ಈ ಬಾರಿ ವೇದಿಕೆಯಲ್ಲಿ ದಾನಿಗಳೇ ಅತಿಥಿಗಳು : ದಾನಿಗಳಿಂದಲೇ ಕಲಿಕಾ ಸಾಮಾಗ್ರಿ ಹಸ್ತಾಂತರ
ಪುಷ್ಪವೃಷ್ಟಿ, ಬ್ಯಾಂಡ್ ವಾದನದ ಮೆರಗು : ಮೆರವಣಿಗೆಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ
ಶೌಚಾಲಯ ನಿರ್ಮಾಣಕ್ಕೆ ಗ್ರಾ.ಪಂ. ನಿಂದ 4 ಲಕ್ಷ ರೂ. ಅನುದಾನ : ಜಗನ್ನಾಥ ಪೂಜಾರಿ ಮುಕ್ಕೂರು
ಮುಕ್ಕೂರು : ಸರಕಾರಿ ಶಾಲೆ ಉಳಿಸಿ, ಬೆಳೆಸುವಲ್ಲಿ ಊರವರ ಪಾತ್ರ ಹಿರಿದು. ಅದಕ್ಕೆ ಪೂರಕ ಎಂಬಂತೆ ಮುಕ್ಕೂರು ಸರಕಾರಿ ಶಾಲೆಯಲ್ಲಿ ಕಲಿಕಾ ಸಾಮಗ್ರಿ ವಿತರಣೆ ನಡೆದಿದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ತೋರಿದಾಗ ದಾನಿಗಳ ಕೊಡುಗೆಗೂ ಮೌಲ್ಯ ಬರುತ್ತದೆ ಎಂದು ಪ್ರಗತಿಪರ ಕೃಷಿಕ ಮೋಹನ ಬೈಪಡಿತ್ತಾಯ ಹೇಳಿದರು.

ಮುಕ್ಕೂರು ಸರಕಾರಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕೊಡಮಾಡಿದ ಕಲಿಕಾ ಸಾಮಗ್ರಿಯ ವಿತರಣ ಸಮಾರಂಭವನ್ನು ಜೂ.2 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಸಂಸ್ಕಾರ, ಸಂಸ್ಕೃತಿಯನ್ನು ಅರಿತು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಶಾಲೆ ಒಂದು ವೇದಿಕೆ. ಮುಕ್ಕೂರು ಶಾಲೆ ನಮ್ಮ ಶಾಲೆ ಎಂಬ ಅಭಿಮಾನ ನಮ್ಮೆಲ್ಲರಲ್ಲಿಯು ಇರಲಿ ಎಂದರು.

4 ಲಕ್ಷ ರೂ.ಅನುದಾನ ಘೋಷಣೆ
ಸಭಾ ಅಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾ.ಪಂ. ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಮುಕ್ಕೂರು ಶಾಲೆಯಲ್ಲಿ ರಾಜ್ಯದಲ್ಲೇ ಮಾದರಿ ಎನ್ನುವಂತೆ ಶೌಚಾಲಯವೊಂದನ್ನು ನಿರ್ಮಿಸಬೇಕು ಎನ್ನುವ ಯೋಜನೆ ರೂಪಿಸಲಾಗಿದೆ. ದಾನಿಗಳ ಸಹಭಾಗಿತ್ವದಲ್ಲಿ ಸುಮಾರು 6.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಗ್ರಾ.ಪಂ. ಮೂಲಕ ಉದ್ಯೋಗ ಖಾತರಿ ಯೋಜನೆಯಡಿ 4 ಲಕ್ಷ ರೂ. ಅನುದಾನವನ್ನು ನೀಡಲಾಗುವುದು ಎಂದರು.

ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳ ಶಿಕ್ಷಣವೇ ಉತ್ತಮವಾದದು. ಓರ್ವ ಪೋಷಕನಾಗಿಯು ನಾನು ಇದರ ಅನುಭವ ಪಡೆದಿದ್ದೇನೆ. ಮುಕ್ಕೂರು ಶಾಲೆಯಲ್ಲಿ ಓದಿದ ನೂರಾರು ಮಂದಿ ಉನ್ನತ ಸ್ಥಾನದಲ್ಲಿ ಇದ್ದು ಇದು ಈ ಶಾಲೆಯ ಸಾಮರ್ಥ್ಯವೂ ಆಗಿದೆ. ಇಲ್ಲಿ ಊರವರ ಸಹಕಾರವೂ ಉತ್ತಮ ರೀತಿಯಲ್ಲಿ ಇದೆ. ಕಲಿಕಾ ಸಾಮಗ್ರಿ ವಿತರಣೆಯು ಅದರ ಭಾಗ ಎಂದು ಜಗನ್ನಾಥ ಪೂಜಾರಿ ಹೇಳಿದರು.

ಬೆಳ್ಳಾರೆ ಡಾ| ಕೆ.ಶಿವರಾಮ ಕಾರಂತ ಸ.ಪ್ರ.ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್ ಪೆರುವಾಜೆ ಮಾತನಾಡಿ, ಮುಕ್ಕೂರು ಶಾಲೆಯ ಅಗತ್ಯತೆಗಳಿಗೆ ಸ್ಪಂದಿಸಲು ಈ ಊರಿನ ಜನರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಸಂಗತಿ. ನನಗೂ ಮುಕ್ಕೂರು ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ನೀಡಲು ಖುಷಿ ಆಗಿದೆ. ಮುಂದೆಯೂ ಈ ಶಾಲೆಗೆ ನನ್ನ ಪೂರ್ಣ ಸಹಕಾರ ಇರಲಿದೆ ಎಂದರು.

ಶಾಲಾ ಮುಖ್ಯಗುರು ಲತಾ ಮಾತನಾಡಿ, ಶಾಲೆಗೆ ನೆರವು ನೀಡಿದ ದಾನಿಗಳಿಗೆ ಕೃತಜತೆ ಸಲ್ಲಿಸಿ ಶಾಲಾ ಅಗತ್ಯತೆಗಳ ಬೇಡಿಕೆಯ ಪಟ್ಟಿಯನ್ನು ಮುಂದಿಟ್ಟರು.
ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ, ಶಾಲಾ ಹಿತಚಿಂತನ ಸಮಿತಿಯ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ್ ನಾಯ್ಕ ಕುಂಡಡ್ಕ, ದಾನಿಗಳಾದ ಪುರುಷೋತ್ತಮ ಕುಂಡಡ್ಕ ಶುಭ ಹಾರೈಸಿದರು. ವೇದಿಕೆಯಲ್ಲಿ ಉದ್ಯಮಿ ಮಹೇಶ್ ಕುವೈಟ್, ಪ್ರೀತಿ ನವೀನ್ ಶೆಟ್ಟಿ ಬರಮೇಲು ಉಪಸ್ಥಿತರಿದ್ದರು. ಅತಿಥಿ ಶಿಕ್ಷಕಿ ಕವಿತಾ ಪ್ರಾರ್ಥಿಸಿದರು. ಗೌರವ ಶಿಕ್ಷಕಿ ಸೌರ್ಪಣಿಕ ರೈ ನಿರೂಪಿಸಿದರು. ಗೌರವ ಶಿಕ್ಷಕಿ ಅಪೂರ್ವ ಚೆನ್ನಾವರ ಸಹಕರಿಸಿದರು.

21 ಮಂದಿ ನೆರವು
ದಾನಿಗಳೇ ಅತಿಥಿಗಳು..!
ರಕ್ಷಿತ್ ಪೆರುವಾಜೆ, ಮಹೇಶ್ ಕುವೈಟ್, ಚಂದ್ರಹಾಸ ರೈ ಮುಕ್ಕೂರು, ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ಯುವಕ ಮಂಡಲ ಕುಂಡಡ್ಕ-ಮುಕ್ಕೂರು, ಮೋಹನ ಬೈಪಡಿತ್ತಾಯ ಮೇಲಿನಮುಕ್ಕೂರು, ನರಸಿಂಹ ತೇಜಸ್ವಿ ಕಾನಾವು, ಡಾ|ನರಸಿಂಹ ಶರ್ಮಾ ಕಾನಾವು, ಸೀಮಾ ಕೆ, ಕಮಲ ಕುಂಡಡ್ಕ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಪ್ರೇಮಾ ಪೂವಪ್ಪ ನಾಯ್ಕ ಕುಂಡಡ್ಕ, ಶರಣ್ಯ ರೈ ಪೂವಾಜೆ, ಮಹನ್ಯ, ಪೂಜನ್ ಕಾನಾವು, ಸಾವಿತ್ರಿ ಚಾಮುಂಡಿಮೂಲೆ, ಪ್ರೀತಿ ನವೀನ್ ಶೆಟ್ಟಿ ಬರಮೇಲು, ಉಷಾ ಶರತ್ ಶೆಟ್ಟಿ ಕೋಲೆಟ್ಟು ಕಿನ್ನಿಗೋಳಿ, ದಿನೇಶ್ ಕಂರ್ಬುತ್ತೋಡಿ, ವಿಜಯ ಕುಮಾರ್ ರೈ ಪೆರುವೋಡಿ, ದಿ.ಐತ್ತಪ್ಪ ನಾಯ್ಕ ಕುಂಡಡ್ಕ ಸ್ಮರಣಾರ್ಥ ಮಕ್ಕಳು, ದೀಕ್ಷಾ ನೀರ್ಕಜೆ ಕಲಿಕಾ ಸಾಮಗ್ರಿ ನೀಡಿ ಸಹಕರಿಸಿದರು. ದಾನಿಗಳನ್ನೇ ಅತಿಥಿಗಳನ್ನಾಗಿಸಿ ಅವರಿಂದಲೇ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಪುಷ್ಪವೃಷ್ಟಿಯೊಂದಿಗೆ ಸ್ವಾಗತ
ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಬ್ಯಾಂಡ್ ವಾದನದ ಜತೆಗೆ ಪುಷ್ಪವೃಷ್ಠಿಯೊಂದಿಗೆ ವಿದ್ಯಾರ್ಥಿಗಳನ್ನು ಮೆರವಣಿಗೆ ಮೂಲಕ ವಿಶಿಷ್ಟ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು. ಅದಾದ ಬಳಿಕ ಹೂಗುಚ್ಛ ನೀಡಿ ಸಿಹಿ ಹಂಚಿ ಸ್ವಾಗತ ಕೋರಲಾಯಿತು.