ಕಡಬ: ಇಲ್ಲಿನ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮವು ಜೂನ್ 30ರಂದು ಕಡಬ ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರಿನ ವಕೀಲರಾದ ಲತನ್ ರೈ ಗುತ್ತುಪಾಲು ದೀಪ ಬೆಳಗಿಸಿ ಉದ್ಘಾಟಿಸಿ ನಾಯಕತ್ವದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಪ್ರಾಮುಖ್ಯವಾಗಿದೆ. ತಂದೆ-ತಾಯಿಯನ್ನು ಪ್ರೀತಿಸಿ ,ಗೌರವಿಸಿ. ಹಿರಿಯರ ಶಿಕ್ಷಕರ ಮಾತನ್ನು ಕೇಳುವವರ ಜೀವನ ಉತ್ತಮವಾಗಿರುತ್ತದೆ. ದುಶ್ಚಟಗಳಿಂದ ದೂರ ಇರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಷಯದಲ್ಲಿ ಬಿ.ಇ ಪದವೀಧರ ಭರತ್.ಕೆ. ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಸಂಸ್ಥೆಯಲ್ಲಿ ಆದ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಸವಿತಾ ಶಿವ ಸುಬ್ರಮಣ್ಯ ಭಟ್ ವಹಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯ ಕೋಶಾಧಿಕಾರಿ ಲಿಂಗಪ್ಪ ಜೆ ಹಾಗೂ ಸದಸ್ಯರಾದ ಶಿವಪ್ರಸಾದ್ ಮೈಲೇರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪೂರ್ವಿತ್ ಸ್ವಾಗತಿಸಿ, ಹರಿಪ್ರಿಯ ಹರಿದಾಸ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ಪ್ರತಿಜ್ಞಾವಿಧಿ ಬೋಧಿಸಿದರು. ರಕ್ಷಾ ಎಂ.ಜೆ.ಕಾರ್ಯಕ್ರಮ ನಿರೂಪಿಸಿದರು.