ಉಪ್ಪಿನಂಗಡಿ: ಶುಕ್ರವಾರ ಸಾಯಂಕಾಲದಿಂದ ಸಿಡಿಲಬ್ಬರದೊಂದಿಗೆ ಭಾರೀ ಗಾಳಿ ಮಳೆಯು ಸುರಿದಿದ್ದು, ಮಳೆ ನೀರು ಚರಂಡಿಗಳಲ್ಲಿ ಉಕ್ಕಿ ಹರಿದು ತಗ್ಗು ಪ್ರದೇಶಗಳು ಜಲಾವೃತವಾದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಸುರಿದ ಭಾರೀ ಮಳೆಗೆ ಉಪ್ಪಿನಂಗಡಿಯ ಹೆದ್ದಾರಿ ಬದಿಯ ಹಲವು ಅಂಗಡಿ ಮುಂಗಟ್ಟುಗಳಿಗೆ, ಆಹಾರ ಧಾನ್ಯ ಸಂಗ್ರಹಣಾ ಮಳಿಗೆಗಳಿಗೆ ನೀರು ನುಗ್ಗಿ ಅಪಾರ ಹಾನಿಯನ್ನುಂಟು ಮಾಡಿದೆ. ಏಕಾಏಕಿ ಭಾರಿ ಪ್ರಮಾಣದ ಸುರಿದ ಮಳೆಯಿಂದಾಗಿ ಚರಂಡಿಗಳ ಧಾರಣಾ ಸಾಮರ್ಥ್ಯದ ಹೊರತಾಗಿ ನೀರು ಹರಿದು ಬಂದ ಕಾರಣ ನೀರು ಸರಾಗವಾಗಿ ಹರಿಯಲಾಗದೆ ತಗ್ಗು ಪ್ರದೇಶವನ್ನಾವರಿಸಿತ್ತು. ಇದರಿಂದಾಗಿ ಇಲೆಕ್ಟ್ರಾನಿಕ್ಸ್ ಮಳಿಗೆ, ದಿನಸಿ ಮಳಿಗೆಗಳೆಲ್ಲವೂ ನೀರು ನುಗ್ಗಿ ಹಾನಿಗೊಳಗಾಯಿತು.

ಇತ್ತ ಭಾರೀ ಮಳೆಗೆ ಹೆದ್ದಾರಿ ಕಾಮಗಾರಿ ಪ್ರದೇಶದಿಂದ ನೀರು ದೊಡ್ಡ ಪ್ರಮಾಣದಲ್ಲಿ ರಸ್ತೆಗೆ ಹರಿದು ಬರಲಾರಂಭಿಸಿದ್ದು, ಜನರು ಭೀತಿಗೆ ಸಿಲುಕುವಂತಾಗಿತ್ತು. ಮಾತ್ರವಲ್ಲದೆ , ಪೇಟೆಯ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಫಲವೆಂಬಂತೆ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿದು ಜನರನ್ನು ಸಮಸ್ಯೆಗೆ ಸಿಲುಕಿತ್ತು. ೩೪ ನೆಕ್ಕಿಲಾಡಿಯ ಕಜೆ, ಆದರ್ಶನಗರದಲ್ಲಿ ಧರೆ ಕುಸಿತಕ್ಕೊಳಗಾಗಿದ್ದು, ಅರಫಾದವರ ಆವರಣಗೋಡೆ ಕುಸಿದು ಬಿದ್ದಿದೆ.
ಒಟ್ಟಾರೆ ಶುಕ್ರವಾರ ಸಾಯಂಕಾಲದಿಂದ ಸುರಿಯುತ್ತಿರುವ ಮಳೆಯು ಭಯಾನಕ ಸ್ವರೂಪವನ್ನು ತಂದೊಡ್ಡಿದೆ.
