ಪುತ್ತೂರು: ಗಂಡ, ಅತ್ತೆ, ನಾದಿನಿಯರು ಹಾಗೂ ಮೈದುನ ಸೇರಿಕೊಂಡು ಹೆಚ್ಚಿನ ವರದಕ್ಷಿಣೆ ಕೇಳಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಒಡ್ಡಿರುವ ಆರೋಪ ಹಾಗೂ ಗಂಡ ತ್ರಿವಳಿ ತಲಾಕ್ ನೀಡಿರುವ ಬಗ್ಗೆ ಮಹಿಳೆಯೋರ್ವರು ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ಕುಕ್ಕಾಜೆ ಅಬ್ದುಲ್ ಖಾದರ್ರವರ ಪುತ್ರಿ ಶ್ರೀಮತಿ ಮಮ್ತಾಜ್ ರವರು ತನ್ನ ಗಂಡ ಕೊಡಿಪಾಡಿ ಜೋಳ ನಿವಾಸಿ ಮುಹಮ್ಮದ್ ಶರೀಫ್, ಅತ್ತೆ ಖತೀಜಾ,ಮೈದುನ ಅಹಮದ್ ಸಿರಾಜುಲ್ ಮುನೀರ್, ನಾದಿನಿಯರಾದ ಸುಮಯ್ಯ, ಆಯೀಷಾ ಎಂಬವರ ಮೇಲೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನಾಂಕ 24.5.2016ರಂದು ಕೊಡಿಪಾಡಿ ಜೋಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮುಹಮ್ಮದ್ ಶರೀಫ್ ರವರ ಜೊತೆ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ನನ್ನ ವಿವಾಹವಾಗಿತ್ತು. ಮದುವೆಯ ಸಂದರ್ಭದಲ್ಲಿ ಗಂಡನ ಕಡೆಯವರ ಬೇಡಿಕೆಯಂತೆ ನನ್ನ ತಂದೆಯವರು 80 ಪವನ್ ಚಿನ್ನಾಭರಣ, ಗಂಡನಿಗೆ ಬೆಲೆಬಾಳುವ ಒಂದು ಕೈಗಡಿಯಾರ, ಚಿನ್ನದ ನಾಣ್ಯ ನೀಡಿರುತ್ತಾರೆ. ಅಲ್ಲದೆ ನನ್ನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟ ಎರಡು ಲಕ್ಷ ರೂಪಾಯಿ ಹಣವನ್ನು ಗಂಡನ ಕೈಯಲ್ಲಿ ಕೊಟ್ಟಿರುತ್ತಾರೆ. ಮದುವೆಯ ಸಂದರ್ಭದಲ್ಲಿ ನಾನು ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ವ್ಯಾಸಂಗ ಮುಂದುವರಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ಹೇಳಿದ್ದರು. ಕಾಲೇಜು ಆರಂಭವಾದ ವೇಳೆ ನನ್ನ ತಂದೆ ಕೊಟ್ಟಿರುವ ಹಣದಲ್ಲಿ ಫೀಸ್ ಕಟ್ಟಲು ಹಣ ಕೇಳಿದಾಗ, ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ವಿದ್ಯಾಭ್ಯಾಸಕ್ಕೆ ತಡೆಯೊಡ್ಡಿರುತ್ತಾರೆ. ಅಲ್ಲಿಂದ ಪ್ರತಿ ದಿನ ನನ್ನ ಗಂಡ, ಅತ್ತೆ, ಮೈದುನ ನಾದಿನಿಯರು ಹೆಚ್ಚಿನ ವರದಕ್ಷಿಣೆ ಕೇಳಿ ನನಗೆ ಪ್ರತಿದಿನ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿರುತ್ತಾರೆ ಜೂ.4ರಂದು ಗಂಡ ನನ್ನ ತವರು ಮನೆಗೆ ಬಂದಿದ್ದು ಅಲ್ಲಿ ಅವಾಚ್ಯ ಶಬ್ದಗಳಿಂದ ನನಗೂ ನನ್ನ ತಾಯಿಗೂ ಬೈದು, ನಾನು ನಿನಗೆ ತಲಾಕ್ ನೀಡಿದ್ದೇನೆ ಎಂದು ಮೂರು ಸಲ ತಲಾಕ್ ಎಂದು ಉಚ್ಚರಿಸಿದ್ದು, ಇನ್ನು ನೀನು ನನ್ನ ಪತ್ನಿ ಅಲ್ಲ ನಿನಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ. ಜೂ.6 ರಂದು ನನ್ನ ಮಾವ ಗಂಡನಿಗೆ ಫೋನ್ ಮಾಡಿ ನನ್ನ ಅಮ್ಮನಿಗೆ ಸೇರಬೇಕಾದ ಸುಮಾರು 15 ಲಕ್ಷ ಹಣ ಕೊಡು ಎಂದು ಕೇಳಿದ್ದಕ್ಕೆ ಜೂ.7 ರಂದು ಗಂಡ ನನ್ನ ತವರು ಮನೆಗೆ ಬಂದು ನನ್ನ ಅಮ್ಮನಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಮಮ್ತಾಜ್ರವರು ದೂರಿನಲ್ಲಿ ಆರೋಪಿಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ವಿನಂತಿಸಿದ್ದಾರೆ.
ಪೊಲೀಸರು ಕಲಂ 85, 115(2), 352, 351 (3), 3 (5) ಬಿಎನ್ಎಸ್, ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3,4, ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ರಕ್ಷಣೆ ಕಾಯ್ದೆಯಡಿ ಪ್ರಕರಣ (0042/2025) ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.