ಸಾಮಾಜಿಕ ಜಾಲತಾಣ, ವಾಕ್ ಸ್ವಾತಂತ್ರ್ಯ ಬಳಕೆ ಮಿತಿಗೊಳಿಸಿ-ಕಾನೂನು ಪರಿಪಾಲನೆ ಮಾಡಿ- ಧಾರ್ಮಿಕ ಮುಖಂಡರಿಗೆ, ಸಾರ್ವಜನಿಕರಿಗೆ ಅಡಿಷನಲ್ ಎಸ್‌ಪಿ ರಾಜೇಂದ್ರ ಸೂಚನೆ

0

ಪುತ್ತೂರು: ಸಾರ್ವಜನಿಕರು ಕಾನೂನು ಪರಿಪಾಲನೆ ಮಾಡಬೇಕು. ಯಾರು ಕಾನೂನು ಮುರಿಯುತ್ತಾರೋ ಅವರ ಮೇಲೆ ಕೇಸ್ ದಾಖಲಾಗುತ್ತದೆ.ಸಾಮಾಜಿಕ ಜಾಲತಾಣ, ವಾಕ್ ಸ್ವಾತಂತ್ರ್ಯ ಎಷ್ಟು ಬಳಸಬೇಕೊ ಅಷ್ಟೇ ಬಳಸಬೇಕು. ಇದನ್ನೇ ನಾವು ನಿಮ್ಮಿಂದ ಅಪೇಕ್ಷಿಸುವುದು ಎಂದು ದ.ಕ.ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಹೇಳಿದರು.

ಜೂ.7ರಂದು ನಡೆಯುವ ಮುಸ್ಲಿಂ ಸಮುದಾಯದ ಬಕ್ರೀದ್ ಹಬ್ಬದ ಪ್ರಯುಕ್ತ ಪುತ್ತೂರು ಪುರಭವನದಲ್ಲಿ ನಡೆದ ಧಾರ್ಮಿಕ ಮುಖಂಡರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣ ಹಾಗೂ ವಾಕ್ ಸ್ವಾತಂತ್ರ್ಯ ಮಿತಿ ಮೀರಿದರೆ ತಪ್ಪಾಗುತ್ತದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಅದರ ಅರಿವು ಎಲ್ಲರಿಗೂ ಇರಬೇಕು. ಕಾನೂನು ಪರಿಪಾಲನೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಎಡಿಷನಲ್ ಎಸ್ಪಿ ಹೇಳಿದರು. ಯುವಜನಾಂಗದಲ್ಲಿ ಮಾದಕ ವ್ಯಸನ ಹೆಚ್ಚಾಗುತ್ತಿರುವುದರ ಬಗ್ಗೆ ಪ್ರಸ್ತಾಪವಾದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕಾಲೇಜು ಹುಡುಗರು ಸೇರಿದಂತೆ ಯುವ ಜನಾಂಗ ಮಾದಕ ಸೇವನೆ ಮಾಡುತ್ತಿರುವ ಬಗ್ಗೆ ಯಾರಾದರೂ ಮಾಹಿತಿ ನೀಡಿದ್ದೀರಾ? ಎಷ್ಟು ಮಂದಿ ಯಾರಿಗೆ ಕಂಪ್ಲೈಂಟ್ ಕೊಟ್ಟಿದ್ದೀರಿ? ನಿಮಗೆ ಹೊಣೆಗಾರಿಕೆ ಇಲ್ವಾ? ಎಂದು ಪ್ರಶ್ನಿಸಿದರು. ತಮ್ಮ ಮಕ್ಕಳ ಬಗ್ಗೆ ತಂದೆ ತಾಯಿಯರಿಗೆ ಹೊಣೆಗಾರಿಕೆ ಬೇಕು. ಅವರ ಚಲನವಲನದ ಬಗ್ಗೆ ನಿಗಾ ಇಡಬೇಕು.ನಿಮಗೂ ಹೊಣೆಗಾರಿಕೆ ಬೇಕು. ಪೊಲೀಸ್ ಇಲಾಖೆಯನ್ನೇ ಬೊಟ್ಟು ಮಾಡಬಾರದು. ಮಾದಕ ಜಾಲದ ಬಗ್ಗೆ ನಮಗೆ ಮಾಹಿತಿ ಕೊಡಿ ಎಂದ ಅವರು ಮುಂಬರುವ ಬಕ್ರೀದ್ ಹಬ್ಬ ಚೆನ್ನಾಗಿ ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

ಸೌಹಾರ್ದತೆಯಲ್ಲಿ ಬಕ್ರೀದ್ ಹಬ್ಬ ನಡೆಯಲಿ:
ಪುತ್ತೂರು ಉಪವಿಭಾಗದ ಡಿವೈಎಸ್‌ಪಿ ಅರುಣ್ ನಾಗೇಗೌಡ ಮಾತನಾಡಿ ಬಕ್ರೀದ್ ಹಬ್ಬಕ್ಕೆ ಗೋಹತ್ಯೆ ಆಗಬಾರದು. ಹಿಂದೂ ಮುಖಂಡರು ಸೌಹಾರ್ದತೆಯಲ್ಲಿ ಬಕ್ರೀದ್ ಹಬ್ಬ ಆಚರಿಸಲು ಅನುವು ಮಾಡಿಕೊಡಬೇಕು. ನೈತಿಕ ಪೊಲೀಸ್‌ಗಿರಿ ಮಾಡಲು ಯಾರೂ ಹೋಗಬೇಡಿ. ಅದರ ಬದಲು ನಮಗೆ ಮಾಹಿತಿ ಕೊಡಿ. ನಮ್ಮ ಅಧಿಕಾರಿಗಳ ಮೊಬೈಲ್ ಸಂಖ್ಯೆ ದಿನದ 24 ಗಂಟೆಯೂ ಸಂಪರ್ಕಕ್ಕೆ ಸಿಗುತ್ತದೆ ಎಂದರು. ಶಾಂತಿ ಸುವ್ಯವಸ್ಥೆ ಕೆಡಿಸುವವರ ಮನೆಯನ್ನು ಸರ್ಚ್ ಮಾಡುವುದು ಮೊದಲಿನಿಂದಲೇ ನಡೆಯುತ್ತಿದ್ದ ವಾಡಿಕೆ. ಅದರ ಬಗ್ಗೆ ಯಾವುದೇ ಅಪಾರ್ಥ ಬೇಡ. ಅದು ಯಾರ ಪರ, ವಿರೋಧವಾಗಿ ಮಾಡುವ ಕೆಲಸ ಅಲ್ಲ. ಅದರ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ. ಕೆಲವೊಂದು ಮಾಹಿತಿಗಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಕೋಮು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಯಾರು ಎಷ್ಟೇ ಪ್ರಭಾವಶಾಲಿಯಾದರೂ ಬಿಡುವುದಿಲ್ಲ. ಎಂದ ಅವರು ಹಬ್ಬಗಳು ಶಾಂತಿ ಸೌಹಾರ್ದತೆಯಿಂದ ನಡೆಯಲಿ ಎಂದರು.

ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆಗೆ ತಿಳಿಸಬೇಕು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಇತ್ತೀಚೆಗೆ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದೆ. ಬಕ್ರೀದ್ ಹಬ್ಬ ಕೇವಲ ಮುಸ್ಲಿಮರಿಗಷ್ಟೇ ಮಾತ್ರವಲ್ಲ.ಇಡೀ ಮಾನವಕುಲದ ಹಬ್ಬವಾಗಿದೆ.ನಮಗೆ ಜಾತಿ, ಧರ್ಮಕ್ಕಿಂತ ನಾವು ಭಾರತೀಯರು ಎಂಬ ಭಾವನೆ ಇಟ್ಟುಕೊಳ್ಳಬೇಕು. ಪ್ರತಿಯೊಂದು ಧರ್ಮದವರನ್ನು ಗೌರವಿಸುವ ಕೆಲಸ ಮಾಡಬೇಕು. ಯಾವುದೇ ಅಹಿತಕರ ಘಟನೆ ಆದರೂ ಪೊಲೀಸ್ ಇಲಾಖೆಗೆ ತಿಳಿಸಬೇಕು. ಅವರು ಕ್ರಮಕೈಗೊಳ್ಳುತ್ತಾರೆ. ಅವರಿಗೆ ನಾವು ಸಹಕಾರ ನೀಡೋಣ ಎಂದರು. ಸಾಮಾಜಿಕ ಜಾಲತಾಣದಲ್ಲಿ ಟೀಕೆ, ವೈರಲ್ ಮಾಡುವುದು ಮಾಡಬೇಡಿ. ಎಲ್ಲರೂ ಒಗ್ಗಟ್ಟಿನಿಂದ ಇದ್ದು ಹಬ್ಬ ಆಚರಿಸೋಣ ಎಂದರು.

ಆಗಾಗ ಪೊಲೀಸ್ ಪಥಸಂಚಲನ ನಡೆಸಬೇಕು: ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ಇದು ಶ್ಲಾಘನೀಯ ಕಾರ್ಯಕ್ರಮವಾಗಿದೆ. ಹಿಂದೂ ಮುಸ್ಲಿಮರು, ಕ್ರಿಶ್ಚಿಯನ್ನರು ಸೌಹಾರ್ದಯುತವಾಗಿ ಹಬ್ಬ ಆಚರಿಸಿಕೊಂಡು ಬಂದಿದ್ದೇವೆ.ಇತ್ತೀಚೆಗೆ ಕೆಲವು ಕೋಮು ಸಂಘರ್ಷದ ಘಟನೆಗಳು ನಡೆದಿದೆ.ಪೊಲೀಸ್ ಇಲಾಖೆಯಿಂದ ಜನಸ್ನೇಹಿತ್ವ ಹಾಗೂ ಖಡಕ್ ಕೂಡ ಬೇಕಾಗಿದೆ.ಆಗಾಗ ಕೆಎಸ್‌ಆರ್‌ಪಿಯವರಿಂದ ಪಥಸಂಚಲನ ನಡೆಯಬೇಕು. ಇದರಿಂದ ಜನರಲ್ಲಿ ಜಾಗೃತಿ ಉಂಟಾಗುತ್ತದೆ. ಪೊಲೀಸ್ ಇಲಾಖೆ ಜಾಗೃತವಾಗಿದೆ ಎಂದು ತಿಳಿಯುತ್ತದೆ ಎಂದರು.

ಸಾಮಾಜಿಕ ಜಾಲತಾಣ ಹಾಗೂ ಡ್ರಗ್ಸ್ ನಿಯಂತ್ರಣ ಮಾಡಿ: ಹಿಂದೂ ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ಅಪರಾಧಗಳನ್ನು ತಡೆಯುವ ಜವಾಬ್ದಾರಿ ಪೊಲೀಸ್ ಇಲಾಖೆ ಹಾಗೂ ಜನರಿಗೂ ಇರುತ್ತದೆ. ಬಕ್ರೀದ್ ಹಬ್ಬದ ಬಗ್ಗೆ ಭಕ್ತಿ ನಂಬಿಕೆ ಇದೆ. ಅದೇ ರೀತಿ ಹಿಂದೂಗಳಿಗೆ ಗೋವಿನಲ್ಲಿ ಕೂಡ ಭಕ್ತಿಯ ಭಾವನೆ ಇದೆ.ಇದರ ಹತ್ಯೆ ಮಾಡಲು ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣ ಹಾಗೂ ಡ್ರಗ್ಸ್ ಜಾಲ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಇವೆರಡನ್ನು ಬೇರು ಸಹಿತ ನಿಯಂತ್ರಣ ತಂದರೆ ಅಶಾಂತಿ ಉಂಟಾಗುವುದಿಲ್ಲ.

ಕೋಮು ಪ್ರಚೋದನಕಾರಿ ಭಾಷಣ ಮಾಡಬಾರದು: ಎಸ್‌ಡಿಪಿಐ ಮುಖಂಡ ಕೆ.ಐ.ಸಿದ್ದಿಕ್ ಮಾತನಾಡಿ ಬಕ್ರೀದ್ ಹಬ್ಬದ ವಿಶೇಷವೆಂದರೆ ಪ್ರಾಣಿ ಬಲಿಕೊಡುವುದು. ಪ್ರತೀ ಧರ್ಮದವರೂ ತಪ್ಪು ಮಾಡಿದರೆ ಅದನ್ನು ತಪ್ಪು ಎಂದು ಹೇಳಬೇಕು. ಕೋಮು ಪ್ರಚೋದನಕಾರಿ ಭಾಷಣ ಮಾಡಬಾರದು. ಇದರಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಅವರವರ ಧರ್ಮದ ಪರಿಪಾಲನೆ ಅವರವರಿಗೆ ಇರುತ್ತದೆ.ಇದಕ್ಕೆ ಧಕ್ಕೆ ಆದಾಗ ಅಹಿತಕರ ಘಟನೆ, ಬಂದ್ ಉಂಟಾಗುತ್ತದೆ. ಬಂದ್ ಮಾಡಬಾರದು ಇದರಿಂದ ವ್ಯಾಪಾರ ಹಾಳಾಗುತ್ತದೆ. ವ್ಯಾಪಾರವನ್ನೇ ನಂಬಿಕೊಂಡವರಿಗೆ ಕಷ್ಟವಾಗುತ್ತದೆ ಎಂದ ಅವರು ಎಲ್ಲರೂ ಬದಲಾಗಿ ಸೌಹಾರ್ದತೆಯಿಂದ ಬದುಕೋಣ ಎಂದರು.

ಮುಂದಕ್ಕೆ ಕೊಲೆ, ಘಟನೆಗಳು ನಡೆಯದಂತೆ ಮುಖಂಡರು ಕೈಜೋಡಿಸಬೇಕು: ಪುತ್ತೂರು ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರ- ಕಲ್ಲೇಗ ಮಾತನಾಡಿ ಇವತ್ತಿನ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ಕಾಣುತ್ತಾರೆ.ಎಲ್ಲಾ ಸಮುದಾಯದವರನ್ನು ಕರೆದು ಸಭೆ ಮಾಡಬೇಕಾಗಿದೆ.ಪುತ್ತೂರಿನಲ್ಲಿ ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ. ಮುಂದೆಯೂ ಇರಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕೊಲೆ, ಘಟನೆಗಳು ನಡೆಯಬಾರದು ಇದಕ್ಕೆ ನಾವೆಲ್ಲ ಮುಖಂಡರು ಕೈಜೋಡಿಸಬೇಕು ಎಂದರು.
ಬಿ.ಎಚ್.ರಝಾಕ್ ಬಪ್ಪಳಿಗೆ ಮಾತನಾಡಿ ನಾವೆಲ್ಲರೂ ಶಾಂತಿ ಪ್ರಿಯರೇ ಇದ್ದೇವೆ. ಮುಂದಿನ ಜನಾಂಗಕ್ಕೆ ಜಾಗೃತಿ ಮೂಡಿಸಲು ಶಾಲಾ ಕಾಲೇಜು ದಿನಗಳಲ್ಲಿ ಪೊಲೀಸ್ ಇಲಾಖೆಯ ಮುಖಾಂತರ ಶಾಂತಿ, ಸಾಮರಸ್ಯ, ಕಾನೂನು ಅರಿವು ಮೂಡಿಸುವ ಸಭೆ ನಡೆಸಬೇಕು. ಮನೆ ಹಾಳಾಗುವಂತಹ ಡ್ರಗ್ಸ್ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದರು.
ಎಸ್‌ಡಿಪಿಐ ಮುಖಂಡ ಅಬ್ದುಲ್ ಹಮೀದ್ ಸಾಲ್ಮರ ಮಾತನಾಡಿ ಪೊಲೀಸ್ ಇಲಾಖೆಯಿಂದ ಕೆಲವು ಪ್ರಕರಣಗಳಿಗೆ ಎ-ಐಆರ್ ಆಗುತ್ತದೆ.ಎ-ಐಆರ್ ಆದ ಬಳಿಕ ಕೆಲವು ಪ್ರಭಾವಿಗಳಿಂದ ಅಡಚಣೆ ಉಂಟಾಗುತ್ತದೆ. ಎಫ್ಐಆರ್ ಬದಲು ಎಫ್ಐಆರ್ ಆಗಬೇಕು ಇದಕ್ಕೆ ಸೊಲ್ಯೂಷನ್ ಸಿಗಬೇಕು ಎಂದರು.

ರಫೀಕ್ ಮಾತನಾಡಿ ಎಲ್ಲಾ ದರ್ಮದಲ್ಲಿ ಕಾನೂನು ಪಾಲನೆ ಮಾಡುವವರು ಇರುತ್ತಾರೆ, ಮಾಡದವರೂ ಇರುತ್ತಾರೆ.ಪೊಲೀಸ್ ಇಲಾಖೆಗೆ ನಾವು ಸಹಕಾರ ಕೊಟ್ಟಾಗ ಕಾನೂನು ವ್ಯವಸ್ಥೆ ಸುಲಭವಾಗುತ್ತದೆ.ಯಾವುದೇ ಧರ್ಮ ಅಹಿತಕರ ಘಟನೆ ಮಾಡಲು ಹೇಳುವುದಿಲ್ಲ. ವಾಟ್ಸಾಪ್ ಯುನಿವರ್ಸಿಟಿಯಿಂದ ಸಮಾಜದ ಸ್ವಾಸ್ಥ್ಯ ಕದಡುತ್ತದೆ. ಪ್ರತೀ ಧರ್ಮದ ಗುರುಗಳು ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಉಪದೇಶ ನೀಡಬೇಕು ಎಂದರು.

ಕ್ರಿಶ್ಚಿಯನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಮಾತನಾಡಿ ಹಿಂದು ಹಾಗೂ ಮುಸ್ಲಿಮರ ಹಬ್ಬಗಳಿಗೆ ಸಂಬಂಧಿಸಿ ಯಾವಾಗಲೂ ಶಾಂತಿ ಸಭೆ ನಡೆಯುತ್ತದೆ.ಆದರೆ ಕ್ರಿಶ್ಚಿಯನ್ನರ ಹಬ್ಬಕ್ಕೆ ಸಂಬಂಧಿಸಿ ಯಾವುದೇ ಶಾಂತಿ ಸಭೆ ಇಷ್ಟರವರೆಗೆ ನಡೆಯಲಿಲ್ಲ. ಇದಕ್ಕೆ ಕ್ರಿಶ್ಚಿಯನ್ನರು ಶಾಂತಿಪ್ರಿಯರು ಎಂಬ ಕಾರಣವಿರಬಹುದು. ಆದುದರಿಂದ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಕೂಡ ಶಾಂತಿ ಪ್ರಿಯರಾದರೆ ಶಾಂತಿ ಸಭೆಯ ಅಗತ್ಯವಿಲ್ಲ ಎಂದರು. ಪೊಲೀಸ್ ಇಲಾಖೆಗೆ ಸಹಕಾರ ನೀಡಿದರೆ ಸಾಮರಸ್ಯ ಕಾಪಾಡಬಹುದು ಎಂದರು.

ಬಂದ್ ಆದರೆ ವರ್ತಕರಿಗೆ ತೊಂದರೆ: ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ.ರಫೀಕ್ ಮಾತನಾಡಿ ಗಲಾಟೆಯಿಂದ ಬಂದ್ ಆದರೆ ಅದರಿಂದ ತೊಂದರೆ ಅನುಭವಿಸುವುದು ವರ್ತಕರು.ಯಾವುದೇ ಹಬ್ಬಗಳು ಬಂದಾಗ ವರ್ತಕರಿಗೆ ವ್ಯಾಪಾರ ಆಗುತ್ತದೆ. ಇಂತಹ ಸಮಯದಲ್ಲಿ ವ್ಯಾಪಾರದ ಸಮಯದಲ್ಲಿ ನಮಗೆ ರಿಯಾಯಿತಿ ನೀಡಬೇಕು ಎಂದು ವರ್ತಕರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು.
ಪುತ್ತೂರು ನಗರ ಠಾಣಾ ಇನ್‌ಸ್ಪೆಕ್ಟರ್ ಜಾನ್ಸನ್ ಡಿ ಸೋಜ ಸ್ವಾಗತಿಸಿ ಪ್ರಾಸ್ತಾವಿಕಾಗಿ ಮಾತನಾಡಿ ಪುತ್ತೂರು ಉಪವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಬೀಟ್ ವ್ಯವಸ್ಥೆ ಮಾಡಲಾಗಿದೆ. ಬೀಟ್ ಪೊಲೀಸರ ಕಾಂಟಾಕ್ಟ್ ನಂಬರ್ ಎಲ್ಲರೂ ಇಟ್ಟುಕೊಳ್ಳಿ. ಏನಾದರೂ ಸಮಸ್ಯೆ ಬಂದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಇದು ಫಾರ್, ಎಮರ್ಜೆನ್ಸಿ, ಮೆಡಿಕಲ್ ಹಾಗೂ ಪೊಲೀಸ್ ಇಲಾಖೆಗೆ ಸಂಬಂಽಸಿದ ಸೇವೆ ಸಿಗುತ್ತದೆ.ಇದರಿಂದ ಸಾರ್ವಜನಿಕರ ಆಸ್ತಿ ಪಾಸ್ತಿ, ಪ್ರಾಣ ಹಾನಿ ರಕ್ಷಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಸುಳ್ಯ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಪುತ್ತೂರು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ನಗರಠಾಣಾ ಸಬ್ ಇನ್‌ಸ್ಪೆಕ್ಟರ್ ಆಂಜನೇಯ ರೆಡ್ಡಿ, ಸಂಪ್ಯ ಠಾಣಾ ಸಬ್ ಇನ್‌ಸ್ಪೆಕ್ಟರ್ ಜಂಬೂರಾಜ್ ಮಹಾಜನ್, ಬೆಳ್ಳಾರೆ ಠಾಣಾ ಸಬ್ ಇನ್‌ಸ್ಪೆಕ್ಟರ್ ಈರಯ್ಯ, ಪುತ್ತೂರು ನಗರಠಾಣಾ ಸಬ್ ಇನ್‌ಸ್ಪೆಕ್ಟರ್ ಸೇಸಮ್ಮ, ಸೇರಿದಂತೆ ಪುತ್ತೂರು ಉಪವಿಭಾಗದ ಪುತ್ತೂರು ನಗರ, ಸುಳ್ಯ, ಬೆಳ್ಳಾರೆ, ಸಂಪ್ಯ ಠಾಣಾ ಪೊಲೀಸ್ ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here