ವಿವಿಧ ಧಾರ್ಮಿಕ,ಸಾಂಸ್ಕೃತಿಕ,ಕ್ರೀಡಾಕೂಟ,ಸಾರ್ವಜನಿಕ ಅನ್ನಸಂತರ್ಪಣೆ
ಪುತ್ತೂರು: ಮಾಯಿದೆ ದೇವುಸ್ ವಿದ್ಯಾಸಂಸ್ಥೆಯ ಆಡಳಿತಗೊಳಪಟ್ಟ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ಮಿತ್ರರ ಗಣೇಶೋತ್ಸವಕ್ಕೆ ಪ್ರಸ್ತುತ ವರ್ಷ 43ರ ಸಂಭ್ರಮವಾಗಿದೆ.
1983ರಲ್ಲಿ ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟು, ವಿದ್ಯಾರ್ಥಿ ಮಿತ್ರರಿಂದಲೇ ನಡೆಸಲ್ಪಡುವ ಏಕೈಕ ಗಣೇಶೋತ್ಸವ ಈ ಬಾರಿ ಆ.27 ಹಾಗೂ 28 ರಂದು ಎರಡು ದಿನಗಳ ಕಾಲ ದರ್ಬೆ ವಿನಾಯಕ ನಗರದಲ್ಲಿ ವಿಜ್ರಂಭಣೆಯಿಂದ ಪುತ್ತೂರಿನ ಸಮಸ್ತ ನಾಗರಿಕರ ಸಹಕಾರದಿಂದ ಜರಗಲಿರುವುದು ಎಂದು ಮುಕ್ರಂಪಾಡಿ ಧರ್ಮಶ್ರೀ ನಗರದ ವಿಘ್ನೇಶ ವಠಾರದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಸಮಿತಿಯ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಫಿಲೋಮಿನಾ ಕಾಲೇಜಿನ ಪ್ರತಿಭಾವಂತ ರ್ಯಾಂಕ್ ವಿಜೇತರಿಗೆ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿನ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್ಯಕ್ರಮ, ಪ್ರಸಕ್ತ ಸಾಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಗ್ಗಾ-ಜಗ್ಗಾಟ ಸ್ಪರ್ಧೆ, ಹಿರಿಯ ವಿದ್ಯಾರ್ಥಿ, ವಿದ್ಯಾರ್ಥಿ ಮಿತ್ರರಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಮ್ಮ ಕಲಾವಿದರು ಮಂಗಳೂರು ಇವರ ಆಶ್ರಯದಲ್ಲಿ ಹಾಸ್ಯ ದಿಗ್ಗಜರಾದ ಸುಂದರ ರೈ ಮಂದಾರ ಹಾಗೂ ದೀಪಕ್ ರೈ ಪಾಣಾಜೆರವರ ನೇತೃತ್ವದಲ್ಲಿ ತುಳು ಹಾಸ್ಯಮಯ ನಾಟಕ `ಜಗತ್ತೇ ಶೂನ್ಯ ಸ್ವಾಮಿ’ಪ್ರದರ್ಶನಗೊಳ್ಳಲಿದ್ದು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಪೂರ್ವಭಾವಿ ಸಭೆಯಲ್ಲಿ ಫಿಲೋಮಿನಾ ಗಣೇಶೋತ್ಸವ ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ದುರ್ಗಾಪ್ರಸಾದ್, ಹಿರಿಯ ವಿದ್ಯಾರ್ಥಿ ಮಿತ್ರರಾದ ಸುಕುಮಾರ್ ಪರ್ಲಡ್ಕ, ವಿಕ್ರಂ ಆಳ್ವ, ಪ್ರಜ್ವಲ್ ಮುಕ್ರಂಪಾಡಿ, ಹರ್ಷ ಕುಮಾರ್, ಚಂದನ್ ಕುಮಾರ್, ನಿತೇಶ್, ಆಕಾಶ್, ಸಾಯಿಕಿರಣ್, ರಚಿತಾ, ಪ್ರತೀಕ್ ಸಹಿತ ಹಲವರು ಉಪಸ್ಥಿತರಿದ್ದರು., ಆನ್ವೇಷ್ ರೈ, ಕೀರ್ತೇಶ್ ಕಲ್ಲಾರೆ, ಹೃದಯ್ ಪರ್ಲಡ್ಕ, ಲಿಖಿತ್ ರೈ, ನಂದನ್ ಕುಮಾರ್, ಚರಣ್ ಸಹಿತ ಹಲವರು ಉಪಸ್ಥಿತರಿದ್ದರು.