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು : ಡಾ.ಶ್ರೀಶ ಭಟ್


ಪುತ್ತೂರು: ಕಲೆ, ವಾಣಿಜ್ಯ, ವಿಜ್ಞಾನ ಹೀಗೆ ಎಲ್ಲಾ ಕೋರ್ಸ್‌ಗಳಿಗೂ ಅತ್ಯುತ್ತಮ ಉದ್ಯೋಗಾವಕಾಶಗಳಿವೆ. ಆದರೆ ಆ ಅವಕಾಶಗಳು ಎಲ್ಲಿವೆ ಮತ್ತು ಹೇಗಿವೆ ಎಂಬುದನ್ನು ವಿದ್ಯಾರ್ಥಿಗಳು ಸಾಕಷ್ಟು ಪೂರ್ವದಲ್ಲಿಯೇ ತಿಳಿದುಕೊಳ್ಳಬೇಕು ಮಾತ್ರವಲ್ಲದೆ ಆ ಉದ್ಯೋಗಕ್ಕೆ ಭೇಕಾದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಡಾ.ಶ್ರೀಶ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಒಂದು ವಾರದ ಸ್ಕಿಲ್ ಎಡ್ಜ್ ಅನ್ನುವ ಕಾರ್ಯಾಗಾರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಕಲಾ ವಿಷಯದಿಂದ ತೊಡಗಿ ವಿಜ್ಞಾನದವರೆಗೆ ಯಾವುದನ್ನು ಓದಿದವರಿಗೂ ಅರವತ್ತರಿಂದ ಎಪ್ಪತ್ತು ಸಾವಿರದಷ್ಟು ಸಂಪಾದನೆ ತರುವ ಉದ್ಯೋಗಗಳಿವೆ. ಆದರೆ ಆ ಉದ್ಯೋಗಗಳಿಗೆ ಹೇಗೆ ತಯಾರಾಗಬೇಕು ಎಂಬುದನ್ನು ಮೊದಲೇ ಅರಿತು ಸಿದ್ಧರಾಗಬೇಕು. ಕೌಶಲ್ಯವಿರದ ಯಾರೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಗಳಿಸುವುದಕ್ಕೆ ಸಾಧ್ಯವಿಲ್ಲ. ಆದರೆ ತೊಂಬತ್ತೈದು ಶೇಕಡಾಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿ ಹಂತದಲ್ಲೂ ಸ್ಪಷ್ಟ ಗುರಿಯನ್ನೇ ನಿರ್ಧರಿಸಿರುವುದಿಲ್ಲ. ಹೀಗಾಗಿ ಔದ್ಯೋಗಿಕ ಜಗತ್ತಿಗೆ ಅಡಿಯಿಡುವಾಗ ಎಡವಿ ಬೀಳುತ್ತಿದ್ದಾರೆ ಎಂದರು.


ಆಧುನಿಕ ದಿನಗಳಲ್ಲಿ ಉದ್ಯೋಗ ಪಡೆಯುವುದಕ್ಕೆ ಸಾಕಷ್ಟು ಹಂತಗಳನ್ನು ದಾಟಬೇಕಾಗುತ್ತದೆ. ಅಂಕಗಳ ಮಾನದಂಡದಿಂದ ತೊಡಗಿ ಬೌದ್ಧಿಕ ಸಾಮರ್ಥ್ಯದವರೆಗೆ ನಾನಾ ಬಗೆಯ ಪರೀಕ್ಷೆಗಳನ್ನು, ಸಂದರ್ಶನಗಳನ್ನು ಎದುರಿಸಿ ಯಶಸ್ಸು ಗಳಿಸಬೇಕಾಗುತ್ತದೆ. ಈ ನಡುವೆ ಸಾಕಷ್ಟು ಸ್ಪರ್ಧೆಯೂ ಇದೆ. ದೇಶದಲ್ಲಿ ಸರಿ ಸುಮಾರು 18 ಲಕ್ಷ ಜನ ವಿದ್ಯಾರ್ಥಿಗಳು ಪ್ರತಿ ವರ್ಷ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬಂದರೆ ಐದರಿಂದ ಆರು ಲಕ್ಷ ಜನ ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಇನ್ನು ಪದವಿ ಕಾಲೇಜುಗಳಿಂದ ಹೊರಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಿಂತ ಐದಾರು ಪಟ್ಟು ಜಾಸ್ತಿ ಇದೆ. ಇಷ್ಟೊಂದು ಅಗಾಧ ಸಂಖ್ಯೆಯ ಮಧ್ಯೆ ನಾವು ಯಶಸ್ಸು ಗಳಿಸಬೇಕಾದರೆ ಸರಿಯಾದ ಸಿದ್ಧತೆ ಅಗತ್ಯ ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ವಿವಿಧ ಕಾರ್ಯಾಗಾರಗಳಲ್ಲಿ ಭಾಗಿಯಾಗುವುದರಿಂದ ನಮ್ಮೊಳಗಿನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆಯಾ ಕ್ಷೇತ್ರದಲ್ಲಿ ತಜ್ಞರಾದವರೇ ಬಂದು ಒದಗಿಸಿಕೊಡುವ ಮಾಹಿತಿ ನಮ್ಮ ಮುಂದಿನ ಬದುಕಿಗೆ ದೀವಿಗೆಯೆನಿಸುತ್ತದೆ ಎಂದರು.
ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ ಪ್ರಸಾದ್ ಎ, ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತೃಪ್ತಿ ಪ್ರಾರ್ಥಿಸಿ, ವಿದ್ಯಾರ್ಥಿನಿ ಮಾನ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ದೀಪ ವಂದಿಸಿ, ವಿದ್ಯಾರ್ಥಿನಿ ಪಂಚಮಿ ಬಾಕಿಲಪದವು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here