ಪುತ್ತೂರು:ಬೆಳ್ಳಿಪ್ಪಾಡಿ ಕೋಡಿಯಡ್ಕ ಎಂಬಲ್ಲಿ ಮನೆ ಮೇಲೆ ಗುಡ್ಡ ಕುಸಿತಗೊಂಡು ಮನೆಗೆ ಬಂದಿದ್ದ ನೆಂಟರಿಬ್ಬರು ಮಣ್ಣಿನಡಿಗೆ ಸಿಲುಕಿ ಗಾಯಗೊಂಡ ಘಟನೆ ಮೇ.30ರ ರಾತ್ರಿ ನಡೆದಿದೆ. ಇನ್ನಷ್ಟು ಗುಡ್ಡ ಕುಸಿಯುವ ಭೀತಿಯಿರುವ ಹಿನ್ನೆಲೆಯಲ್ಲಿ ಆ ಭಾಗದ 6 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಬೆಳ್ಳಿಪ್ಪಾಡಿ ಕೋಡಿಯಡ್ಕ ಸೋಮಪ್ಪ ಗೌಡ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದೆ.ಅವರ ಮನೆಯ ಹಿಂಬದಿಯ ಗುಡ್ಡವೊಂದು ರಾತ್ರಿ ಕುಸಿದಿದೆ.ಗುಡ್ಡದ ಮಣ್ಣು ಅವರ ಮನೆಯ ಹಿಂಬದಿಯ ಮನೆಗೆ ತಾಗಿರುವ ಕೊಟ್ಟಿಗೆ ಮೇಲೆ ಬಿದ್ದಿದೆ.ಅವರ ಮನೆಗೆ ಅತಿಥಿಗಳಾಗಿ ಬಂದಿದ್ದ ಸೋಮಪ್ಪ ಗೌಡ ಅವರ ಇಬ್ಬರು ಸಂಬಂಽಕರು ಮನೆಯ ಹಿಂಬದಿಯಲ್ಲೇ ಇದ್ದದ್ದರಿಂದ ಅವರು ಗುಡ್ಡದ ಮಣ್ಣಿನಡಿಗೆ ಸಿಲುಕಿಕೊಂಡಿದ್ದರು.ಅವರನ್ನು ರಕ್ಷಣೆ ಮಾಡಿ ಪುತ್ತೂರು ಅದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
6 ಕುಟುಂಬಗಳ ಸ್ಥಳಾಂತರ:
ಗುಡ್ಡ ಕುಸಿದ ಪರಿಸರದಲ್ಲಿ ಆರು ಮನೆಗಳಿದ್ದು, ಇನ್ನಷ್ಟು ಗುಡ್ಡ ಕುಸಿಯುವ ಭೀತಿಯಿಂದ ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಭೂಕುಸಿತ-ರಸ್ತೆ ಬಂದ್:
ಬೆಳ್ಳಿಪ್ಪಾಡಿ ಕಠಾರ ಕೂಟೇಲು ಭಾಗಕ್ಕೆ ಸಂಪರ್ಕ ಕಲ್ಪಿಸುವ ಸಕಲೇಶ್ವರ ದೇವಸ್ಥಾನದ ಬಳಿ ಗುತ್ತಿನಮನೆ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ ರಸ್ತೆಗೆ ಬಿದ್ದು ಸಂಪರ್ಕ ಕಡಿತವಾಗಿದೆ.ಮಣ್ಣು ಕೆಳಭಾಗದಲ್ಲಿರುವ ಕೃಷಿ ತೋಟಗಳಿಗೂ ನುಗ್ಗಿದೆ.ಮೇಲ್ಭಾಗದಲ್ಲಿರುವ ಎರಡು ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆ.ರಸ್ತೆ ಬಂದ್ ಆಗಿರುವುದರಿಂದ ಈ ಭಾಗದಲ್ಲಿ ಸಂಚರಿಸಬೇಕಾದವರು ಬದಲಿ ರಸ್ತೆ ಮೂಲಕ ಸಾಗಬೇಕಿದೆ.

ಕೋಡಿಂಬಾಡಿಯಲ್ಲೂ ಧರೆ ಕುಸಿತ:
ಕೋಡಿಂಬಾಡಿ ಮಠಂತಬೆಟ್ಟು ಸಂಪಿಗೆದಡಿ ಎಂಬಲ್ಲಿಯೂ ಧರೆ ಕುಸಿತವಾಗಿದೆ.ತೋಡಿಗೆ ಅಡ್ಡಲಾಗಿ ಧರೆ ಜಾರಿ ಬಿದ್ದ ಪರಿಣಾಮ ಸಂಪಿಗೆದಡಿ, ಪುಣ್ಕೆದಡಿ,ಕಲ್ಪಾಜೆಬೈಲು ಸಂಪೂರ್ಣ ಜಲಾವೃತಗೊಂಡಿದೆ.ಸಂಪಿಗೆದಡಿ ಸದಾಶಿವ ಸಾಮಾನಿ ಅವರ ಜಾಗದಲ್ಲಿ ಧರೆ ಕುಸಿತವಾಗಿದೆ.ಕೋಡಿಂಬಾಡಿಯ ಕೊಂಬಕೋಡಿ,ಚೀಮುಳ್ಳು ಸಹಿತ ವಿವಿಧೆಡೆ ಹಾನಿಯಾಗಿರುವುದಾಗಿ ವರದಿಯಾಗಿದೆ.ಬೆಳ್ಳಿಪ್ಪಾಡಿ ಕುಂಡಾಪು ಎಂಬಲ್ಲಿಯೂ ಗುಡ್ಡಕುಸಿದು ಸಂಚಾರ ಸ್ಥಗಿತಗೊಂಡಿದೆ.ಪೆರ್ನೆಯಿಂದ ಉಪ್ಪಿನಂಗಡಿಗೆ ಬರುವ ರಸ್ತೆ ಒಂದು ಭಾಗದಿಂದ ಬಂದ್ ಆಗಿದೆ.