ವಿವೇಕಾನಂದ ಶಿಕ್ಷಣ ವಿದ್ಯಾಲಯದಲ್ಲಿ “ಯುವ ಸಬಲೀಕರಣಕ್ಕೆ ಸ್ವಾಮಿ ವಿವೇಕಾನಂದರ ಮಾರ್ಗ” ಎಂಬ ವಿಷಯದ ಕುರಿತು ಇಪ್ಪತ್ತರ ಸಂಭ್ರಮ – ಸರಣಿ ಉಪನ್ಯಾಸ ಮಾಲಿಕೆ, ಸಂಚಿಕೆ-3ರ ಕಾರ್ಯಕ್ರಮ ಜೂ.10ರಂದು ನಡೆಯಿತು.
![](https://puttur.suddinews.com/wp-content/uploads/2024/06/IMG_20240610_110528.jpg)
ಸಂಪನ್ಮೂಲ ವ್ಯಕಿಯಾಗಿ ಆಗಮಿಸಿ ಉಪನ್ಯಾಸ ನೀಡಿದ ರಾಮಕೃಷ್ಣ ಮಠ ಬಸವನಗುಡಿ, ಬೆಂಗಳೂರು ಇಲ್ಲಿನ ಸ್ವಾಮಿ ವೀರೇಶಾನಂದಜಿ, ವ್ಯಕ್ತಿ ಗೌರವವಿಲ್ಲದಿದ್ದರೆ ಆ ವೃತ್ತಿಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ಮೊದಲು ನಾವು ದೇಶದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು. ಉತ್ತಮ ಶಿಕ್ಷಕನಾಗಬೇಕಾದರೆ ಮೊದಲು ಪ್ರೀತಿ ಎಂಬ ಮಾಧ್ಯಮವನ್ನು ತನ್ನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಪ್ರತಿಯೊಂದು ಮಗುವಿನಲ್ಲೂ ಪರಿಪೂರ್ಣತೆ ಇದೆ. ಆದರೆ ಗುರು ಮಕ್ಕಳ ಸುಪ್ತ ಶಕ್ತಿಯನ್ನು ಹೊರ ತರಲು ಸಹಾಯ ಮಾಡಬೇಕು. ತನ್ನ ಕಾಲ ಮೇಲೆ ನಿಲ್ಲಲು ಸಬಲೀಕರಣ ಬೆಳೆಸಲು ಸಹಾಯ ಮಾಡಬೇಕು. ಸ್ವಾಮಿ ವಿವೇಕಾನಂದರು ಶಿಕ್ಷಕರಿಗೆ ಆದರ್ಶವಾದಿ, ಮೊದಲು ಶಿಕ್ಷಕರು ಸಬಲೀಕರಣಗೊಳ್ಳಬೇಕು. ಮಕ್ಕಳಲ್ಲಿ ವಿವೇಕಾನಂದರ ಮೂರು ಸಂದೇಶಗಳಾದ ಏಕಾಗ್ರತೆ, ಆತ್ಮವಿಶ್ವಾಸ, ಚಾರಿತ್ರ್ಯತೆ ಅಳವಡಿಸಿಕೊಳ್ಳುವಂತೆ ಮಾಡಬೇಕು. ಶಿಕ್ಷಣದಲ್ಲಿ ಮೊದಲು ಚಾರಿತ್ರ್ಯತೆಯನ್ನು ಗಳಿಸಬೇಕು. ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಸಂಸ್ಕಾರ ಮೂಡುತ್ತದೆ, ಒಳ್ಳೆಯ ಸಂಸ್ಕಾರದಿಂದ ಒಳ್ಳೆಯ ಚಾರಿತ್ರ್ಯ ಮೂಡುತ್ತದೆ. ಶಿಕ್ಷಣದಲ್ಲಿ ಚಾರಿತ್ರ್ಯತೆ ತುಂಬಾ ಮುಖ್ಯ ಎಂದರು.
ಕಾರ್ಯಕ್ರಮದ ಕುರಿತು ಮಾತನಾಡಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕರಾಗಿರುವ ಗಂಗಮ್ಮ ಎಚ್ ಶಾಸ್ತ್ರಿ ವಿವೇಕಾನಂದರು ಹಾಗೂ ಶಿಕ್ಷಣದ ನಡುವೆ ಅವಿನಾಭಾವ ಸಂಬಂಧವಿದೆ. ನಾವು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸಬೇಕು, ಅರಿಷಡ್ವರ್ಗಗಳನ್ನು ತೊಡೆದು ಹಾಕಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಹಿರಿಯ ಸ್ವಯಂಸೇವಕ ಬೆಳ್ಳಾಲ ಗೋಪಿನಾಥ ರಾವ್ ಹಾಗೂ ರಾಮಕೃಷ್ಣ ಆಶ್ರಮದ ಸುಜಿತ್, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ ನಾಯಕ್, ನವೀನ್ ಪ್ರಸಾದ್ ರೈ ಕೈಕಾರ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾl ಶೋಭಿತಾ ಸತೀಶ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕಿ ಭುವನೇಶ್ವರಿ ಎ. ಎನ್ ಧನ್ಯವಾದ ಸಲ್ಲಿಸಿದರು. ಪ್ರಶಿಕ್ಷಣಾರ್ಥಿಗಳಾದ ಚೈತ್ರಾ, ಕಾವ್ಯಶ್ರೀ ನಿರೂಪಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು.