ಪುತ್ತೂರು: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪುತ್ತೂರು ನಗರಸಭೆ ವ್ಯಾಪ್ತಿಯ ಕಬಕ ಗ್ರಾಮ ರಕ್ತೇಶ್ವರಿ ವಠಾರದ ಲಿಂಗದಗುಡ್ಡೆಯಲ್ಲಿ ಮೇ 30ರಂದು ಮನೆಯೊಂದರ ಮುಂದಿನ ತಡೆಗೋಡೆಯೊಂದು ಕುಸಿದಿದೆ. ಈ ಘಟನೆಯಿಂದಾಗಿ ಮನೆಗಳು ಅಪಾಯದ ಅಂಚಿನಲ್ಲಿದೆ.
ಲಿಂಗದಗುಡ್ಡೆ ಶಶಿಕಾಂತ್ ರಾವ್ ಎಂಬವರ ಮನೆಯ ಮುಂದಿನ ತಡೆಗೋಡೆ ಕುಸಿದಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲವಾದರೂ ತಡೆಗೋಡೆಯ ಅಂಚಿನಲ್ಲಿರುವ ಮನೆಗಳಿಗೆ ಅಪಾಯ ಎದುರಾಗಿದೆ. ಸ್ಥಳಕ್ಕೆ ನಗರಸಭೆ ಸ್ಥಳೀಯ ಸದಸ್ಯ ದಿನೇಶ್ ಶೇವಿರೆ ಅವರು ಆರಂಭದಲ್ಲಿ ಭೇಟಿ ನೀಡಿದ್ದರು. ಬಳಿಕ ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಮತ್ತು ಪೌರಾಯುಕ್ತ ಮಧು ಎಸ್ ಮನೋಹರ್ ಹಾಗು ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.