ನೆಲ್ಯಾಡಿ: ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ಸುದೀರ್ಘ ಅವದಿ ಸೇವೆ ಸಲ್ಲಿಸಿ ನಿವೃತ್ತರಾದ ನೆಲ್ಯಾಡಿ ನಿವಾಸಿ ಸೆಬಾಸ್ಟಿಯನ್ ಹಾಗೂ ತ್ರೇಸಿಯಾ ದಂಪತಿಗೆ ಗೌರವ ಸನ್ಮಾನ ಕಾರ್ಯಕ್ರಮ ನೆಲ್ಯಾಡಿ ಸಂತ ಅಲ್ಫೊನ್ಸಾ ಚರ್ಚ್ನಲ್ಲಿ ನಡೆಯಿತು.
ಸೆಬಾಸ್ಟಿಯನ್ ಅವರು ಹಾನಗಲ್, ಬೆಳಗಾವಿ, ಬಿಜಾಪುರ, ಕಲ್ಘಟಗಿ, ಹುಬ್ಬಳ್ಳಿ ಮೊದಲಾದೆಡೆ ಸೇವೆ ಸಲ್ಲಿಸಿದ್ದರು. ಬಳಿಕ ರಾಜ್ಯ ಆರೋಗ್ಯ ಮಂತ್ರಾಲಯದ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸಿ ಸೇವಾನಿವೃತ್ತಿಯಾಗಿದ್ದರು. ಸನ್ಮಾನಿಸಿ ಮಾತನಾಡಿ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ನ ಧರ್ಮಗುರು ರೆ.ಫಾ.ಶಾಜಿ ಮಾಥ್ಯು ಅವರು, ಸೆಬಾಸ್ಟಿಯನ್ ಅವರ ಅಮೂಲ್ಯ ಸೇವೆಗೆ ಕೃತಜ್ಞತೆ ಸಲ್ಲಿಸುವ ಮತ್ತು ಅವರ ತ್ಯಾಗವನ್ನು ಗೌರವಿಸುವ ಮಹತ್ವದ ಕ್ಷಣವಾಗಿದೆ. ಅವರ ಸೇವೆಯು ಹಲವಾರು ಜೀವಗಳಿಗೆ ಬೆಳಕು ತಂದಿದ್ದು, ಸಮುದಾಯದ ಆರೋಗ್ಯವನ್ನು ಸುಧಾರಿಸಲು ಮಾಡಿದ ಅವರ ಪರಿಶ್ರಮವು ಅಪ್ರತಿಮ. ಈ ಸನ್ಮಾನವು ಕೇವಲ ಗೌರವ ಸೂಚನೆಯಷ್ಟೇ ಅಲ್ಲ, ಭವಿಷ್ಯದಲ್ಲಿ ಹೊಸ ತಲೆಮಾರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸಲು ಒಂದು ಮಾದರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ವಾರ್ಡ್ನ ಅಧ್ಯಕ್ಷ ಜೋನ್ಸನ್ ಪುಳಿಕಲ್, ಕಾರ್ಯದರ್ಶಿ ಎಲ್ಸಿ ಜೋಸ್ ಕಿಯಕ್ಕೆಲ್, ಸಿಸ್ಟರ್ ಅಲೀಸ್ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.