ಕಾಣಿಯೂರು: ಕುದ್ಮಾರು ಸ. ಉ. ಹಿ. ಪ್ರಾ. ಶಾಲೆಯಲ್ಲಿ ‘ನಾವು ಮನುಜರು’ ಕಾರ್ಯಕ್ರಮದ ಅಡಿಯಲ್ಲಿ ಸ್ಥಳೀಯ ಹಬ್ಬಗಳನ್ನು ಪರಿಚಯಿಸುವ ಸಲುವಾಗಿ ಮಹಾಶಿವರಾತ್ರಿ ಹಬ್ಬದ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸವಣೂರು ಕ್ಲಸ್ಟರ್ ನ ಸಿ.ಆರ್.ಪಿ ಜಯಂತ ವೈ ಇವರು ಶಿವರಾತ್ರಿ ಆಚರಣೆಯ ಹಿಂದೆ ಇರುವ ವಿವಿಧ ನಂಬಿಕೆಗಳಾದ ಸಮುದ್ರ ಮಂಥನ, ಶಿವಲಿಂಗ ಆರಾಧನೆ, ಗಿರಿಜಾ ಕಲ್ಯಾಣ, ಹಾಗೂ ಬಿಲ್ವಪತ್ರೆಯ ಮಹತ್ವ ಇವುಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡುವುದರ ಮಹತ್ವವನ್ನು ತಿಳಿಸಿದರು. ಆಚರಣೆಯ ಹಿಂದೆ ಇರುವ ಪೌರಾಣಿಕ ಕಥೆಗಳು, ಹಾಗೂ ವೈಜ್ಞಾನಿಕ ಕಾರಣಗಳನ್ನು ಹಾಡು ಹಾಗೂ ಇತರ ಕಥೆಗಳೊಂದಿಗೆ ಅರ್ಥೈಸಿದರು. ವೇದಿಕೆಯಲ್ಲಿ ಕಡಬ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಖ್ಯಗುರು ಕುಶಾಲಪ್ಪ ಬಿ. ಸ್ವಾಗತಿಸಿ, ಶಿಕ್ಷಕಿ ಸುಜಾತ ಬಿ. ವಂದಿಸಿದರು. ಶಿಕ್ಷಕಿ ಪ್ರಿಯಾಂಕ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಸದಸ್ಯ ಯೋಗೀಶ ಬರೆಪ್ಪಾಡಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.