ಸಾಲ ಮರುಪಾವತಿ ವಿಚಾರದಲ್ಲಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಉದ್ಯಮಿ – ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು

0

ಪುತ್ತೂರು: ಸಾಲ ಮರುಪಾವತಿ ವಿಚಾರವಾಗಿ ಪ್ರತಿಷ್ಠಿತ ಉದ್ಯಮಿಯೊಬ್ಬರ ಮನೆಗೆ ಹೋಗಿದ್ದ ರಾಷ್ಟ್ರೀಕೃತ ಬ್ಯಾಂಕ್ ನ ರಿಲೇಶನ್ ಶಿಪ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪ ಕೇಳಿ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ:

ಪ್ರಕರಣದ ಪಿರ್ಯಾದುದಾರರಾದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಹೆಚ್.ಸಿ ನೀಡಿರುವ ದೂರಿನಂತೆ, ‘ಚೈತನ್ಯ ಅವರು ಇಲ್ಲಿನ ಕೋರ್ಟ್ ರಸ್ತೆಯ‍ಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ರಿಲೇಶನ್ ಶಿಪ್ ‍ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ರಿ ಬ್ಯಾಂಕ್ ನಲ್ಲಿ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಉಜ್ರೆಪಾದೆ ನಿವಾಸಿ ಕೀರ್ತಿ ಅಖಿಲೇಶ್ ಅವರು 2 ಕೋಟಿ ಸಾಲ ಪಡೆದುಕೊಂಡಿದ್ದು, ಸದ್ರಿ ಸಾಲ ಮರುಪಾವತಿ ಮಾಡದಿದ್ದ ಕಾರಣ ಎನ್.ಪಿ.ಎ ಆಗಿರುತ್ತದೆ. ಈ ಸಾಲ ಬಾಕಿಯ ಬಗ್ಗೆ ಹಲವಾರು ಬಾರಿ ಸದ್ರಿ ಸಾಲಗಾರರಿಗೆ ವಕೀಲರ ಮೂಲಕ ಲೀಗಲ್ ನೋಟೀಸು ಜಾರಿ ಮಾಡಿದ್ದರೂ, ತಿಳಿಸಿ ಹೇಳಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ, ಈ ಬಗ್ಗೆ ಮೇಲಧಿಕಾರಿಗಳ ಮೌಖಿಕ ಆದೇಶದಂತೆ, ಸೆ.25ರಂದು ಮಧ್ಯಾಹ್ನ ಪಿರ್ಯಾದಿದಾರರು ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ದಿವ್ಯಶ್ರಿ ಎಂಬವರೊಂದಿಗೆ ಬಲ್ನಾಡಿನ ಉಜ್ರುಪಾದೆಯಲ್ಲಿರುವ ಕೀರ್ತಿ ಅಖಿಲೇಶ್ ಅವರ ಮನೆಗೆ ತೆರಳಿದ್ದಾಗ ಮನೆಯಲ್ಲಿದ್ದ ಅರುಣ್ ಕಿಶೋರ್ ಅವರು ಪಿರ್ಯಾದುದಾರರನ್ನು ಮನೆಯ ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅದರಂತೆ ಮನೆಗೆ ಬಂದ ಅಖಿಲೇಶ್ ಅವರು ಪಿರ್ಯಾದಿದಾರರಲ್ಲಿ ಮನೆಗೆ ಬಂದಿರುವ ಬಗ್ಗೆ ತಕರಾರು ತೆಗೆದು ಗದರಿಸಿರುವುದಲ್ಲದೇ, ತಮ್ಮ ತಂದೆ ಬರುವ ತನಕ ಕೂರುವಂತೆ ಮನೆ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಬಳಿಕ ಕೃಷ್ಣ ಕಿಶೋರ್ ಅವರು ಕೂಡಾ ಮನೆಗೆ ಬಂದು ಪಿರ್ಯಾದಿದಾರರಲ್ಲಿ ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ‘ಶೂಟ್ ಮಾಡುತ್ತೇನೆ..’ ಎಂದು ಜೀವ ಬೆದರಿಕೆ ಹಾಕಿರುತ್ತಾರೆ..’ ಎಂಬುದಾಗಿ ಸೆ.26ರಂದು ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 109/2024, ಕಲಂ 132, 127(2),351 (2), ಆರ್.ಡಬ್ಲ್ಯು 3(5) ಬಿ.ಎನ್.ಎಸ್. ಮತ್ತು ಕಲಂ 27 ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here