ಪುತ್ತೂರಿನ ಬ್ರಾಯನ್ ಸಿಕ್ವೇರಾ ನಾಯಕನಟನಾಗಿ ನಟಿಸಿದ ಕೊಂಕಣಿ ಚಲನಚಿತ್ರ ‘ಪಯಣ್’ ಪ್ರೀಮಿಯರ್ ಶೋ-ಹೌಸ್‌ಫುಲ್ ಪ್ರದರ್ಶನ

0

ಪುತ್ತೂರು: ಪುತ್ತೂರಿನ ಸ್ಫುರದ್ರೂಪಿ, ಎತ್ತರದ ಮೈಕಟ್ಟಿನ ಯುವಕ, ಚಿಕ್ಕಪುತ್ತೂರಿನ ಬ್ರಾಯನ್ ಸಿಕ್ವೇರಾ ನಾಯಕ ನಟನಾಗಿ ನಟಿಸಿದ ಚೊಚ್ಚಲ ಕೊಂಕಣಿ ಚಲನಚಿತ್ರ ‘ಪಯಣ್(ಣ)’ ಇದರ ಪ್ರೀಮಿಯರ್ ಶೋ ಕಿಕ್ಕಿರಿದು ಸಿನಿ ಪ್ರೇಕ್ಷಕರ ನಡುವೆ ಸೆ.14ರಂದು ಪುತ್ತೂರಿನ ಭಾರತ್ ಸಿನೆಮಾಸ್‌ನಲ್ಲಿ ಸಂಜೆ ಜರಗಿತು.


ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಆಶೀರ್ವಚನ ನೀಡುತ್ತಾ ಮಾತನಾಡಿ, ಕೊಂಕಣಿ ಭಾಷೆಯ ಪ್ರಸಿದ್ಧ ಗಾಯಕ ಮೆಲ್ವಿನ್ ಪೆರಿಸ್ ಹಾಗೂ ನೀತಾ ಪೆರಿಸ್ ದಂಪತಿರವರ ನಿರ್ಮಾಣದೊಂದಿಗೆ ಮಾತ್ರವಲ್ಲ ಸಂಗೀತ್ ಗುರು ಜೋಯೆಲ್ ಪಿರೇರಾರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಪಯಣ್ ಚಿತ್ರದಲ್ಲಿ ಪುತ್ತೂರಿನ ತರುಣ ಬ್ರಾಯನ್ ಸಿಕ್ವೇರಾರವರು ನಾಯಕ ನಟನಾಗಿ ನಟಿಸಿದ್ದಾರೆ. ಮೆಲ್ವಿನ್ ಪೆರಿಸ್‌ರವರು ಕೊಂಕಣಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡುವ ಮೂಲಕ ಪ್ರತಿಭೆಯನ್ನು ತೋರ್ಪಡಿಸಿರುತ್ತಾರೆ. ಜೊತೆಗೆ ಸಂಗೀತ್ ಗುರು ಜೋಯೆಲ್ ಪಿರೇರಾರವರು ತಮ್ಮ ಸಂಗೀತದೊಂದಿಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ ಎಂದ ಅವರು ಚಿತ್ರ ನಿರ್ಮಾಣ ಮಾಡುವುದರ ಹಿಂದೆ ಬಹಳಷ್ಟು ತಂತ್ರಜ್ಞರ ಶ್ರಮವಿದೆ. ಅವರ ಶ್ರಮ ಯಶಸ್ವಿಯಾಗಬೇಕಾದರೆ ನಾವು ಸಿನೆಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.


ಬ್ರಾಯನ್ ಆಲ್ಬಂನಲ್ಲಿ ಹೆಜ್ಜೆ:
ನಟ ಬ್ರಾಯನ್ ಸಿಕ್ವೇರಾರವರು ಕೆಲವೊಂದು ಕೊಂಕಣಿ ಆಲ್ಬಂಗಳಲ್ಲಿ ಹೆಜ್ಜೆ ಹಾಕಿದ ಅನುಭವ ಹೊಂದಿರುತ್ತಾರೆ ಜೊತೆಗೆ ೨೦೨೦ರ ಮಿ.ಕರ್ನಾಟಕ ಪೊಪ್ಯುಲರ್ ಐಕಾನ್ ಆಗಿಯೂ ಹೊರ ಹೊಮ್ಮಿದ್ದರು. 29ರ ಹರೆಯದ ಬ್ರಾಯನ್ ಸಿಕ್ವೇರಾರವರು ಮಾಯಿದೆ ದೇವುಸ್ ಚರ್ಚ್‌ನಲ್ಲಿ ನಡೆಯುವ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ಪ್ರಹಸನಗಳಲ್ಲಿ, ಡ್ಯಾನ್ಸ್‌ನಲ್ಲಿ ಗೆಳೆಯರೊಂದಿಗೆ ನಟಿಸಿ ‘ಸೈ’ ಎನಿಸಿಕೊಂಡಿದ್ದಾರೆ.


ಈ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕರಾದ ಗಾಯಕ ಮೆಲ್ವಿನ್ ಪೆರಿಸ್ ಹಾಗೂ ನೀತಾ ಪೆರಿಸ್ ದಂಪತಿ, ನಾಯಕ ಬ್ರಾಯನ್ ಸಿಕ್ವೇರಾ, ನಾಯಕಿ ನಟಿಯರಾದ ಶೈನಾ ಡಿ’ಸೋಜ, ಕೇಟ್ ಪಿರೇರಾ ಸಹಿತ ಚಿತ್ರತಂಡ ಉಪಸ್ಥಿತರಿದ್ದರು. ಉದ್ಯಮಿ ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.

ಸೆ.20:ಕರುನಾಡಿನಾದ್ಯಂತ ಬಿಡುಗಡೆ..
ಕಾಲಾತೀತ ಪರಂಪರೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಚಿತ್ರೀಕರಿಸಲ್ಪಟ್ಟ ಕೊಂಕಣಿ ಚಿತ್ರ ‘ಪಯಣ್(ಪಯಣ)’. ಸಂಗೀತ್ ಘರ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ನಿರ್ಮಾಪಕರಾಗಿ ಗಾಯಕ ಮೆಲ್ವಿನ್ ಹಾಗೂ ನೀತಾ ಪೆರಿಸ್ ದಂಪತಿ, ಚಿತ್ರಕ್ಕೆ ಸಂಗೀತ್ ಗುರು ಜೋಯೆಲ್ ಪಿರೇರಾರವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದ ಪ್ರೀಮಿಯರ್ ಶೋಗೆ ಸಿನಿ ಪ್ರೇಕ್ಷಕರಿಂದ ಚಿತ್ರಮಂದಿರ ತುಂಬಿ ತುಳುಕಿದ್ದು, ಸೆ.20ರಂದು ಈ ಚಿತ್ರವು ಕರುನಾಡಿನಾದ್ಯಂತ ಅಂದರೆ ಮಂಗಳೂರು, ಪಡುಬಿದ್ರೆ, ಉಡುಪಿ, ಕುಂದಾಪುರ, ಪುತ್ತೂರು ಇಲ್ಲಿನ ಭಾರತ್ ಸಿನೆಮಾಸ್‌ನಲ್ಲಿ ಹಾಗೂ ಸುರತ್ಕಲ್‌ನ ಸಿನೆ ಗ್ಯಾಲಕ್ಸಿಯಲ್ಲಿ ಬಿಡುಗಡೆಗೊಳ್ಳಲಿದ್ದು ಸಿನಿ ಪ್ರೇಕ್ಷಕರು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಚಿತ್ರತಂಡ ’ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ..
ಪುತ್ತೂರಿನ ಉದಯೋನ್ಮುಖ ನಾಯಕ ನಟ ಬ್ರಾಯನ್ ಸಿಕ್ವೇರಾರವರು ನಟಿಸಿದ ಈ ಪಯಣ್ ಚಿತ್ರದ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನೆಮಾ ವೀಕ್ಷಿಸಿದ ಸಿನಿ ಪ್ರೇಕ್ಷಕರು ‘ಉತ್ತಮ ಚಿತ್ರ’ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಎಲ್ಲರೂ ಈ ಚಿತ್ರವನ್ನು ವೀಕ್ಷಿಸಿ ಪುತ್ತೂರಿನ ನಾಯಕ ನಟ ಬ್ರಾಯನ್ ಸಿಕ್ವೇರಾ ಹಾಗೂ ಚಿತ್ರತಂಡಕ್ಕೆ ಪ್ರೋತ್ಸಾಹಿಸಬೇಕೆಂದು ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

LEAVE A REPLY

Please enter your comment!
Please enter your name here