ನೆಲ್ಯಾಡಿ: ಜೆಸಿಐ ನೆಲ್ಯಾಡಿ ಇದರ ಆಶ್ರಯದಲ್ಲಿ ಲಹರಿ ಸಂಗೀತ ಕಲಾ ಕೇಂದ್ರ ನೆಲ್ಯಾಡಿ ಮತ್ತು ವರ್ತಕ ಹಾಗೂ ಕೈಗಾರಿಕಾ ಸಂಘ ನೆಲ್ಯಾಡಿ-ಕೌಕ್ರಾಡಿ ಇದರ ಸಹಯೋಗದೊಂದಿಗೆ ಏರ್ಪಡಿಸಲಾದ 7 ದಿನಗಳ ’ಮಕ್ಕಳ ಮೋಜಿನ ಬೇಸಿಗೆ ಶಿಬಿರ’ದ ಉದ್ಘಾಟನೆ ಎ.10ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜರಗಿತು.
ಶಿಬಿರವನ್ನು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ಆರ್.ವೆಂಕಟರಮಣರವರು ಉದ್ಘಾಟಿಸಿ ಮಾತನಾಡಿ, ರಜಾ ವೇಳೆಯಲ್ಲಿ ಮೊಬೈಲ್, ಟಿವಿ ಗೀಳುಗಳಿಂದ ಮಕ್ಕಳನ್ನು ದೂರವಿಟ್ಟು ಇಂತಹ ಶಿಬಿರಗಳಿಗೆ ಸೇರ್ಪಡೆಗೊಳಿಸಿದಲ್ಲಿ ಅವರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು, ಬೇರೆ ಬೇರೆ ಮಕ್ಕಳೊಡನೆ ಸ್ನೇಹ ಬೆಳೆಸಲು, ಸಂಪನ್ಮೂಲ ವ್ಯಕ್ತಿಗಳಿಂದ ಪಾಠ ಪಡೆಯಲು ಉತ್ತಮ ವೇದಿಕೆಯಾಗಲಿದೆ. ಮಕ್ಕಳನ್ನು ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೆಸಿಐ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೆಸಿಐ ವಲಯ 15ರ ಉದಕ ಪತ್ರಿಕೆ ಸಂಪಾದಕರಾದ ಮೋಹನ್ಚಂದ್ರ, ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್.ದುಗಾಶ್ರೀ, ಲಹರಿ ಸಂಗೀತ ಕಲಾ ಕೇಂದ್ರದ ಗುರು ವಿಶ್ವನಾಥ ಶೆಟ್ಟಿ ಕೆ, ಮಹಿಳಾ ಜೆಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ್, ಕಾರ್ಯದರ್ಶಿ ಕೆ.ಸಿ.ನವ್ಯ ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜೆಸಿಐ ಪೂರ್ವಾಧ್ಯಕ್ಷ ಪುರಂದರ ಗೌಡ, ಸಂಪನ್ಮೂಲ ವ್ಯಕ್ತಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಕೆ.ಸಿ.ನವ್ಯ ಪ್ರಸಾದ್ ವಂದಿಸಿದರು.
