ಜು.15:ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನ ಕಾರ್ಯಕ್ರಮ ಜು.15ರಂದು ನಡೆಯಲಿದೆ.
ವಿವೇಕಾನಂದ ಕಾಲೇಜಿನ ಪ್ರವೇಶದ್ವಾರದ ಬಳಿ ಇದರ ಉದ್ಘಾಟನೆಯು ನಡೆಯಲಿದೆ.

ವಿಶೇಷ ಮೌಲ್ಯಗಳುಳ್ಳ ಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳು ಹಾಗೂ ಇತರ ಗಿಡ-ಮರಗಳನ್ನು ನೆಟ್ಟು ಇಳೆಯನ್ನು ಸಸ್ಯ ಶ್ಯಾಮಲೆಯಾಗಿಸುವ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನವನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ನಡೆಸಲಾಗುತ್ತದೆ.
ಕಳೆದ ವರ್ಷ ವಿವೇಕ ಸಂಜೀವಿನಿ ಕಾರ್ಯಕ್ರಮದಲ್ಲಿ ನಮ್ಮ ಸುತ್ತಮುತ್ತಲಿನ ಔಷಧೀಯ ಸಸ್ಯಗಳ ಪರಿಚಯ ಪ್ರಾತ್ಯಕ್ಷಿಯನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳ ಮೂಲಕ ಸಹಸ್ರಾರು ಔಷಧೀಯ ಗುಣಗಳುಳ್ಳ ಗಿಡಗಳನ್ನು ನಾಟಿ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಈ ವರ್ಷ ವಿದ್ಯಾವರ್ಧಕ ಸಂಘದ ಒಡೆತನದಲ್ಲಿರುವ ಖಾಲಿ ಸ್ಥಳಗಳಲ್ಲಿ, ವಿವಿಧ ವಿದ್ಯಾಸಂಸ್ಥೆಗಳ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಹಸಿರು ಆವರಣವನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಗಳ ಸಿಬ್ಬಂದಿಗಳು, ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಇತರ ವಿದ್ಯಾರ್ಥಿ ಸ್ವಯಂಸೇವಕರ ನೆರವಿನೊಂದಿಗೆ ಸುಮಾರು 4000 ಗಿಡಗಳನ್ನು ನೆಡುವುದಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಎ.ವಿ.ನಾರಾಯಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಡಾ.ದೇವಿಪ್ರಸಾದ್.ಕೆ.ಎನ್ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ವಿವಿಧ ಸಂಸ್ಥೆಗಳ ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here