ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಆಶ್ರಯದಲ್ಲಿ ಮಾತೃ ಮಂಡಳಿ ಉಪ್ಪಿನಂಗಡಿ ಇದರ ನೇತೃತ್ವದಲ್ಲಿ 18ನೇ ವರ್ಷದ ಪವಿತ್ರ ಗಂಗಾ ಪೂಜೆ ಹಾಗೂ ಮಾತೃ ಸಂಗಮ ಕಾರ್ಯಕ್ರಮವು ಮಾ.9ರಂದು ಸಂಜೆ 4 ಗಂಟೆಯಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಪರಿಸರದಲ್ಲಿ ನಡೆಯಲಿದೆ.
ರೈತಬಂಧು ಸಂಸ್ಥೆಯ ಉಮಾ ಎಸ್. ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಾತೃ ಸಂಗಮ ಕಾರ್ಯಕ್ರಮದಲ್ಲಿ ಯುವ ಚಿಂತಕಿ, ಶ್ರೀ ರಾಮ ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲಾ ತೇಜಾಕ್ಷಿಯವರು ಉಪನ್ಯಾಸವನ್ನು ನೀಡಲಿದ್ದಾರೆ. ಪರಿಸರದ ಆಯ್ದ ಶಿಶು ಮಂದಿರಗಳ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಉತ್ತರ ಭಾರತದ ಶೈಲಿಯ ಗಂಗಾ ಪೂಜೆಯನ್ನು ನಡೆಸಲಾಗುತ್ತದೆ.
ಸಮಾಜದ ಎಲ್ಲಾ ಜನ ಸಮುದಾಯದ ಮಂದಿ ಮುಕ್ತವಾಗಿ ಭಾಗವಹಿಸಲು ಅವಕಾಶವಿರುವ ಈ ಗಂಗಾಪೂಜಾ ಕಾರ್ಯಕ್ರಮವನ್ನು ಮುಖ್ಯ ಸಾಮರಸ್ಯ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಅಚರಿಸಲಾಗುತ್ತಿದೆ ಎಂದು ಮಾತೃ ಮಂಡಳಿಯ ಅಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ ತಿಳಿಸಿದ್ದಾರೆ.