ಪುತ್ತೂರು: ತಾಲೂಕಿನ ಪುಷ್ಠಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿಗೆ ಜೂ.11ರಂದು ಅನಿರೀಕ್ಷಿತ ಭೇಟಿ ನೀಡಿದ ದ.ಕ ಜಿ.ಪಂ, ಸಿಇಓ ಡಾ.ಆನಂದ ಕೆ. ಶಾಲೆಯಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತರಗತಿ ಕೋಣೆಗೆ ಪ್ರವೇಶಿಸಿ ಮಕ್ಕಳನ್ನು ಮಾತನಾಡಿಸಿದರು.
ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಮಕ್ಕಳನ್ನು ಹತ್ತಿರ ಕೂರಿಸಿ ಸಾಂತ್ವನ ಹೇಳಿ ಮಕ್ಕಳೊಂದಿಗೆ ಬಿಸಿ ಊಟದ ರುಚಿ ಸವಿದರು. ಪಿಎಂಶ್ರೀ ಚಟುವಟಿಕೆಗಳು, ಶಾಲೆಯ ಸ್ವಚ್ಛತೆ, ಮಿಯಾವಾಕಿ ವನ, ಗ್ರಂಥಾಲಯ, ಕಂಪ್ಯೂಟರ್ ಕಲಿಕೆ,ಯೋಗ,ಕರಾಟೆ, ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ನುಡಿಯನ್ನಾಡಿದರು. ಭೇಟಿ ಸಂದರ್ಭದಲ್ಲಿ ಪುತ್ತೂರು ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ನರಿಮೊಗರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಹಾಗೂ ಶಿಕ್ಷಕವೃಂದ ಉಪಸ್ಥಿತರಿದ್ದು ಮಾಹಿತಿ ನೀಡಿದರು.
