ಆಲಂಕಾರು: ’ಜೇಸಿ ಸಪ್ತಾಹ-2024’ ಸಮಾರೋಪ, ಸಾಧಕರಿಗೆ ಸನ್ಮಾನ, ಜೇಸಿಐ ಕುಟುಂಬ ಸಮ್ಮಿಲನ

0

ಆಲಂಕಾರು: ಜೇಸಿಐ ಆಲಂಕಾರು ಇದರ ವತಿಯಿಂದ ನಡೆದ ’ಜೇಸಿ ಸಪ್ತಾಹ-2024’ಇದರ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ ಮತ್ತು ಜೇಸಿಐ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸೆ.14ರಂದು ಸಂಜೆ ಆಲಂಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಆಲಂಕಾರು ಜೇಸಿಐ ಅಧ್ಯಕ್ಷೆ ಮಮತಾ ಕಮಲಾಕ್ಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ಜೇಸಿಐ ರಾಷ್ಟ್ರೀಯ ತರಬೇತುದಾರರೂ, ಪೂರ್ವ ವಲಯಾಧ್ಯಕ್ಷರೂ ಆದ ಕೃಷ್ಣ ಮೋಹನ್ ಪಿ.ಎಸ್.ಅವರು ಮಾತನಾಡಿ, ಅತೀ ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದೇ ಶ್ರೀಮಂತಿಕೆಯಾಗಿದೆ. ಜೇಸಿ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಕೊಳ್ಳುವುದರಿಂದ ಜೀವನ ಶಿಕ್ಷಣ ಸಿಗುತ್ತದೆ ಎಂದರು. ಇನ್ನೋರ್ವ ಅತಿಥಿ ನ್ಯಾಯವಾದಿ, ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿ, ನಾಯಕತ್ವದ ಕಲ್ಪನೆ ನೀಡಿದ್ದೇ ಜೆಸಿಐ. ಸಾಮಾಜಿಕ ಸೇವೆಗೆ ಒಳ್ಳೆಯ ಮನಸ್ಸು ಬೇಕು ಎಂದರು. ಜೇಸಿಐ ವಲಯ 15ರ ತರಬೇತಿ ವಿಭಾಗದ ವಲಯ ನಿರ್ದೇಶಕಿ ಹೇಮಲತಾಪ್ರದೀಪ್ ಮಾತನಾಡಿ, ಜೇಸಿ ಸಪ್ತಾಹದ ಉದ್ದೇಶ, ಜೇಸಿಐ ಧ್ಯೇಯೋದ್ದೇಶಗಳು ಸಮಾಜಕ್ಕೆ ತಲುಪಬೇಕು ಎಂದರು. ಆಲಂಕಾರು ಜೇಸಿಐನ ಸ್ಥಾಪಕರಾದ ಪ್ರಶಾಂತ್‌ಕುಮಾರ್ ರೈ ಅವರು ಮಾತನಾಡಿ, ಜೇಸಿಗಳ ಜೊತೆಗೆ ಜೇಸಿಯೇತರ ಹಿರಿಯ ಬಂಧುಗಳ ಪ್ರೋತ್ಸಾಹ, ಸಹಕಾರದಿಂದ ಜೇಸಿ ಬೆಳೆಯುತ್ತಿದೆ ಎಂದರು.

ಕಮಲಪತ್ರ ಪ್ರಶಸ್ತಿ ಪ್ರದಾನ:
ಆಲಂಕಾರು ಜೇಸಿಐನ ಪೂರ್ವಾಧ್ಯಕ್ಷರಾದ ಗಣೇಶ್ ಗಟ್ಟಪುಣಿ ಅವರಿಗೆ ಕಮಲಪತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ:
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ(ಧಾರ್ಮಿಕ ಕ್ಷೇತ್ರ), ಪ್ರಗತಿಪರ ಕೃಷಿಕ ವಿಠಲ ರೈ ಮನವಳಿಕೆ(ಕೃಷಿ ಕ್ಷೇತ್ರ) ಹಾಗೂ ಉಮೇಶ್ ಶೆಟ್ಟಿ ಪುಳಿತ್ತಡಿ (ಉದಯೋನ್ಮುಖ ಉದ್ಯಮಿ)ಅವರನ್ನು ದಂಪತಿ ಸಹಿತ ಜೇಸಿಐ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ದಾಮೋದರ ಗೌಡ ಕಕ್ವೆ ಮಾತನಾಡಿ ಕೃತಜ್ಞತೆ ಸೂಚಿಸಿದರು. ಆಲಂಕಾರು ಜೇಸಿಐ ಪೂರ್ವಾಧ್ಯಕ್ಷ ಪ್ರದೀಪ್ ಬಾಕಿಲ ಸನ್ಮಾನಿತರನ್ನು ಪರಿಚಯಿಸಿದರು. ಜೇಸಿಐ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಕಮಲಾಕ್ಷ ಶೆಟ್ಟಿ ಅಂಬರಾಜೆ ಅವರಿಗೆ ಶಾಲುಹಾಕಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮುಂದಿನ ಅಧ್ಯಕ್ಷರಾಗಿ ಗುರುರಾಜ್ ರೈ ಕೇವಳ:
ಆಲಂಕಾರು ಜೇಸಿಐನ 2025ನೇ ಸಾಲಿನ ಅಧ್ಯಕ್ಷರಾಗಿ ಗುರುರಾಜ್ ರೈ ಕೇವಳ ಆಯ್ಕೆಗೊಂಡರು. ನಿಕಟಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಅವರು ಆಯ್ಕೆ ಪ್ರಕ್ರಿಯೆ ನಡೆಸಿದರು.

ಜೇಸಿಐ ಅಧ್ಯಕ್ಷೆ ಮಮತಾ ಅಂಬರಾಜೆ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಕೃತಿಕಾ ಗುರುಕಿರಣ್ ಶೆಟ್ಟಿ ವಂದಿಸಿದರು. ಜೇಸಿಐ ಸದಸ್ಯ ಮಹೇಶ್ ಪಾಟಾಳಿ ಅತಿಥಿಗಳನ್ನು ಪರಿಚಯಿಸಿದರು. ಸಪ್ತಾಹ ನಿರ್ದೇಶಕ ಗುರುರಾಜ್ ರೈ ಕೇವಳ ಸಪ್ತಾಹದ ವರದಿ ವಾಚಿಸಿದರು. ಸುನೀತಾಗುರುರಾಜ್ ಜೇಸಿವಾಣಿ ವಾಚಿಸಿದರು. ಮಹಿಳಾ ಜೇಸಿ ಸಂಯೋಜಕಿ ದೇವಕಿ ಹಿರಿಂಜ, ಜೆಜೆಸಿ ಅಧ್ಯಕ್ಷೆ ಧನ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ದೇಶಕರೂ, ಮೆಸ್ಕಾಂ ಆಲಂಕಾರು ಶಾಖಾ ಕಿರಿಯ ಇಂಜಿನಿಯರ್ ಪ್ರೇಮ್‌ಕುಮಾರ್ ಅವರು ಆತಿಥ್ಯ ನೀಡಿ ಸಹಕರಿಸಿದರು. ಸಮಾರಂಭದ ಬಳಿಕ ಜೇಸಿಐ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here