ನೆಲ್ಯಾಡಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಇದರ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನೆಲ್ಯಾಡಿ ವಲಯದ ಕಟ್ಟೆಮಜಲು ಕಾರ್ಯಕ್ಷೇತ್ರದ ವತಿಯಿಂದ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕದಲ್ಲಿ ಮಕ್ಕಳ ಹಾಗೂ ಮಹಿಳಾ ಕುಣಿತ ಭಜನಾ ಕಮ್ಮಟ ನಡೆಯಿತು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಅಧ್ಯಕ್ಷರಾದ ಸುಂದರ ಗೌಡ ಒಗ್ಗು ಉದ್ಘಾಟಿಸಿ ಮಾತನಾಡಿ, ಪಟ್ಲಡ್ಕದ ಈ ಮಣ್ಣಿನಲ್ಲಿ 29ನೇ ಭಜನಾ ಕಮ್ಮಟವನ್ನು ಉದ್ಘಾಟಿಸುತಿದ್ದೇವೆ. ಇದು ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ ಮಾತನಾಡಿ, ಭಜನೆಯನ್ನು ಆಯೋಜನೆ ಮಾಡುವುದು ನಿನ್ನೆ, ಮೊನ್ನೆಯ ಕನಸಲ್ಲ. 20 ವರ್ಷಗಳ ಹಿಂದಿನ ಕನಸು ಇದಾಗಿದೆ. ಭಜನೆ ಎಂದರೆ ಸಂಸ್ಕೃತಿ ಎಂದರ್ಥ, ಭಜನೆ ಉಳಿದರೆ ನಮ್ಮ ಸಂಸ್ಕೃತಿ ಉಳಿದಂತೆ ಎಂದರು. ಭಜನಾ ತರಬೇತುದಾರರಾದ ಜನಾರ್ದನ ಗೌಡ ಬಿಳಿನೆಲೆ, ದಯಾನಂದ ಬಿಳಿನೆಲೆ, ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹರೀಶ್ ಪಟ್ಲಡ್ಕ, ಆಡಳಿತ ಮೊಕ್ತೇಸರರಾದ ವಿಶ್ವನಾಥ ಪಟ್ಲಡ್ಕ, ಕಟ್ಟೆಮಜಲು ಕಾರ್ಯಕ್ಷೇತ್ರದ ಉಪಾಧ್ಯಕ್ಷ ಉಮೇಶ್, ಸೇವಾಪ್ರತಿನಿಧಿ ಸುಮನ ಎಸ್, ಭಜನಾ ತಂಡದ ಅಧ್ಯಕ್ಷೆ ಗೀತಾ ಆರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲತಾ ವಿಠಲ ಪ್ರಾರ್ಥಿಸಿದರು. ಸೇವಾ ಪ್ರತಿನಿಧಿ ಸುಮನ ಎಸ್ ಸ್ವಾಗತಿಸಿದರು. ಕ್ಷೇತ್ರದ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ದೀಕ್ಷಾ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಟ್ರಸ್ಟಿಗಳಾದ ಪ್ರಕಾಶ್ ರೈ, ಪ್ರಕಾಶ್ ರಾವ್, ನವೀನ್ ಪೂಜಾರಿ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಮಹೇಶ್ ಪಟ್ಲಡ್ಕ, ಕುಣಿತ ಭಜನೆಯ ಸದಸ್ಯರು ಉಪಸ್ಥಿತರಿದ್ದರು.