ಉಪ್ಪಿನಂಗಡಿಯಲ್ಲಿ ಶ್ರೀ ಶನೈಶ್ಚರ ಪೂಜೆ

0

ಬಲಿದಾನಕ್ಕೆ ಸಿದ್ಧ, ಪಲಾಯನಕ್ಕಲ್ಲ: ಅರುಣ್ ಕುಮಾರ್ ಪುತ್ತಿಲ

ಉಪ್ಪಿನಂಗಡಿ: ಪ್ರಸಕ್ತ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮುಸ್ಲಿಂ ತುಷ್ಠೀಕರಣ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂಗಳ ದಮನ ಕಾರ್ಯವನ್ನು ಪೊಲೀಸ್ ಬಲ ಪ್ರಯೋಗಿಸಿ ನಡೆಸುತ್ತಿದೆ. ಅದಕ್ಕಾಗಿ ಹಿಂದೂ ನಾಯಕರುಗಳಿಗೆ ಗಡಿಪಾರು, ಮಧ್ಯ ರಾತ್ರಿ ಮನೆ ಭೇಟಿ, ಸುಳ್ಳು ಕೇಸು ದಾಖಲು ಮೊದಲಾದ ಹಿಂಸೆಯನ್ನು ನೀಡಲಾರಂಭಿಸಿದೆ. ಆದರೆ ಬಲಿದಾನವಾದರೂ ಸರಿ ಪಲಾಯನ ಮಾಡಲಾರೆವೆಂಬ ನಿಲುವು ನಮ್ಮದಾಗಲಿ. ನಾವೆಲ್ಲಾ ಸಂಘಟಿತರಾಗಿ ಧರ್ಮ ಉಳಿಸುವ ಕಾರ್ಯ ಮಾಡೋಣ ಎಂದು ಹಿಂದೂ ಪರ ಸಂಘಟನೆಗಳ ಮುಖಂಡ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪ್ರವರ್ತಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಶ್ರೀ ಶನೈಶ್ಚರ ಪೂಜಾ ಸಮಿತಿ ಉಪ್ಪಿನಂಗಡಿ ಇದರ ಆಶ್ರಯದಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜೂ.7ರಂದು ನಡೆದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಸನಾತನ ಹಿಂದೂ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.


ಹಿಂದೂ ಸಮಾಜದ ಮೇಲೆ ಇಂದು ನೂರಾರು ಸವಾಲುಗಳಿದ್ದು, ನಮ್ಮ ಅಸ್ಮಿತೆಗೆ ಧಕ್ಕೆ ಬರುವ ವಿದ್ಯಾಮಾನಗಳು ಇಂದು ನಡೆಯುತ್ತಿವೆ. ಮತಾಂಧರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಂದಾಗ ಆತನಿಗೆ ರೌಡಿ ಹಣೆ ಪಟ್ಟಿ ಕಟ್ಟಿ ಹತ್ಯೆಯನ್ನು ಕಡೆಗಣಿಸಲಾಯಿತು. ಅದೇ ವೇಳೆ ಮುಸ್ಲಿಮ್ ಸಮುದಾಯದ ವ್ಯಕ್ತಿಯನ್ನು ಕೊಂದಾಗ ಸರಕಾರ ಆತನಿಗೆ ಮುಗ್ಧತೆಯ ಹಣೆಪಟ್ಟಿ ಕಟ್ಟಿ ಇಡೀ ಹಿಂದೂ ಸಮುದಾಯದ ನಾಯಕರನ್ನು ಬಗೆ ಬಗೆಯಲ್ಲಿ ಹಿಂಸಿಸಲು ಮುಂದಾಗುತ್ತಿದೆ. ರಾಜಕಾರಣ ಎಂದಿಗೂ ಶಾಶ್ವತವಲ್ಲ. ಧರ್ಮ ಯಾವತ್ತೂ ಶಾಶ್ವತ ಎಂಬ ಎಚ್ಚರಿಕೆ ಇರಲಿ. ತುಷ್ಠೀಕರಣದ ಈ ನೀತಿಯು ಸರಕಾರಕ್ಕೆ ದುಬಾರಿಯಾಗಲಿದೆ. ಗೋ ಹತ್ಯೆ ಕೆಲಸಗಳು ನಡೆದರೆ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ಉತ್ತರ ಕೊಡುವ ಕೆಲಸ ನಡೆಯಲಿದೆ ಎಂದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ನೇ ವರ್ಷಾಚರಣೆಯ ಅಂಗವಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ವತಿಯಿಂದ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ 100 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುವುದೆಂದು ಘೋಷಿಸಿದರು.


ಉಪನ್ಯಾಸ ನೀಡಿದ ನಿವೃತ ಪ್ರಾಂಶುಪಾಲರಾದ ಡಾ. ಬಿಲ್ಲಂಪದವು ಮಹಾಲಿಂಗ ಭಟ್, ಶ್ರವಣ ಕುಮಾರ ಹುಟ್ಟಿದ ಈ ಭರತ ಭೂಮಿಯಲ್ಲಿ ಇಂದು ಹೆತ್ತವರು ಮಕ್ಕಳಿಂದ ತಿರಸ್ಕೃತಗೊಂಡು ಅನಾಥಶ್ರಮವನ್ನು ಸೇರುತ್ತಿರುವುದು ಸಂಸ್ಕಾರ ಜೀವನದ ಅಧಃ ಪತನಕ್ಕೆ ಸಾಕ್ಷಿಯಾಗಿದೆ. ಹಣ ಸಂಪಾದನೆಯ ಗುರಿಸಾಧನೆಯ ಶಿಕ್ಷಣದಿಂದ ಗುಣ ಸಂಪಾದನೆಯ ಶಿಕ್ಷಣವನ್ನು ಮಕ್ಕಳಿಗೆ ನೀಡುವುದು ಇಂದಿನ ಅಗತ್ಯವಾಗಿದೆ. ಹಿರಿಯರ ದಾನ- ಧರ್ಮವನ್ನೊಳಗೊಂಡ ಸಂಸ್ಕಾರಯುತ ಬದುಕು ನಮಗೆ ಆದರ್ಶವಾಗಬೇಕು ಎಂದರು.
ಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಹೇರಂಭ ಶಾಸ್ತ್ರಿ ಮಾತನಾಡಿ, ಕಡಿಮೆ ಮಕ್ಕಳನ್ನು ಹೊಂದುವುದು ಮನೆಗೂ ದೇಶಕ್ಕೂ ಶ್ರೇಯಸ್ಕರವಲ್ಲ ಎನ್ನುವುದು ಇದೀಗ ಎಲ್ಲರ ಅನುಭವಕ್ಕೆ ಬಂದಿರುವುದರಿಂದ ಪ್ರತಿಕುಟುಂಬವೂ ಹೆಚ್ಚು ಮಕ್ಕಳನ್ನು ಹೊಂದಬೇಕಾದ ಅಗತ್ಯತೆ ಇದೆ ಎಂದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ ಎಂ. ಮಾತನಾಡಿ, ತಂತ್ರಜ್ಞಾನದಲ್ಲಿ ನಾವಿಂದು ಸಾಕಷ್ಟು ಬೆಳೆದಿದ್ದೇವೆ. ಆದರೆ ಮಾನವರಾಗಿ ಬದುಕುವುದನ್ನು ಮಾತ್ರ ಮರೆತಿದ್ದೇವೆ. ಮನುಜರಾದ ನಾವೆಲ್ಲಾ ದೇವರ ಸೃಷ್ಟಿಯಾಗಿದ್ದು, ನಾವೆಲ್ಲಾ ಒಂದು ಎಂಬ ಮನೋಭಾವದೊಂದಿಗೆ ಒಗ್ಗಟ್ಟಾಗಿ ಬದುಕಬೇಕಾಗಿದೆ ಎಂದರು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಮಾತನಾಡಿ, ಗಡಿ ರೇಖೆಯಲ್ಲಿ ಗುರುತು ಮಾಡುವ ದೇಶ ನಮ್ಮದಲ್ಲ. ನಮ್ಮ ಭಾರತವು ಇಡೀ ವಿಶ್ವಕ್ಕೆ ಸಂಸ್ಕಾರ ನೀಡಿದ ದೇಶವಾಗಿದೆ. ಅದನ್ನು ಅರಿತುಕೊಂಡು ನಾವೆಲ್ಲಾ ಸಂಸ್ಕಾರಯುತರಾಗಿ ಬಾಳಬೇಕು ಎಂದರು.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮಹೇಂದ್ರವರ್ಮ ಮಾತನಾಡಿ, ಮಕ್ಕಳಿಗೆ ಧಾರ್ಮಿಕ ಚಿಂತನೆಯನ್ನು ಹೇಳಿಕೊಡುವ ಕಾರ್ಯ ನಮ್ಮಿಂದಾಗಬೇಕು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದು, ಇದರೊಂದಿಗೆ ಸುಮಾರು 20 ಲಕ್ಷಕ್ಕೂ ಹೆಚ್ಚು ಹಣವನ್ನು ವಿವಿಧ ಸಮಾಜಮುಖಿ ಕಾರ್ಯಗಳಿಗೆ ಟ್ರಸ್ಟ್ ವಿನಿಯೋಗಿಸಿದೆ ಎಂದರು.


ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀರಾಮ ಭಟ್ ಪಾತಾಳ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ನಟೇಶ್ ಪೂಜಾರಿ, ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ಡಿ. ಚಂದಪ್ಪ ಮೂಲ್ಯ, ಜಯಂತ ಪೊರೋಳಿ ಉಪಸ್ಥಿತರಿದ್ದರು. ವೇ.ಮೂ. ಹರೀಶ್ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಧನ್ಯಕುಮಾರ್ ರೈ, ವಿದ್ಯಾಧರ ಜೈನ್, ವಿಶ್ವನಾಥ ಶೆಟ್ಟಿ ಕಂಗ್ವೆ, ಕರುಣಾಕರ ಸುವರ್ಣ, ಸುಜಾತ ಕೃಷ್ಣ ಆಚಾರ್ಯ, ಹರೀಶ್ ನಾಯಕ್ ನಟ್ಟಿಬೈಲ್, ಕೆ. ಜಗದೀಶ್ ಶೆಟ್ಟಿ, ಕೈಲಾರು ರಾಜಗೋಪಾಲ ಭಟ್, ಶರತ್ ಕೋಟೆ, ರವೀಶ್ ಎಚ್. ಟಿ., ಕೆ ಸುಧಾಕರ ಶೆಟ್ಟಿ, ಚಂದ್ರಶೇಖರ ಮಡಿವಾಳ, ರಾಜೇಶ್ ಶಾಂತಿನಗರ, ಪೂಜಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಿದಾನಂದ ಪಂಚೇರು, ಕೋಶಾಧಿಕಾರಿ ರಾಜಗೋಪಾಲ ಹೆಗ್ಡೆ, ಸಂಘಟನಾ ಕಾರ್ಯದರ್ಶಿಗಳಾದ ಸುಜೀತ್ ಬೊಳ್ಳಾವು, ರಾಜೇಶ್ ಕೊಡಂಗೆ, ಪುತ್ತಿಲ ಪರಿವಾರದ ರಮೇಶ್ ಬಂಡಾರಿ ಲಕ್ಷ್ಮೀನಗರ, ಜಯರಾಮ ಆಚಾರ್ಯ, ಹರಿಕೃಷ್ಣ ಬಜತ್ತೂರು, ಕುಶಾಲಪ್ಪ ಹಿರೇಬಂಡಾಡಿ, ರವೀಂದ್ರ ರೈ ಹಿರೇಬಂಡಾಡಿ, ರಂಜಿತ್ ಅಡೆಕ್ಕಲ್, ಗಿರೀಶ ಹೆಗ್ಡೆ ಮರಿಕೆ, ಸಂತೋಷ್ ರಾಮನಗರ, ನವೀನ್ ಬಂಡಾಡಿ, ಕಿಶೋರ್ ಜೋಗಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್ ನೆಕ್ಕಿಲಾಡಿ ಸ್ವಾಗತಿಸಿದರು. ಲೊಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here