ನಾವು ಸುಳ್ಳು ಭರವಸೆ ಕೊಟ್ಟು ಪಿಕ್ಕಾಸು ಹಾಕಿ ಹೋಗುವುದಿಲ್ಲ: ಶಾಸಕ ಅಶೋಕ್ ರೈ
ಪುತ್ತೂರು:ಜನರಿಗೆ ರಾಜಕಾರಣಿಗಳು ಸುಳ್ಳು ಭರವಸೆ ಕೊಡಬಾರದು, ಕೆಲಸ ಆಗುವುದಿದ್ದರೂ, ಆಗದ ಕೆಲಸವಾದರೂ ಹೇಳಿಬಿಡಬೇಕು, ರಾಜಕಾರಣಿಗಳ ಸುಳ್ಳು ಭರವಸೆಯನ್ನು ಜನ ನಂಬಿ ಮೋಸ ಹೋಗುತ್ತಿದ್ದಾರೆ. ಆ ರೀತಿ ಯಾರೂ ಮಾಡಬಾರದು, ನಾವು ಯಾರಿಗೂ ಸುಳ್ಳು ಭರವಸೆ ಕೊಟ್ಟಿಲ್ಲ, ಕೊಡುವುದೂ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಅರ್ಯಾಪು ಗ್ರಾಮದ ಕಲ್ಲಕಟ್ಟ ರಾಜನ್ ಗುಳಿಗದೈವ ದೈವಸ್ಥಾನಕ್ಕೆ ತೆರಳುವ ನೂತನ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ರಸ್ತೆಗೆ ಶಾಸಕರು ಹತ್ತು ಲಕ್ಷ ಅನುದಾನವನ್ನು ನೀಡಿದ್ದರು.
ಗ್ರಾಮದ ಕೊಲ್ಯ ಎಂಬಲ್ಲಿ ಕಾಲನಿಗೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಹಿಂದಿನವರು ಪಿಕ್ಕಾಸು ಹೋಗಿದ್ದಾರೆ ಚಿಕ್ಕಾಸೂ ನೀಡಿಲ್ಲ. ಪಿಕ್ಕಾಸು ಹಾಕಿ ಶಿಲಾನ್ಯಾಸ ಮಾಡಿದಾಗ ತಡೆಗೋಡೆ ಆಗಿಯೇ ಆಗುತ್ತದೆ ಎಂದು ಜನ ನಂಬಿದ್ದರು. ನಂಬಿದ ಬಡ ಜನತೆಗೆ ಮೋಸ ಮಾಡುವುದು ದೇವರು ಮೆಚ್ಚದ ಕೆಲಸವಾಗಿದೆ. ವೋಟಿಗೋಸ್ಕರ ಜನರ ಭಾವನೆಗಳ ಜೊತೆ ಚೆಲ್ಲಾಟವಾಡಬಾರದು ಎಂದು ಹೇಳಿದ ಶಾಸಕರು ಬಡ ಜನತೆಗೆ ಮೋಸ ಮಾಡಿದರೆ ದೇವರು ತಕ್ಕ ಶಿಕ್ಷೆ ಕೊಟ್ಟೇ ಕೊಡ್ತಾನೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು ಆದ ಬಳಿಕ ಪುತ್ತೂರು ಬದಲಾಗಲಿದೆ..
ಪುತ್ತೂರಿಗೆ ಮೆಡಿಕಲ್ ಕಾಲೇಜು ಬಂದಿದೆ, ಇನ್ನು ಆರಂಭವಾದ ಬಳಿಕ ಪುತ್ತೂರು ನಗರ ಸೇರಿದಂತೆ ತಾಲೂಕಿನ ಚಿತ್ರಣವೇ ಬದಲಾಗಲಿದೆ. ಮಣಿಪಾಲ ಎಂಬ ಕುಗ್ರಾಮ ಮೆಡಿಕಲ್ ಕಾಲೇಜು ಆದ ಬಳಿಕ ಯಾವ ಮಟ್ಟದಲ್ಲಿ ಅಭಿವೃದ್ದಿಯಾಗಿದೆ ಎಂಬುದನ್ನು ನಾವು ಗಮನಿಸಬೇಕು. ಮೆಡಿಕಲ್ ಕಾಲೇಜು ಆದ ಬಳಿಕ ಪುತ್ತೂರಿನ ಎಲ್ಲಾ ವ್ಯವಹಾರಿಕ ಕ್ಷೇತ್ರವೂ ಉನ್ನತಿಗೇರಲಿದೆ. ನಗರದ ರಿಕ್ಷಾ ಚಾಲಕರಿಂದ ಹಿಡಿದು ಸಣ್ಣ ಕ್ಯಾಂಟೀನ್ ನಡೆಸುವವರಿಗೂ ಇಲ್ಲಿ ಉತ್ತಮ ವ್ಯವಹಾರ ಆಗಲಿದೆ. ನಗರದಲ್ಲಿ ಜನ ಸಂಚಾರ ಅಧಿಕವಾದರೆ ಎಲ್ಲರಿಗೂ ವ್ಯಾಪಾರ, ವಹಿವಾಟು ಹೆಚ್ಚಾಗಲಿದೆ ಇದರಿಂದ ಕ್ಷೇತ್ರವೂ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.
ಪುತ್ತೂರಿಗೆ ಆಯುರ್ವೇದ ಕಾಲೇಜು
ಪುತ್ತೂರಿನ ಮೆಡಿಕಲ್ ಕಾಲೇಜು ಸಮೀಪವೇ ಅದೇ ಜಾಗದಲ್ಲಿ ಆಯುರ್ವೇದ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಆಯುರ್ವೇದ ಮೆಡಿಕಲ್ ಕಾಲೇಜಿಗೆ ಅನುದಾನವನ್ನು ನೀಡುವ ಬಗ್ಗೆ ಸರಕಾರದಿಂದ ಭರವಸೆ ಸಿಕ್ಕಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಕೊಟ್ಟ ಮಾತನ್ನು ಉಳಿಸಿಕೊಂಡ ಏಕೈಕ ಶಾಸಕ: ಕಾವು ಹೇಮನಾಥ ಶೆಟ್ಟಿ
ಕಳೆದ ಚುನಾವಣೆಯ ಸಂದರ್ಭದಲ್ಲಿ ಶಾಸಕರು ನೀಡಿದ ಬಹುತೇಕ ಭರವಸೆಗಳು ಈಡೇರಿದೆ. ಕುಡಿಯುವ ನೀರು, ಮೆಡಿಕಲ್ ಕಾಲೇಜು, ದೇವಸ್ಥಾನಗಳ ಅಭಿವೃದ್ದಿ ಸೇರಿದಂತೆ ಎಲ್ಲಾ ರಂಗದಲ್ಲೂ ಯಸಶ್ವಿಯಾಗಿ ಮುನ್ನಡೆಯುತ್ತಿದೆ, ಕೊಟ್ಟ ಮಾತನ್ನು ಉಳಿಸಿಕೊಂಡ ಏಕೈಕ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು. ಕಲ್ಲಕಟ್ಟ ರಾಜನ್ ಗುಳಿಗ ದೈವಸ್ಥಾನದ ರಸ್ತೆಗೆ ಅನುದಾನ ಕೊಡಿ ಎಂದು ಈ ಭಾಗದ ಜನರು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಆದರೆ ಈ ಬಾರಿ ಬೇಡಿಕೆ ಈಡೇರಿದೆ. ಅಭಿವೃದ್ದಿ ಪರ ಚಿಂತನೆಯುಳ್ಳ ಶಾಸಕರಿಂದ ಮಾತ್ರ ಯಾವುದೇ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂಬುದಕ್ಕೆ ಅಶೋಕ್ ರೈ ಸಾಕ್ಷಿಯಾಗಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಇನ್ನಷ್ಟು ಅಭಿವೃದ್ದಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜನ್ ಗುಳಿಗ ದೈವಸ್ಥಾನ ರಾಧಾಕೃಷ್ಣ ರೈ ಏಳ್ನಾಡು ಗುತ್ತು, ಕಾರ್ಯದರ್ಶಿ ನವೀನ್ ಪೂಜಾರಿ ಕಿನ್ನಿಮಜಲು, ಗ್ರಾಪಂ ಸದಸ್ಯರಾದ ಹರೀಶ್ ನಾಯ್ಕ್, ಯತೀಶ್ ದೇವಗೌಡ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಕೈಕಾರ ,ಕಿರಣ್ ರೈ ಪುಂಡಿಕಾಯಿ, ಬೂತ್ ಅಧ್ಯಕ್ಷ ಸುಹೈಲ್, ರಝಾಕ್ ಸಂಟ್ಯಾರ್, ಹಾರಿಸ್ ಸಂಟ್ಯಾರ್, ಫಾರೂಕ್ ಸಂಟ್ಯಾರ್, ವಲಯ ಕಾರ್ಯದರ್ಶಿ ಇಸ್ಮಾಯಿಲ್ ಡೆಂಜಿಬಾಗಿಲು, ಕೋಶಾಧಿಕಾರಿ ಪುಷ್ಪಾ ಡಿಸೋಜಾ ಮರಿಕೆ, ಮಹೇಶ್ ಸಂಪ್ಯ, ಜನಾರ್ಧನ ಸಂಟ್ಯಾರ್, ಉಪೇಂದ್ರ ಸಂಟ್ಯಾರ್, ಮಹೇಶ್ ಕಲ್ಲಕಟ್ಟ ಮತ್ತಿತರರು ಉಪಸ್ತಿತರಿದ್ದರು. ಗ್ರಾ ಪಂ ಸದಸ್ಯರಾದ ನೇಮಾಕ್ಷ ಸುವರ್ಣಮಗಿರೆ ಸ್ವಾಗತಿಸಿ ವಂದಿಸಿದರು.