ಸೋಮವಾರದಿಂದ ಕಾಮಗಾರಿ-ಪಿಡಬ್ಲ್ಯೂಡಿ ಇಂಜಿನಿಯರ್ ಭರವಸೆ

ಪುತ್ತೂರು:ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂದ್ರಟ್ಟದಲ್ಲಿ ನದಿಗೆ ಅಡ್ಡಲಾಗಿ ಸಂಪರ್ಕ ಸೇತುವೆ ನಿರ್ಮಿಸಲಾಗಿದೆಯಾದರೂ ರಸ್ತೆ ಜೋಡಣೆ ಮಾಡುವ ಮೋರಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ.ರಸ್ತೆ ಸಂಪರ್ಕಕ್ಕೆಂದು ಸಾರ್ವಜನಿಕರು ತಂದು ಹಾಕಿದ್ದ ಮಣ್ಣನ್ನು ಇತ್ತೀಚೆಗೆ ತಡೆಗೋಡೆ ನಿರ್ಮಿಸಲೆಂದು ಅಗೆದು ಬಳಿಕ ಕಾಮಗಾರಿಯನ್ನು ಪೂರ್ಣಗೊಳಿಸದೆ ಇರುವುದರಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಅಪರಿಚಿತರು ಆ ರಸ್ತೆಯಲ್ಲಿ ಹೋದರೆ ಬೃಹತ್ ಹೊಂಡಕ್ಕೆ ಬೀಳುವುದು ಖಚಿತ.ಇತ್ತೀಚೆಗೆ ಸುರಿದ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಕೃತಕ ನೆರೆ ಸೃಷ್ಟಿಯಾಗಿತ್ತು.ಈ ಅವ್ಯವಸ್ಥೆ ಕುರಿತು ಸ್ಥಳೀಯರು ಆಕ್ರೋಶಗೊಂಡು ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಉಡುಪಿ ಮೂಲದ ಕೇದಾರನಾಥ ಕನ್ಸ್ಟ್ರಕ್ಷನ್ಸ್ನ ಕೃಷ್ಣಮೂರ್ತಿ ಭಟ್ ಎಂಬವರಿಗೆ ಈ ಬ್ರಿಡ್ಜ್ ನಿರ್ಮಾಣದ ಗುತ್ತಿಗೆಯನ್ನು ನೀಡಲಾಗಿದ್ದು,ಜುನೈದ್ ಎಂಬವರು ಸಬ್ ಕಾಂಟ್ರಾಕ್ಟ್ ವಹಿಸಿಕೊಂಡಿದ್ದರು.
ಬ್ರಿಡ್ಜ್ ಕಾಮಗಾರಿ ಸಂಪೂರ್ಣವಾಗಿದ್ದರೂ ತಡೆಗೋಡೆ ಮತ್ತು ಮೋರಿ ನಿರ್ಮಾಣವಾಗಿರಲಿಲ್ಲ.ಹೀಗಾಗಿ ಸಾರ್ವಜನಿಕರೇ ಮುಂದೆ ನಿಂತು ರಸ್ತೆಗೆ ಸಂಪರ್ಕ ಕಲ್ಪಿಸಲು ಮಣ್ಣು ತಂದು ಹಾಕಿದ್ದರು. ಇತ್ತೀಚೆಗೆ,ತಡೆಗೋಡೆ ನಿರ್ಮಿಸಲೆಂದು ಸೇತುವೆ ಪಕ್ಕ ಮಣ್ಣು ಅಗೆಸಿದ ಬಳಿಕ ಕಾಮಗಾರಿ ನಡೆಸದೆ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ.ಕಾಮಗಾರಿ ಪೂರ್ಣಗೊಳಿಸಿಕೊಡುವಂತೆ ಸ್ಥಳೀಯ ಮುಖಂಡರು ಮನವಿ ಮಾಡಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.ಪಕ್ಕದ ಜಮೀನಿನ ಮಾಲೀಕರು ಕೆಲಸ ಮಾಡಲು ಬಿಡುತ್ತಿಲ್ಲ, ಇನ್ನೊಂದು ಭಾಗದ ಜಮೀನಿನ ಮಾಲೀಕರು ತೆಂಗಿನ ಮರ ಮುಂದಿಟ್ಟುಕೊಂಡು ಅಡ್ಡಿಪಡಿಸುತ್ತಿದ್ದಾರೆ ಎಂದೆಲ್ಲಾ ಹೇಳಿ ನಮ್ಮನ್ನು ಮಾತಿನಲ್ಲೇ ಕಟ್ಟಿಹಾಕುತ್ತಾರೆ ಎಂದು ಸ್ಥಳೀಯರು ಗುತ್ತಿಗೆದಾರ ಜುನೈದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ, ಕಾಮಗಾರಿ ಪರಿಶೀಲನೆ ನಡೆಸಿದ್ದು, ನಮ್ಮ ಕಡೆಯಿಂದ ತಪ್ಪಾಗಿದೆ,ಕಾಮಗಾರಿ ವಿಳಂಬವಾಗಿದೆ ಎಂದು ಒಪ್ಪಿಕೊಂಡಿದ್ದಾರೆ.ಈ ವೇಳೆ ಸ್ಥಳದಲ್ಲೇ ಇದ್ದ ಸಬ್ ಕಾಂಟ್ರಾಕ್ಟರ್ ಜುನೈದ್ ಅವರನ್ನು ಪ್ರಶ್ನಿಸಿದಾಗ ಉದ್ಧಟತನದಿಂದ ಮಾತನಾಡಿದ್ದಾರೆ.ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಇಂಜಿನಿಯರ್ ಕನಿಷ್ಕ, ಹೇಗೆ ಮಾತನಾಡಬೇಕೆಂದು ಬುದ್ಧಿಮಾತು ಹೇಳಿದ್ದಾರೆ.
ಅಕ್ಕಪಕ್ಕದ ಜಾಗದವರಿಂದ ತಗಾದೆ-ಸಬ್ ಕಾಂಟ್ರಾಕ್ಟರ್ ಆರೋಪ:
ಕಾಮಗಾರಿ ವಿಳಂಬದ ಬಗ್ಗೆ ಸಬ್ ಕಾಂಟ್ರಾಕ್ಟರ್ ಜುನೈದ್ ಅವರನ್ನು ಸ್ಥಳೀಯರು ಪ್ರಶ್ನಿಸಿದಾಗ, ಅಕ್ಕಪಕ್ಕದ ಜಾಗದ ಮಾಲೀಕರು ತಗಾದೆ ಎತ್ತಿದ್ದಾರೆ ಎಂದು ಸಬೂಬು ಹೇಳಿದ್ದಾರೆ.ಇದನ್ನು ಗಮನಿಸಿದ ಮುಖಂಡರು ಜಾಗದವರನ್ನು ಕರೆದು ಪ್ರಶ್ನಿಸಿದಾಗ,ನಾವು ಯಾವುದೇ ತಗಾದೆ ಎತ್ತಿಲ್ಲ,ಸುಳ್ಳು ಹೇಳಲಾಗುತ್ತಿದೆ.ಕಾಮಗಾರಿ ಸಂಪೂರ್ಣಗೊಳಿಸಿ ಎಂದು ಹೇಳಿದ್ದಾರೆ.ನೀವಲ್ಲ ನಿಮ್ಮ ಮನೆಯ ಹಿರಿಯರು ಹೇಳಿದ್ದಾಗಿ ಜುನೈದ್ ಅವರು ಹೇಳಿದಾಗ,ಈ ವಿಚಾರವನ್ನು ನಮ್ಮ ಗಮನಕ್ಕೆ ಯಾಕೆ ತಂದಿಲ್ಲವೆಂದು ಜಾಗದವರು ಪ್ರಶ್ನಿಸಿದಾಗ ಜುನೈದ್ ನಿರುತ್ತರರಾದರು.ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಕರೆ ಮಾಡಿ ಮಾತನಾಡಿಸುವಂತೆ ಮುಖಂಡರು ಸೂಚಿಸಿದಾಗ ಶಾಸಕರು ಸ್ಥಳಕ್ಕೆ ಆಗಮಿಸಿ ಸೂಚನೆ ನೀಡಿದ ನಂತರ ಕಾಮಗಾರಿ ಪೂರ್ಣ ಮಾಡಿಸುತ್ತೇನೆ,ಇಲ್ಲವಾದರೆ ಇಲ್ಲ ಎಂದು ಹೇಳಿ ಜುನೈದ್ ಅವರು ಸ್ಥಳದಿಂದ ತೆರಳಿರುವುದಾಗಿ ತಿಳಿದು ಬಂದಿದೆ.

ಕಾಮಗಾರಿ ಪೂರ್ಣಕ್ಕೆ ಸಂಪೂರ್ಣ ಸಹಕಾರ:
ಸ್ಥಳಕ್ಕೆ ಆಗಮಿಸಿದ್ದ ಜಾಗದ ಮಾಲೀಕರಾದ ಕಾರ್ತಿಕ್ ಶೆಟ್ಟಿ ಅಂದ್ರಟ್ಟ ಮತ್ತು ಗೋಪಾಲ ನಾಯ್ಕ ದಾಸರಮೂಲೆ ಅವರು,ಗುತ್ತಿಗೆದಾರ ಹೇಳಿರುವಂತೆ ನಾವು ಕಾಮಗಾರಿಗೆ ಯಾವುದೇ ತಗಾದೆ ಎತ್ತಿಲ್ಲ.ಕಾಮಗಾರಿ ಪೂರ್ಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಇಂಜಿನಿಯರ್ ಕನಿಷ್ಕ ಅವರಿಗೆ ತಿಳಿಸಿದರು.
ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮ:
ಸೋಮವಾರ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಬ್ ಕಾಂಟ್ರಾಕ್ಟರ್ಗೆ ತಾಕೀತು ಮಾಡಿದ ಇಂಜಿನಿಯರ್ ಕನಿಷ್ಕ ಅವರು, ತಾನೇ ಮುಂದೆ ನಿಂತು ಕಾಮಗಾರಿ ಮಾಡಿಸುತ್ತೇನೆ ಎಂದು ಸಾರ್ವಜನಿಕರಿಗೆ ತಿಳಿಸಿದರಲ್ಲದೆ,ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಗುತ್ತಿಗೆದಾರರ ವಿರುದ್ಧ ಬರೆದು ಹಾಕಲಾಗುವುದು ಎಂದರು.ಕಾಮಗಾರಿಯ ಗುತ್ತಿಗೆಯನ್ನು ಬದಲಿಸುವಂತೆ ಸಾರ್ವಜನಿಕರು ಇಂಜಿನಿಯರ್ ಅವರಿಗೆ ಮನವಿ ಮಾಡಿದರು.
ಕಾಮಗಾರಿಯ ಕ್ವಾಲಿಟಿ ಪರಿಶೀಲಿಸಬೇಕು:
ಜುನೈದ್ ಮುನ್ನಡೆಸುತ್ತಿರುವ ಕಾಮಗಾರಿಗಳು ಅನೇಕ ಕಡೆಗಳಲ್ಲಿ ವಿಳಂಬವಾಗುತ್ತಿದೆ.ಚೆಲ್ಯಡ್ಕ ಬ್ರಿಡ್ಜ್, ಬಜತ್ತೂರಿನಲ್ಲೂ ಕಾಮಗಾರಿ ಅರ್ಧದಲ್ಲಿದೆ ಎಂದು ಸಾರ್ವಜನಿಕರು ಆರೋಪಿಸಿದರಲ್ಲದೆ, ಕಾಮಗಾರಿಯ ಕ್ವಾಲಿಟಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ನಾಯ್ಕ, ಸದಸ್ಯರಾದ ರಾಘವೇಂದ್ರ ಗೌಡ ಅಂದ್ರಟ್ಟ, ತಿಮ್ಮಪ್ಪ ಮೂಡಾಯೂರು, ಜಯ ಏಕ, ಬೂತ್ ಅಧ್ಯಕ್ಷ ಪ್ರಕಾಶ್ ಚಿಕ್ಕಮಡ್ನೂರು, ಬೂತ್ ಕಾಂಗ್ರೆಸ್ ಅಧ್ಯಕ್ಷ ಚಿದಾನಂದ ರೈ ಕೊಪ್ಪಳ, ಅವಿನಾಶ್, ಗಣೇಶ್ ಭಟ್, ಕೃಷ್ಣಪ್ರಸಾದ್ ಭಟ್ ಸೇರಿದಂತೆ ಅನೇಕರು ಸ್ಥಳದಲ್ಲಿ ಇದ್ದರು.

ಸೋಮವಾರದಿಂದ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಸಬ್ ಕಾಂಟ್ರಾಕ್ಟರ್ ಹೇಳಿದ್ದಾರೆ.ಪ್ರತಿ ನಿತ್ಯ ನಾನೇ ಮುಂದೆ ನಿಂತು ಪರಿಶೀಲಿಸುತ್ತೇನೆ.ಒಂದು ವೇಳೆ ಮಾಡದಿದ್ದರೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು.ಊರಿನವರ ಸಹಕಾರ ಬೇಕು
-ಕನಿಷ್ಕ,ಇಂಜಿನಿಯರ್, ಪಿಡಬ್ಲ್ಯುಡಿ

40 ವರ್ಷಗಳ ಬೇಡಿಕೆ,30 ವರ್ಷಗಳಿಂದ ಹೋರಾಟ
ಚಿಕ್ಕ ಪುತ್ತೂರಿನ ಅಂದ್ರಟ್ಟದಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕು ಎಂಬುದು 40 ವರ್ಷಗಳ ಬೇಡಿಕೆಯಾಗಿದೆ. 30 ವರ್ಷಗಳಿಂದ ಹೋರಾಟ ನಡೆಸಲಾಗಿದೆ.ಅದರ ಫಲವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು 1.80 ಕೋಟಿ ರೂ.ಅನುದಾನ ಮೀಸಲಿಟ್ಟು ಶಿಲಾನ್ಯಾಸ ಮಾಡಿದ್ದರು.ಅಶೋಕ್ ರೈ ಶಾಸಕರಾದ ಬಳಿಕ ಮತ್ತೊಮ್ಮೆ ಶಿಲಾನ್ಯಾಸ ನೆರವೇರಿಸಲಾಗಿತ್ತು.ಸೇತುವೆ ನಿರ್ಮಾಣ ಆಗಿದ್ದರೂ ಉಳಿದ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.ಗುತ್ತಿಗೆದಾರರು ಕೇವಲ ಭರವಸೆಯನ್ನಷ್ಟೇ ನೀಡಿದ್ದಾರೆ.ಕಾಮಗಾರಿ ಪೂರ್ಣಗೊಳಿಸಿಲ್ಲ.ಹೀಗಾಗಿ ಇಂಜಿನಿಯರ್ ಮತ್ತು ಸಬ್ ಕಾಂಟ್ರಾಕ್ಟರ್ ಅವರನ್ನು ಕರೆಸಿ ಕಾಮಗಾರಿ ಪೂರ್ಣಕ್ಕೆ ಮನವಿ ಮಾಡಲಾಗಿದೆ.ಶೀಘ್ರದಲ್ಲಿ ಪೂರ್ಣಗೊಳಿಸವ ಭರವಸೆ ನೀಡಿದ್ದಾರೆ.ಜಿಡೆಕಲ್ಲು-ರಾಗಿದಕುಮೇರು-ಪುರುಷರಕಟ್ಟೆ ಸಂಪರ್ಕ ರಸ್ತೆ ಇದಾಗಿದೆ.ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸೇತುವೆ ಬಿಟ್ಟುಕೊಡುತ್ತೇವೆ ಎಂದಿದ್ದರು.ಈವರೆಗೆ ಬಿಟ್ಟುಕೊಟ್ಟಿಲ್ಲ.ಸೋಮವಾರದಿಂದ ಕೆಲಸ ಮತ್ತೆ ಪ್ರಾರಂಭಿಸುವುದಾಗಿ ಹೇಳಿದ್ದಾರೆ
ಕಾರ್ತಿಕ್ ಗೌಡ ಅಂದ್ರಟ್ಟ, ಅಧ್ಯಕ್ಷರು,ಶಕ್ತಿ ಕೇಂದ್ರ