ಆರೋಗ್ಯ ರಕ್ಷಾ ಸಮಿತಿಯಿಂದ ತುರ್ತು ಸಭೆ – ಪೊಲೀಸರಿಗೆ ದೂರು ನೀಡುವ ನಿರ್ಣಯ
ಹಗಲು ರಾತ್ರಿ ಪಾಲಯದಲ್ಲಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಎಸ್ಪಿಗೆ ಮನವಿ ಚಿಂತನೆ
ಪುತ್ತೂರು: ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ಗೆ ಬಂದ ಕಡೆಯವರು ವಿನಃ ಕಾರಣ ಡಿ ಗ್ರೂಪ್ ನೌಕರರ ವಿರುದ್ಧ ಗಲಾಟೆ ಮಾಡಿದ ಘಟನೆ ಜೂ.5ರಂದು ನಡೆದಿದ್ದು, ಇದೀಗ ಡಿ ಗ್ರೂಪ್ ನೌಕರರು ತಮ್ಮ ರಕ್ಷಣೆಗಾಗಿ ಆರೋಗ್ಯ ರಕ್ಷಾ ಸಮಿತಿ ಮೊರೆ ಹೋದ ಮತ್ತು ಆರೋಗ್ಯ ರಕ್ಷಾ ಸಮಿತಿಯು ಜೂ.6ರಂದು ಬೆಳಗ್ಗೆ ತುರ್ತು ಸಭೆಯನ್ನು ನಡೆಸಿದ ಘಟನೆ ನಡೆದಿದೆ.

ಸರಕಾರಿ ಆಸ್ಪತ್ರೆಯ ಡಿ ಗ್ರೂಪ್ ನೌಕರ ಪುರಂದರ ಅವರಿಗೆ ಸ್ಕ್ಯಾನಿಂಗ್ಗೆ ಬಂದ ಕಡೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಎಬ್ಬಿಸಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಡಿ ಗ್ರೂಪ್ ನೌಕರರು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನೀಡಿದ ದೂರಿನಂತೆ ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮತ್ತು ಇತರ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ತುರ್ತು ಸಭೆಯನ್ನು ನಡೆಸಿದ್ದಾರೆ.