ಪುತ್ತೂರುಳ್ತಿಗೆ ಗ್ರಾಮದಲ್ಲಿ ತಲೆದೋರಿರುವ ಕೆಎಸ್ಆರ್ಟಿಸಿ ಬಸ್ ಸಮಸ್ಯೆಯನ್ನು ಸರಿಪಡಿಸುವಂತೆ ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ಅವರು ಅಧಿಕಾರಿಗಳನ್ನು ಭೇಟಯಾಗಿ ಒತ್ತಾಯಿಸಿದ್ದಾರೆ.
ಕೆಎಸ್ಆರ್ಟಿಸಿ ಪುತ್ತೂರು ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ ಜೈಶಾಂತ್ ಕುಮಾರ್ ಹಾಗೂ ಪುತ್ತೂರು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಅವರನ್ನು ಜೂ.16ರಂದು ಭೇಟಿ ಮಾಡಿದ ಪ್ರದೀಪ್ ಕುಮಾರ್ ಪಾಂಬಾರು ಅವರು ಪುತ್ತೂರು-ಪೆರ್ಲ೦ಪಾಡಿ-ಬೆಳ್ಳಾರೆ ಹಾಗೂ ಪುತ್ತೂರು-ಪೆರ್ಲ೦ಪಾಡಿ-ಪಾಂಬಾರು-ಬೆಳ್ಳಾರೆ ಬಸ್ಸು ಸಂಚಾರ ವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಬೆಳಿಗ್ಗೆ 8.15ಕ್ಕೆ ಪುತ್ತೂರು ಬಸ್ಸು ನಿಲ್ದಾಣದಿಂದ ಬಿಡುವ ಪುತ್ತೂರು-ಪೆರ್ಲಂಪಾಡಿ-ಬೆಳ್ಳಾರೆ-ಕಲ್ಪಣೆ ಬಸ್ಸು ಹಾಗೂ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಬಸ್ಸು ನಿಲ್ದಾಣದಿಂದ ಬಿಡುವ ಪುತ್ತೂರು-ಪೆರ್ಲಂಪಾಡಿ-ಪಾಂಬಾರು-ಬೆಳ್ಳಾರೆ-ಕಲ್ಪಣೆ ಬಸ್ಸು ಸುಮಾರು ಎರಡು ತಿಂಗಳುಗಳಿಂದ ಈ ರಸ್ತೆಯಲ್ಲಿ ಚಲಿಸುತ್ತಿಲ್ಲ.
ಇದು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾದ ಬಸ್ಸಾಗಿರುವುದರಿಂದ ಇದರ ಸಂಚಾರವನ್ನು ಪುನರ್ ಸ್ಥಾಪಿಸುವಂತೆ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಪಾಂಬಾರು ಒತ್ತಾಯಿಸಿದರು.ಅದಲ್ಲದೆ ಪಾಂಬಾರು ಬಸ್ಸಿಗೆ `ಪಾಂಬಾರು’ ಎಂಬ ನಾಮಫಲಕವನ್ನು ಅಳವಡಿಸಿಲ್ಲ, ಇದನ್ನು ಕೂಡ ಸರಿಪಡಿಸುವಂತೆ ಅವರು ಒತ್ತಾಯಿಸಿದರು.
ಸುಮಾರು 30 ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳ, ಖಾಸಗಿ ಉದ್ಯೋಗಿಗಳ ಸಾರ್ವಜನಿಕರ ಜೀವನಾಡಿಯಾಗಿದ್ದ ಈ ಬಸ್ಸು ಏಕಾಏಕಿ ರದ್ದುಗೊಂಡಿರುತ್ತದೆ.
ಪುತ್ತೂರು ಪೆರ್ಲಂಪಾಡಿ, ಬೆಳ್ಳಾರೆ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ಸುಗಳು ಹಿಂದಿನಂತೆ ಸಮಯಕ್ಕೆ ಸರಿಯಾಗಿ ಆಗಮಿಸಿ ಪ್ರಯಾಣಿಕರಿಗೆ ಸದ್ಬಳಕೆಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ತಾನು ಮನವಿ ಮಾಡಿದ್ದೇನೆ.
ಈ ಕುರಿತು ಸಮಾಲೋಚಿಸಿದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು, ಈ ತಿಂಗಳೊಳಗೆ ಈ ಎಲ್ಲ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿರುವುದಾಗಿ ಪ್ರದೀಪ್ ಕುಮಾರ್ ಪಾಂಬಾರು ತಿಳಿಸಿದ್ದಾರೆ.