![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಮುಸ್ಲಿಮರು ಆಚರಿಸುವ ಹಬ್ಬಗಳ ಪೈಕಿ ಈದುಲ್ ಅಝ್ಹಾ ಹಬ್ಬವು ಒಂದು. ಜಾಗತಿಕ ವಲಯದಲ್ಲಿ ಸರ್ವ ಮುಸಲ್ಮಾನರು ಎಲ್ಲಾ ಹಬ್ಬಗಳ ಹಾಗೆ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ತ್ಯಾಗ ಮತ್ತು ಬಲಿದಾನ ಸಾವಿರಾರು ಹಿಂದಿನ ಐತಿಹಾಸಿಕ ಚಾರಿತ್ರಿಕ ಘಟನೆಯನ್ನು ಸ್ಮರಿಸುವ ಹಬ್ಬ.ಈ ಕುರಿತಾದ ಚರಿತ್ರೆಗಳು ಮತ್ತು ನೈಜ ಘಟನೆಗಳು ಖುರ್ಆನ್ ಹಾಗೂ ಇಸ್ಲಾಮಿನ ಧಾರ್ಮಿಕ ಗ್ರಂಥದಲ್ಲಿ ಪುರಾವೆ ಸಮೇತ ಉಲ್ಲೇಖವಿದೆ.
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಅರೇಬಿಕ್ ತಿಂಗಳ ಕೊನೇಯ ತಿಂಗಳ ಝುಲ್ ಹಿಜ್ಜ ಬಹಳ ಪವಿತ್ರ ತಿಂಗಳು. ಆರೋಗ್ಯ, ಸಂಪತ್ತು, ಸೌಕರ್ಯ ಹೊಂದಿ ಜವಾಬ್ದಾರಿ ಮುಕ್ತನಾಗಿರುವ ಮುಸ್ಲಿಂ ವ್ಯಕ್ತಿಯ ಮೇಲೆ ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಹಜ್ ಕಡ್ಡಾಯವಾಗಿದೆ. ಅದರ ನಿರ್ವಹಣೆಗಿರುವ ಸಮಯ ಮತ್ತು ತಿಂಗಳು ಇದೇ ಝುಲ್ಹಜ್ ಆಗಿರುತ್ತದೆ.
ಆಧ್ಯಾತ್ಮಿಕ ಶುದ್ಧೀಕರಣದೊಂದಿಗೆ ಮಕ್ಕಾದಲ್ಲಿರುವ ಪವಿತ್ರ್ ಭವನ ಕಅಬಾಗೆ ತೆರಳಿ ಕಅಬಾ ಭವನಕ್ಕೆ ಪ್ರದಕ್ಷಿಣೆ, ಸಫಾ ಮರ್ವಾ ಬೆಟ್ಟ, ಮಿನಾ, ಅರಫಾ ಮೈದಾನ, ಮುಝ್ದಲಿಫಾ, ಜಮ್ರಾ, ಹೀಗೆ ವಿವಿಧ ಕಡೆಗಳಲ್ಲಿ ಮಹತ್ವದ ಪವಿತ್ರವಾದ ಕರ್ಮಗಳನ್ನು ಪೂರೈಸುವ ಮಕ್ಕಾ ಪುಣ್ಯ ಯಾತ್ರೆಗೆ ಹಜ್ ಎಂದು ಕರೆಯುತ್ತೇವೆ. ಹಜ್ ನಂತೆಯೇ ಉಮ್ರಾ ಕೂಡ ಇದೇ ಕರ್ಮಗಳನ್ನು ಒಳಗೊಂಡಿವೆ. ಆದರೆ ಹಜ್ ವರ್ಷಕ್ಕೆ ಒಂದು ಬಾರಿ ಝುಲ್ಹಿಜ್ಜ ತಿಂಗಳಲ್ಲಿ ಮಾತ್ರ. ಉಮ್ರಾ ವರ್ಷದ ಎಲ್ಲಾ ದಿನವು ಮಾಡಬಹುದಾಗಿದೆ.
ಅಲ್ಲಾಹನ ಇಷ್ಟ ದಾಸರಾಗಿ ವಿಶೇಷ ಸ್ಥಾನಮಾನ ಪಡೆದ ಮಹಾನರಾಗಿದ್ದ ಹಜ್ರತ್ ಇಬ್ರಾಹಿಮ್ ಅಲೈಹಿಸ್ಸಲಾಮ್ ಅವರು ಪ್ರವಾದಿಯಾದ ಬಳಿಕ ದೇವರು ಇಬ್ರಾಹಿಮ್ (ಅ.ಸ)ರವರನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸುತ್ತಾನೆ. ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ಎಲ್ಲವನ್ನೂ ತ್ಯಾಗ ಮಾಡಿ ದೇಶಾಂತರ ಹೊರಟು, ಸಂತಾನ ಭಾಗ್ಯ ಇಲ್ಲದೆ ಕೊರಗುತ್ತಿದ ಪ್ರವಾದಿ ಇಬ್ರಾಹಿಂ ಮತ್ತು ಹಾಜರ ಬೀವಿ ಅವರಿಗೆ ಪವಾಡದಂತೆ ವೃದ್ಧಾಪ್ಯದಲ್ಲಿ ಲಭಿಸಿದ ಗಂಡು ಮಗು ಇಸ್ಮಾಯಿಲ್ ಸ್ವಂತ ಮಗನನ್ನೂ ದೇವರ ಆದೇಶದಂತೆ ಬಲಿ ಕೊಡಲು ಮುಂದಾಗುತ್ತಾರೆ. ನಿರ್ಜಲ, ನಿರ್ಜನ ಮರುಭೂಮಿಯಲ್ಲಿ ಪುಟ್ಟ ಮಗುವನ್ನು ಮಡದಿಯನ್ನು ಏಕಾಂಗಿಯಾಗಿ ಬಿಟ್ಟು ಬಿಡುತ್ತಾರೆ. ಅಲ್ಲಾಹನ ಎಲ್ಲಾ ಆಜ್ಞೆಗಳನ್ನು ಈಡೇರಿಸಿ ಪರೀಕ್ಷೆಗಳನ್ನು ಎದುರಿಸಿ ದೇವ ಪ್ರೀತಿಗೆ ಪಾತ್ರರಾಗಿ ಪ್ರವಾದಿ ಇಬ್ರಾಹಿಂ ಮತ್ತು ಮಡದಿ ಹಾಜರ, ಮಗ ಇಸ್ಮಾಯಿಲ್ ತ್ಯಾಗ ಮತ್ತು ಅಚಲ ವಿಶ್ವಾಸ ಸ್ನೇಹ ನಂಬಿಕೆಯ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಪ್ರವಾದಿ ಇಬ್ರಾಹಿಂ ಅವರ ನಂತರ ತನ್ನ ಮಗ ಇಸ್ಮಾಯಿಲ್ ಪ್ರವಾದಿ ಪಟ್ಟವನ್ನು ಸ್ವೀಕರಿಸುತ್ತಾರೆ. ಹಝ್ರತ್ ಇಬ್ರಾಹಿಂ ಅವರಿಗೆ ಖಲೀಲುಲ್ಲಾಹ್ ಅಲ್ಲಾಹನ ಸ್ನೇಹಿತ ಎಂಬ ಗೌರವ ಪದವಿಯನ್ನು ನೀಡಿ ಗೌರವಿಸುತ್ತಾನೆ. ಪ್ರವಾದಿ ಇಬ್ರಾಹಿಂರವರ ಜೀವನ ಬದುಕು ಇತಿಹಾಸವನ್ನು ನೆನಪಿಸುವುದೇ ಹಜ್ ಬಕ್ರೀದ್ ಆಚರಣೆಯ ಉದ್ದೇಶ.
ಈದುಲ್ ಅಝ್ಹಾ ಝುಬಾ ಮಾಡುವ ಹಬ್ಬ, ಕುರಿ ಮೇಕೆ ದೇವರ ಹೆಸರಿನಲ್ಲಿ ಬಲಿ ಕೊಡುವುದು ಈ ಹಬ್ಬದ ವಿಶೇಷ. ಹಬ್ಬದ ನಂತರ ಮೂರು ದಿನಗಳ ಕಾಲ ಬಲಿ ನೀಡಲು ಸಮಯಾವಕಾಶ ಇರುತ್ತದೆ. ಈದ್ ದಿನದಂದು ಹೊಸ ಉಡುಪುಗಳನ್ನು ಧರಿಸುವುದು, ಸುಗಂಧ ಹಚ್ಚುವುದು, ಈದ್ಗಾ ಮಸೀದಿಗೆ ತೆರಳಿ ನಮಾಝ್, ಪ್ರವಚನ, ಪ್ರಾರ್ಥನೆಯಲ್ಲಿ ಪಾಲ್ಗೊಳ್ಳೂದು ಬಡವರಿಗೆ ದಾನ ನೀಡುವುದು, ಸ್ನೇಹಿತರ, ಕುಟುಂಬಸ್ಥರ ಮನೆಗೆ ತೆರಳಿ ಈದ್ ಸಂದೇಶ ಸಾರುವುದು, ಇವೆಲ್ಲವೂ ಈದ್ ದಿನದ ವಿಶೇಷ ಕಾರ್ಯಗಳಾಗಿವೆ. ಪರಸ್ಪರ ಶಾಂತಿ ಸೌಹಾರ್ದತೆ ಪ್ರೀತಿ ಸ್ನೇಹ ಹಂಚುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಹಾತ್ಮರು ನಡೆದ ಹಾದಿಯಲ್ಲಿ ಸಾಗಿ ದೇವ ಪ್ರೀತಿಗೆ ಪಾತ್ರರಾಗುವುದೇ ಹಬ್ಬದ ಮುಖ್ಯ ಉದ್ದೇಶ.
![](https://puttur.suddinews.com/wp-content/uploads/2024/06/hashim-bannooru.jpg)