ನೆಲ್ಯಾಡಿ: 2024ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ದಕ್ಷಿಣ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ವಾಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಡ್ಕಾನ್ಸ್ಟೇಬಲ್ ರೆಜಿ.ವಿ.ಎಂ ಅವರನ್ನು ಆಯ್ಕೆ ಮಾಡಲಾಗಿದೆ. ನೆಲ್ಯಾಡಿ ನಿವಾಸಿಯಾಗಿರುವ ರೇಜಿ ಅವರು, ತಮ್ಮ ಅಸಾಧಾರಣ ಸೇವೆ ಮತ್ತು ಅಪರಾಧ ಭೇದಿಸುವ ಕೌಶಲ್ಯದ ಕಾರಣಕ್ಕೆ ಈ ಗೌರವಕ್ಕೆ ಭಾಜನರಾಗಿದ್ದಾರೆ.
ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ, ಅತಿ ದೊಡ್ಡ ಎಂಡಿಎಂಎ ಮಾದಕ ದ್ರವ್ಯ ಪ್ರಕರಣ ಪತ್ತೆ, ಕಾರ್ತಿಕ್ ರಾಜ್ ಹತ್ಯೆ ಸೇರಿದಂತೆ ಹಲವು ಕೊಲೆ, ಕೊಲೆ ಯತ್ನ, ಕಳ್ಳತನ ಪ್ರಕರಣಗಳ ಭೇದನೆಗೆ ರೆಜಿ.ವಿ.ಎಂ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸೂಕ್ಷ್ಮ ತನಿಖಾ ಕ್ರಮಗಳು, ಶ್ರದ್ಧಾ ಮತ್ತು ಪರಿಶ್ರಮದ ಕಾರಣದಿಂದಲೇ ಅವರು ಈ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಪೊಲೀಸ್ ಸೇವೆಯಲ್ಲಿ 24 ವರ್ಷಗಳ ಅನುಭವ
ರೆಜಿ.ವಿ.ಎಂ ಅವರು 2000ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಮೂಡಬಿದ್ರೆ, ಬೆಳ್ತಂಗಡಿ, ಕೊಣಾಜೆ ಹಾಗೂ ನಗರ ಅಪರಾಧ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ದಕ್ಷಿಣ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ವಾಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೈಕ್ಷಣಿಕ ಪಯಣ
ರೆಜಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆಲ್ಯಾಡಿಯ ಪಿಎಂಸಿ ಯಲ್ಲಿ, ಪ್ರೌಢ ಶಿಕ್ಷಣವನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಉಪ್ಪಿನಂಗಡಿಯ ಸರಕಾರಿ ಕಾಲೇಜಿನಲ್ಲಿ ಹಾಗೂ ಸಿ.ಪಿ.ಎಡ್ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಪೂರ್ಣಗೊಳಿಸಿದ್ದಾರೆ.
ಅವರ ಪತ್ನಿ ಮೇರಿ ಲಿಸ್ಸಿ, ಪುತ್ರಿ ರಿಂಸಿ, ಪುತ್ರ ರಿನಿಕ್ ಅವರ ಕುಟುಂಬದ ಸಹಕಾರದಿಂದ ಅವರು ಸೇವೆ ಸಲ್ಲಿಸುತ್ತಿದ್ದಾರೆ.